ಡಾ. ವಿರೂಪಾಕ್ಷ ದೇವರಮನೆ ಅವರ 2 ಪುಸ್ತಕ ಲೋಕಾರ್ಪಣೆ

| Published : Nov 15 2025, 02:45 AM IST

ಡಾ. ವಿರೂಪಾಕ್ಷ ದೇವರಮನೆ ಅವರ 2 ಪುಸ್ತಕ ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಡಾ. ವಿರೂಪಾಕ್ಷ ದೇವರಮನೆ ಅವರು ಬರೆದ ‘ಓ ಮನಸೇ ತುಸು ನಿಧಾನಿಸು’ ಮತ್ತು ‘ಮಕ್ಕಳು ಮಕ್ಕಳಾಗಿರಲು ಬಿಡಿ’ ಪುಸ್ತಕಗಳನ್ನು ಮಕ್ಕಳ ದಿನಾಚರಣೆಯ ಅಂಗವಾಗಿ ಇಲ್ಲಿನ ಐವೈಸಿ ಸಭಾಂಗಣದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಉಡುಪಿ: ಖ್ಯಾತ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಅವರು ಬರೆದ ‘ಓ ಮನಸೇ ತುಸು ನಿಧಾನಿಸು’ ಮತ್ತು ‘ಮಕ್ಕಳು ಮಕ್ಕಳಾಗಿರಲು ಬಿಡಿ’ ಪುಸ್ತಕಗಳನ್ನು ಮಕ್ಕಳ ದಿನಾಚರಣೆಯ ಅಂಗವಾಗಿ ಇಲ್ಲಿನ ಐವೈಸಿ ಸಭಾಂಗಣದಲ್ಲಿ ಶುಕ್ರವಾರ ಮಣಿಪಾಲದ ಖ್ಯಾತ ಪ್ರಸೂತಿ ಮತ್ತು ​ಸ್ತ್ರೀರೋಗ ತಜ್ಞೆ ಡಾ. ಗಿರಿಜಾ ಎ. ಅವರು ಅನಾವರಣಗೊಳಿಸಿ ಶುಭ ಹಾರೈಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಡೂರು ರತ್ನಶೀಲಾ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಮನು ಹಂದಾಡಿ ಮಾತನಾಡಿ, ನಮ್ಮ ಪ್ರತಿಬಿಂಬವಾಗಿರುವ ಮಕ್ಕಳಿಗೆ ನಿರಾಸವಾದಕ್ಕಿಂತ ಆಶಾವಾದ, ಗುಣಾತ್ಮಕ ಚಿಂತನೆಯನ್ನು ಮೈಗೂಡಿಸುವ ಕೆಲಸವನ್ನು ಹೆತ್ತವರು ಮಾಡಬೇಕು. ಮಕ್ಕಳು ನಮ್ಮ ಕನ್ನಡಿಯಾಗಿದ್ದು, ಮಕ್ಕಳಲ್ಲಿರುವ ನಮ್ಮ ಕನ್ನಡಿಯನ್ನು ನೋಡಿಕೊಂಡು ಸೀಳಾಗದಂತೆ ಎಚ್ಚರವಹಿಸಬೇಕು. ದಿನಪೂರ್ತಿ ಸಮ​ವಸ್ತ್ರದ ಬಂಧನದಲ್ಲಿರುವುದಕ್ಕಿ೦ತ ಶಾಲೆ ಮುಗಿಸಿ ಮನೆಗೆ ಬಂದ ಮೇಲೆ ಸುಲಲಿತ ಬಟ್ಟೆಯನ್ನು ತೊಡಿಸಿ ಮಾನಸಿಕ ನೆಮ್ಮದಿಯನ್ನು ಕರುಣಿಸಬೇಕು. ಇಲ್ಲಿ ಹೆತ್ತವರ ಕಾಳಜಿ ಅತೀ ಅಗತ್ಯವಾಗಿದೆ ಎಂದರು.ಡಾ. ವಿರೂಪಾಕ್ಷ ದೇವರಮನೆ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ಕುಟುಂಬ ಒತ್ತಡದಲ್ಲಿ ನಮ್ಮ ಕಾಳಜಿ ಮರೆತಿದ್ದೇವೆ. ಮಕ್ಕಳನ್ನು ಮಕ್ಕಳಾಗಿರಲು ಬಿಡದೆ ದೊಡ್ಡವರನ್ನಾಗಿಸುವ ಆತುರ ನಮ್ಮಲ್ಲಿ ಹೆಚ್ಚಿದೆ. ಮಕ್ಕಳನ್ನು ಮಕ್ಕಳಾಗಿರಲು ಬಿಟ್ಟರೆ ಅವರಲ್ಲಿನ ಅದ್ಭುತ ಶಕ್ತಿ ಹೊರಬರುತ್ತದೆ ಎಂದರು.

ಬ್ರಹ್ಮಾವರ ಎಸ್‌ಎಂಎಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಿನ್ಸಿಪಾಲ್ ಅಭಿಲಾಷಾ ಹಂದೆ, ಗಿಲಿಗಿಲಿ ಮ್ಯಾಜಿಕ್‌ನ ಅಂತಾ​ರಾಷ್ಟ್ರೀಯ ಖ್ಯಾತಿಯ ಜಾದೂಗಾರ ಶಂಕರ್ ಜೂನಿಯರ್ ತೇಜಸ್ವಿ ಉಪಸ್ಥಿತರಿದ್ದರು.ಪುಸ್ತಕ ಅನಾವರಣದ ಜತೆಗೆ ವಿಶೇಷ ಪುಸ್ತಕ ಪ್ರದರ್ಶನ ಮತ್ತು ವಿಶೇಷ ಚಿತ್ರಕಲಾ ಪ್ರದರ್ಶನ ಹಾಗೂ ವಿಶೇಷ ಮ್ಯಾಜಿಕ್ ಪ್ರದರ್ಶನವನ್ನು ಹಮ್ಮಿಕೊಳ್ಳಲಾಯಿತು. ಡಾ. ವೀಣಾ ವಿರೂಪಾಕ್ಷ ಸ್ವಾಗತಿಸಿದರು.