ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜು ಪ್ರಾಚಾರ್ಯೆ ವಿದ್ಯಾವತಿ ಗೋಟೂರು ಮಾತನಾಡಿ, ನಾಟಕ ಕಲೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಮಹತ್ತರ ಪಾತ್ರ ವಹಿಸುತ್ತದೆ
ಕುಷ್ಟಗಿ:ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಡಿಟೋರಿಯಂ ಹಾಲ್ ನಲ್ಲಿ ಸಾಂಸ್ಕೃತಿಕ ವೇದಿಕೆ, ಐಕ್ಯೂಎಸಿ ಹಾಗೂ ಕೊಪ್ಪಳ ವಿಶ್ವವಿದ್ಯಾಲಯದ ಪ್ರದರ್ಶನ ಕಲೆಗಳ ವಿಭಾಗ ಸಹಯೋಗದಲ್ಲಿ ಶ್ರೀಕೃಷ್ಣದೇವರಾಯ ನಾಟಕೋತ್ಸವ ಆಯೋಜಿಸಲಾಯಿತು. ವಿದ್ಯಾರ್ಥಿಗಳ ಕಲಾ ಪ್ರತಿಭೆ ಅನಾವರಣಗೊಳಿಸಿದ ಈ ಕಾರ್ಯಕ್ರಮಕ್ಕೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗಣ್ಯರು ಸಾಕ್ಷಿಯಾದರು.
ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜು ಪ್ರಾಚಾರ್ಯೆ ವಿದ್ಯಾವತಿ ಗೋಟೂರು ಮಾತನಾಡಿ, ನಾಟಕ ಕಲೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಮಹತ್ತರ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.ನಾಟಕಗಳ ಮೂಲಕ ಇತಿಹಾಸ, ಸಂಸ್ಕೃತಿ ಹಾಗೂ ನೈತಿಕ ಮೌಲ್ಯ ಸಮಾಜಕ್ಕೆ ಸಾರುವ ಕಾರ್ಯ ನಡೆಯುತ್ತದೆ ಎಂದು ಹೇಳಿದರು.
ರಂಗಭೂಮಿ ನಮ್ಮ ಬದುಕಿನ ಕನ್ನಡಿ. ಅದು ಮನುಷ್ಯನ ವ್ಯಕ್ತಿತ್ವದ ವೈವಿಧ್ಯಮಯ ಸ್ವಭಾವ ಪ್ರತಿನಿಧಿಸುತ್ತದೆ. ರಂಗಭೂಮಿಗೆ ಪ್ರೊತ್ಸಾಹ ನೀಡುವ ಅವಶ್ಯಕತೆಯಿದೆ ಎಂದ ಅವರು, ಪದವಿ ವಿದ್ಯಾರ್ಥಿಗಳಿಗೆ ಶ್ರೀಕೃಷ್ಣ ದೇವರಾಯ ನಾಟಕ ಉತ್ತಮ ಅನುಭವ ನೀಡಲಿದೆ. ನಮ್ಮ ಭವ್ಯ ವಿಜಯನಗರ ಸಾಮ್ರಾಜ್ಯದ ವಿಖ್ಯಾತ ಚಕ್ರವರ್ತಿ ಶ್ರೀಕೃಷ್ಣ ದೇವರಾಯನ ಸಾಧನೆ, ಪರಾಕ್ರಮಗಳು ಇಂದಿನವರಿಗೆ ತಿಳಿಸಬೇಕಾಗಿದೆ. ನಮ್ಮ ಇತಿಹಾಸದ ಮಹತ್ವ ತಿಳಿಸಲು ನಾಟಕ ಪರಿಣಾಮಕಾರಿ ಮಾಧ್ಯಮವಾಗಿದೆ ಎಂದರು.ವಿದ್ಯಾರ್ಥಿಗಳು ಶ್ರೀಕೃಷ್ಣದೇವರಾಯರ ಆಡಳಿತ ವೈಭವ, ಸಾಹಿತ್ಯ ಸೇವೆ ಹಾಗೂ ವಿಜಯನಗರ ಸಾಮ್ರಾಜ್ಯದ ಸುವರ್ಣ ಯುಗ ಪ್ರತಿಬಿಂಬಿಸುವ ನಾಟಕ ಮನೋಜ್ಞವಾಗಿ ಪ್ರದರ್ಶಿಸಿದರು. ಕಾಲೇಜ್ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ನಾಟಕದ ನಿರ್ದೇಶಕ ಅನಂತಕುಮಾರ್ ದೊರೆ, ಕಾಲೇಜಿನ ಐಕ್ಯೂಎಸಿ ಘಟಕದ ಸಂಚಾಲಕ ಭೋಜರಾಜ, ಸಾಂಸ್ಕೃತಿಕ ಘಟಕದ ಸಂಚಾಲಕಿ ಅನಿತಾ ಎಂ.ಪಾಟೀಲ್, ಹಳೆಯ ವಿದ್ಯಾರ್ಥಿಗಳ ಸಂಘದ ಸಂಚಾಲಕ ವಿಶ್ವನಾಥ್ ಎಚ್.ಕೋಳೂರು, ಉದ್ಯೋಗ ಮಾಹಿತಿ ಘಟಕದ ಸಂಚಾಲಕ ದುರ್ಗೇಶ್ ಹಾಗೂ ಎಲ್ಲ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು. ಶಿವರಾಜ್ ಕೋಳೂರು ಸ್ವಾಗತಿಸಿದರು, ಅನಿತ ಎಂ.ಪಾಟೀಲ್ ನಿರೂಪಿಸಿ ವಂದಿಸಿದರು. ನಾಟಕದಲ್ಲಿ ಅಭಿನಯಿಸಿದ ವಿದ್ಯಾರ್ಥಿಗಳಿಗೆ ಕಾಲೇಜು ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.