ಸಾರಾಂಶ
ಬ್ಯಾಡಗಿ: ನೌಕರರು ಸಾರ್ವಜನಿಕರ ಪರವಾಗಿ ಕಾಳಜಿಯಿಂದ ಕೆಲಸ ಮಾಡಬೇಕು. ತಮ್ಮ ಕೆಲಸಗಳಲ್ಲಿ ಬದ್ಧತೆ ತೋರಿಸಬೇಕು. ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಹಾಗೂ ಅಧಿಕಾರಿಗಳು ಜನಸ್ನೇಹಿಯಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಂದಾಯ ವಿಷಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಮಳೆ ಉತ್ತಮವಾಗುತ್ತಿದ್ದು, ರೈತರು ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅವರು ಕೆಲಸದ ನಿಮಿತ್ತ ಕಚೇರಿಗೆ ಬಂದಾಗ ಆದ್ಯತೆ ಮೇರೆಗೆ ಕೆಲಸ ಮಾಡಿಕೊಡಿ. ನಿಗದಿತ ಅವಧಿಯೊಳಗೆ ಕೆಲಸ ಆಗದಿದ್ದ ಪಕ್ಷದಲ್ಲಿ ಇಂತಹ ದಿನದಂದು ನಿಮ್ಮ ಕೆಲಸವಾಗುತ್ತದೆ ಎಂದು ತಿಳಿಸಬೇಕು. ಅದು ಬಿಟ್ಟು ಸಂಜೆಯವರೆಗೂ ಕಚೇರಿಯಲ್ಲೇ ಜನರು ಕಾಲ ಕಳೆಯುವಂತಾಗಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ದಿನೇ ದಿನೇ ಮಳೆ ಹೆಚ್ಚಾಗುತ್ತಿರುವುದರಿಂದ ರೈತರ ಬೆಳೆಗಳಿಗೆ ಹಾನಿ ಉಂಟಾಗಬಹುದು. ಮನೆಗಳು ಬಿದ್ದು ಸಂಕಷ್ಟಕ್ಕೆ ಒಳಗಾಗಬಹುದು. ಈ ಕುರಿತು ಎಚ್ಚರವಾಗಿರಿ. ಘಟನೆ ಕುರಿತು ಮಾಹಿತಿ ಬಂದಲ್ಲಿ ತಕ್ಷಣವೇ ಸ್ಪಂದಿಸಬೇಕು ಹಾಗೂ ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯದೊಂದಿಗೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕಂದಾಯ ಗ್ರಾಮ ಹಕ್ಕುಪತ್ರ, ಅಕ್ರಮ ಸಕ್ರಮ ಅರ್ಜಿಗಳ ವಿಲೇವಾರಿ, ಆಧಾರ ಸೀಡಿಂಗ್ ಪ್ರಗತಿ ಮೊದಲಾದವುಗಳ ಕುರಿತು ಸಭೆಯಲ್ಲಿ ಚರ್ಚಿಸಿದರು. ಸಭೆಯಲ್ಲಿ ಬ್ಯಾಡಗಿ ತಹಸೀಲ್ದಾರ್ ಫಿರೋಜ್ಷಾ, ಶಿರಸ್ತೇದಾರರು, ಉಪತಹಸೀಲ್ದಾರ್, ಕಂದಾಯ ನಿರೀಕ್ಷಕರು ಹಾಗೂ ಸಿಬ್ಬಂದಿ ಇದ್ದರು.ಪದೇ ಪದೇ ಮೊಬೈಲ್ ನೋಡಬೇಡ ಎಂದಿದ್ದಕ್ಕೆ ಬಾಲಕ ಆತ್ಮಹತ್ಯೆಬ್ಯಾಡಗಿ: ಪದೇ ಪದೇ ಮೊಬೈಲ್ ಬಳಸಬೇಡ, ಚೆನ್ನಾಗಿ ಓದಿಕೊಳ್ಳುವಂತೆ ಹೇಳಿದ ಬುದ್ಧಿಮಾತನ್ನೇ ತಪ್ಪಾಗಿ ಅರ್ಥ ಮಾಡಿಕೊಂಡು ಬಾಲಕನೊಬ್ಬ ನೇಣಿಗೆ ಶರಣಾದ ಘಟನೆ ಪಟ್ಟಣದ ಇಸ್ಲಾಂಪುರ ಗಲ್ಲಿಯಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಮೃತ ಬಾಲಕನನ್ನು ರುದ್ರೇಶ ಶಿವಪ್ಪ ಗಂಜೀಗಟ್ಟಿ (15) ಎನ್ನಲಾಗಿದ್ದು, ಬಾಲಕ ಮೂಲತಃ ಶಿಗ್ಗಾಂವಿ ತಾಲೂಕಿನ ಚಿಕ್ಕನೆಲ್ಲೂರ ಗ್ರಾಮದವನು. ಓದಿಗಾಗಿ ಬ್ಯಾಡಗಿಯ ಅಜ್ಜ ಮಲ್ಲಿಕಾರ್ಜುನ ಬಸಪ್ಪ ಮಠದ ಎಂಬವರ ಮನೆಯಲ್ಲಿ ಇದ್ದ.
ಆದರೆ ಈತನಿಗೆ ಹೆಚ್ಚು ಮೊಬೈಲ್ ಬಳಸದಂತೆ ತಾಕೀತು ಮಾಡಿದ್ದಲ್ಲದೇ ಪ್ರಸಕ್ತ ವರ್ಷ 10ನೇ ತರಗತಿಯಲ್ಲಿ ಓದುತ್ತಿದ್ದಿಯಾ, ಓದಿಗೆ ಹೆಚ್ಚಿನ ಗಮನ ಕೊಡುವಂತೆ ಅಜ್ಜ, ಅಜ್ಜಿ ತಿಳಿವಳಿಕೆ ಹೇಳಿದ್ದಾರೆ. ಅದನ್ನೇ ಮನಸ್ಸಿಗೆ ಹಚ್ಚಿಕೊಂಡ ಬಾಲಕ ರುದ್ರೇಶ ಮನೆಯಲ್ಲಿ ಹಗ್ಗದಿಂದ ನೇಣಿಗೆ ಶರಣಾಗಿದ್ದಾನೆ.ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.