ಸಮಾಜ ಸೇವೆಯಲ್ಲಿ ಸಕ್ರಿಯರಾಗಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ದಂಪತಿ ಗ್ರಾಮೀಣ ಬಡವರು ಹಾಗೂ ಅಸಹಾಯಕ ಮಹಿಳೆಯರ ಸ್ವಾವಲಂಬನೆಗೆ ಜ್ಞಾನವಿಕಾಸ ಕೇಂದ್ರ ತೆರೆದು ಶ್ರಮಿಸುತ್ತಿದ್ದಾರೆ ಎಂದು ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಯೋಜನಾಧಿಕಾರಿ ಲಕ್ಷ್ಮಣ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಸಮಾಜ ಸೇವೆಯಲ್ಲಿ ಸಕ್ರಿಯರಾಗಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ದಂಪತಿ ಗ್ರಾಮೀಣ ಬಡವರು ಹಾಗೂ ಅಸಹಾಯಕ ಮಹಿಳೆಯರ ಸ್ವಾವಲಂಬನೆಗೆ ಜ್ಞಾನವಿಕಾಸ ಕೇಂದ್ರ ತೆರೆದು ಶ್ರಮಿಸುತ್ತಿದ್ದಾರೆ ಎಂದು ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಯೋಜನಾಧಿಕಾರಿ ಲಕ್ಷ್ಮಣ್ ಹೇಳಿದರು.

ಹೊನ್ನಾಳಿ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಮಹಿಳಾ ಜ್ಞಾನವಿಕಾಸ ಯೋಜನಡಿ ತಾಲೂಕುಮಟ್ಟದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಡಾ.ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಪ್ರತಿಯೊಬ್ಬ ಮಹಿಳೆಯೂ ಕುಟುಂಬದ ಅರ್ಥ ಸಚಿವೆಯಾಗಬೇಕು. ಈ ನಿಟ್ಟಿನಲ್ಲಿ ಸಂಸ್ಥೆಯು ಮಹಿಳೆಯರಿಗೆ ಸ್ವಸಹಾಯ ಸಂಘ ಪ್ರಾರಂಭಿಸಿ, ಅವರಿಗೆ ಕಿರು ಆರ್ಥಿಕ ಸಾಲ ಯೋಜನೆಯಲ್ಲಿ ಸಾಲ ನೀಡಿ, ಆರ್ಥಿಕವಾಗಿ ಸಬಲೀಕರಣಗೊಳ್ಳಲು ಸದಾ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದೇವೆ ಎಂದ ಅವರು, ಹೊನ್ನಾಳಿಯಲ್ಲಿ 2540 ಸ್ವಸಹಾಯ ಸಂಘಟನೆಗಳು ಕೆಲಸ ಮಾಡುತ್ತಿವೆ ಎಂದರು.

ಪೊಲೀಸ್ ಇನ್‌ಸ್ಪೆಕ್ಟರ್‌ ಪಿ.ಸುನೀಲ್‌ಕುಮಾರ್ ಮಾತನಾಡಿ, ಮಕ್ಕಳನ್ನು ಕೇವಲ ಅಂಕ ಗಳಿಕೆಗಾಗಿ ಮಾತ್ರ ಓದು ಎನ್ನುವ ಪೋಷಕರು, ಮಕ್ಕಳು ಎಲ್ಲಿಗೆ ಹೋಗುತ್ತಾರೆ, ಏನು ಮಾಡುತ್ತಿದ್ದಾರೆ ಎಂದು ಗಮನಿಸಬೇಕು. ಇಂದು ಎಲ್ಲ ಠಾಣೆಗಳಲ್ಲಿ ಪೋಕ್ಸೋ ಪ್ರಕರಣಗಳೇ ಹೆಚ್ಚು. ನೀವು ಪ್ರತಿನಿತ್ಯ ತಮ್ಮ ಮಕ್ಕಳ ಬಗ್ಗೆ ಗಮನಹರಿಸಿ ಅವರ ಹಾವಭಾವಗಳನ್ನು ಗಮನಿಸಬೇಕು. ಹಾದಿ ತಪ್ಪಿದ್ದರೆ ಎಚ್ಚರಿಕೆ ನೀಡಿ ಅವರನ್ನು ಸರಿದಾರಿಗೆ ಬರುವ ಹಾಗೆ ಕ್ರಮ ಕೈಗೊಳ್ಳಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು.

ನಿಮ್ಮ ಹೆಣ್ಣುಮಕ್ಕಳು ಪೀರಿಯಡ್ ಆಗುತ್ತಿದ್ದಾರೆಯೇ, ಇಲ್ಲವೋ ಎಂಬುದನ್ನು ಗಮನಿಸಿ. ಮದುವೆಯಾಗದೇ ಮಕ್ಕಳನ್ನು ಹೆತ್ತಿರುವ ಪ್ರಕರಣದಲ್ಲಿ ಠಾಣೆಗೆ ಬಂದು ಫೋಕ್ಸೋ ಪ್ರಕರಣ ದಾಖಲು ಮಾಡಿದ್ದಾರೆ. ಇಂತಹ ಪ್ರಕರಣ ನಿಮ್ಮ ಮನೆಯಲ್ಲೂ ಘಟಿಸಬಾರದು ಎಂದರೆ ಮಕ್ಕಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ತಿಳಿಸಿದರು.

ಗಂಡುಮಕ್ಕಳು ಸಹ ಹಾದಿ ತಪ್ಪದಂತೆ ಗಮನಿಸಬೇಕು. ಸಿಗರೇಟ್, ಗಾಂಜಾ, ಮದ್ಯ ಸೇವನೆ ಅಥವಾ ಇನ್ನಿತರ ರೀತಿಯಲ್ಲಿ ಅಡ್ಡದಾರಿ ತುಳಿದಿದ್ದರಾ ಎಂಬುದನ್ನು ಗಮನಿಸಬೇಕು. ಸೂಕ್ತ ಸಂಸ್ಕಾರ ನೀಡಿದರೆ ಮಕ್ಕಳು ಸಮಾಜಕ್ಕೆ ಉತ್ತಮ ಪ್ರಜೆಗ‍ಳಾಗುತ್ತಾರೆ ಎಂದರು.

ಪುರಸಭಾಧ್ಯಕ್ಷ ಮೈಲಪ್ಪ, ವಕೀಲರಾದ ಬಿ.ಉಮೇಶ್, ಎಎಸ್‌ಐ ತಿಪ್ಪೇಸ್ವಾಮಿ, ದೊರೆಸ್ವಾಮಿ, ಉಮಾ, ಯೋಜನಾಧಿಕಾರಿ ಶಾಂತರಾಂ ವಿ. ನಾಯ್ಕ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮೇಲ್ವಿಚಾರಕ ಬಸವರಾಜ್, ಸರಸ್ವತಿ, ಭಾರತಿ, ಲಕ್ಷ್ಮಮ್ಮ ಇತರರು ಇದ್ದರು.

- - - -15ಎಚ್.ಎಲ್.ಐ2:

ಕಾರ್ಯಕ್ರಮದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್‌ ಪಿ.ಸುನೀಲ್‌ಕುಮಾರ್ ಮಾತನಾಡಿದರು.