ಮಳೆಗಾಲದಲ್ಲಿ ನಾಲಾಗಳು ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿಯುವುದು ಸೇರಿದಂತೆ ಮುಂತಾದ ಸಮಸ್ಯೆಗಳ ಪರಿಹಾರಕ್ಕಾಗಿ ಬೆಳಗಾವಿ ಮಹಾನಗರ ಪಾಲಿಕೆಯಿಂದ ನಾಲಾ ಹೂಳೆತ್ತುವ ಹಾಗೂ ಸ್ವಚ್ಛಗೊಳಿಸುವ ಕಾರ್ಯ ಭರದಿಂದ ಸಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಳೆಗಾಲದಲ್ಲಿ ನಾಲಾಗಳು ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿಯುವುದು ಸೇರಿದಂತೆ ಮುಂತಾದ ಸಮಸ್ಯೆಗಳ ಪರಿಹಾರಕ್ಕಾಗಿ ಬೆಳಗಾವಿ ಮಹಾನಗರ ಪಾಲಿಕೆಯಿಂದ ನಾಲಾ ಹೂಳೆತ್ತುವ ಹಾಗೂ ಸ್ವಚ್ಛಗೊಳಿಸುವ ಕಾರ್ಯ ಭರದಿಂದ ಸಾಗಿದೆ.

ಚರಂಡಿಗಳು ಬ್ಲಾಕ್‌ ಆಗಿರುವ ಕುರಿತು ಸಾರ್ವಜನಿಕರಿಂದಲೂ ದೂರುಗಳು ಬಂದಿದ್ದವು. ಜತೆಗೆ ವಿವಿಧ ವಾರ್ಡ್‌ಗಳ ನಗರ ಸೇವಕರೂ ಮಳೆಗಾಲದಿಂದಾಗುವ ಅನಾನುಕೂಲತೆಗಳನ್ನು ಮುಂಚಿತವಾಗಿ ಸರಿಪಡಿಸಬೇಕೆಂಬ ಸಲಹೆ ಕೂಡ ನೀಡಿದ್ದರು. ಈ ಮೂಲಕ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಪಾಲಿಕೆ ಮುಂದಾಗಿದೆ.

ಸ್ವಚ್ಛತೆ ಕಡೆಗೆ ಗಮನಹರಿಸಿರುವ ಪಾಲಿಕೆಯು ಶೀಘ್ರದಲ್ಲೇ ಮಳೆಗಾಲ ಆರಂಭವಾಗುತ್ತಿರುವುದರಿಂದ ನಗರದ ವಿವಿಧ ಭಾಗಗಳಲ್ಲಿರುವ ನಾಲಾಗಳ ಹೂಳೆತ್ತುವ ಕಾರ್ಯವನ್ನು ಪಾಲಿಕೆ ಕೈಗೆತ್ತಿಕೊಂಡಿದೆ. ಚರಂಡಿಗಳನ್ನು ಸ್ವಚ್ಛಗೊಳಿಸಿ ಕಸ ವಿಲೇವಾರಿ ಮಾಡುವ ಕಾರ್ಯ, ಗಾಳಿ ಮಳೆಯಿಂದ ಬೀಳುವ ಹಂತದಲ್ಲಿರುವ ಹಾಗೂ ಚರಂಡಿ ನೀರು ಹರಿಯಲು ಅಡ್ಡವಾಗಿರುವ ಹಾಗೂ ವಿದ್ಯುತ್ ತಂತಿಗಳ ಮೇಲೆ ಬಿದ್ದು ಅಪಾಯ ತಂದೊಡ್ಡಲಿರುವ ಗಿಡ ಮರಗಳನ್ನು ತೆಗೆದುಹಾಕುವ ಕಾರ್ಯ ಸಹ ಭರದಿಂದ ಸಾಗಿದೆ.

ಖುದ್ದು ಪಾಲಿಕೆ ಆಯುಕ್ತರಾದ ಕಾರ್ತಿಕ್ ಎಂ ಅವರೇ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದೆ ವೇಳೆ ಸಾರ್ವಜನಿಕರ ಅಹವಾಲುಗಳನ್ನು ಸಹ ಸ್ವೀಕರಿಸಿದ್ದಾರೆ. ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ಸೂಚಿಸಿದ್ದಾರೆ. ವಿಭಾಗದ ಅಭಿಯಂತರ ಅಂಕಿತ ಸೇರಿದಂತೆ ಇತರ ಅಧಿಕಾರಿಗಳು, ವಾರ್ಡನ ನಗರ ಸೇವಕರು ಹಾಗೂ ಸಿಬ್ಬಂದಿ ಆಯುಕ್ತರಿಗೆ ಸಾತ್ ನೀಡಿದ್ದಾರೆ.