ಕುಡಿಯುವ ನೀರಿನ ಕೆರೆ ಒಡ್ಡು ಕುಸಿತ, ಏಳೆಂಟು ಗ್ರಾಮಗಳ ಜನರಿಗೆ ಆತಂಕ

| Published : Jul 03 2025, 11:51 PM IST

ಸಾರಾಂಶ

ಶಿವರಾಜ ತಂಗಡಗಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾಗ (2007-08) ಏಳೆಂಟು ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಕೋಟ್ಯಂತರ ರುಪಾಯಿ ವ್ಯಯಿಸಿ ಬೃಹತ್ ಕೆರೆ ನಿರ್ಮಿಸಲಾಗಿತ್ತು.

ಎಂ. ಪ್ರಹ್ಲಾದ್

ಕನಕಗಿರಿ:

ತಾಲೂಕಿನ ಸುಳೇಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜೀವಗಾಂಧಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ನಿರ್ಮಿಸಿದ ಕೆರೆ ಒಡ್ಡು ಕುಸಿಯುತ್ತಿದ್ದು ಆತಂಕ ಶುರುವಾಗಿದೆ.

ಶಿವರಾಜ ತಂಗಡಗಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾಗ (2007-08) ಏಳೆಂಟು ಗ್ರಾಮಗಳಿಗೆ ಇಲ್ಲಿಂದ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಕೋಟ್ಯಂತರ ರುಪಾಯಿ ವ್ಯಯಿಸಿ ಬೃಹತ್ ಕೆರೆ ನಿರ್ಮಿಸಲಾಗಿತ್ತು. ಆದರೆ, ನಿರ್ವಹಣೆ ಕೊರತೆಯಿಂದ ಈ ಹಿಂದೆ ಕೆರೆಯ ಒಡ್ಡು ಹೊಡೆದಿತ್ತು. ಬಳಿಕ ಸರಿಪಡಿಸಿ ಕೆರೆಗೆ ನೀರು ತುಂಬಿಸಿ ಹಲವು ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗಿತ್ತು. ಇದೀಗ ಮತ್ತದೆ ಸಮಸ್ಯೆ ಎದುರಾಗಿದೆ. ಕೆರೆ ಒಡ್ಡಿಗೆ ಬಳಸಲಾದ ಬಂಡೆಗಳ ಹೊಡದಿವೆ. ಒಡ್ಡು ಸಹ ನಿರ್ವಹಣೆ ಕೊರೆಯಿಂದ ದಿನದಿಂದ ದಿನಕ್ಕೆ ಕಳಚಿ ಬೀಳುತ್ತಿದೆ. ಇದರಿಂದ ಏಳೆಂಟು ಗ್ರಾಮಗಳ ಜನರು ಕುಡಿಯುವ ನೀರಿನಿಂದ ವಂಚಿತರಾಗುವ ಭೀತಿ ಶುರುವಾಗಿದೆ.

ಕೆರೆ ತುಂಬ ಬೆಳೆದ ಪಾಚಿ:

ಸುಮಾರು 25ಕ್ಕೂ ಹೆಚ್ಚು ಎಕರೆ ಪ್ರದೇಶ ಹೊಂದಿರುವ ಈ ಕೆರೆಯಲ್ಲಿ ಹಲವು ವರ್ಷಗಳಿಂದ ಪಾಚಿ ಬೆಳೆಯುತ್ತಲೇ ಇದೆ. ಪ್ರತಿ ವರ್ಷ ಸ್ವಚ್ಛಗೊಳಿಸಿದರೂ ಮತ್ತೆ ಬೆಳೆಯುತ್ತಿದೆ. ಈ ಹಿಂದೆ ಬೋಟ್‌ಗಳ ಮೂಲಕ ಪಾಚಿ ಶುಚಿಗೊಳಿಸಿದರೂ ಹಸಿರು ಹುಲ್ಲಿನಂತೆ ಕೆರೆ ತುಂಬ ವ್ಯಾಪಿಸಿಕೊಂಡಿದೆ. ಈ ಪಾಚಿಯಿಂದಾಗಿ ನೀರು ದುರ್ವಾಸನೆ ಬೀರುತ್ತಿದ್ದು ಜನರು ನೀರು ಕುಡಿಯಲು ಹಿಂದೇಟು ಹಾಕುತ್ತಿದ್ದಾರೆ.ತಿಪ್ಪನಾಳದ ಬಹುಗ್ರಾಮ ಕುಡಿಯುವ ನೀರಿನ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಅವರೊಂದಿಗೆ ಚರ್ಚಿಸಿದ್ದು, ಕೆರೆಯ ನಿರ್ವಹಣೆಗಾಗಿ ಕ್ರಿಯಾಯೋಜನೆ ರೂಪಿಸಲು ತಿಳಿಸಿರುವೆ.

ರಾಜಶೇಖರ, ತಾಪಂ ಇಒ ತಿಪ್ಪನಾಳ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಲ್ಲಲ್ಲಿ ಬಂಡೆಗಳು ಕುಸಿದಿವೆ. ಒಂದು ಕಡೆ ಒಡ್ಡು ಕುಸಿಯುತ್ತಿರುವ ಬಗ್ಗೆ ವರದಿ ಮಾಡಿಕೊಳ್ಳಲಾಗಿದೆ. ಇನ್ನೂ ಕೆರೆ ತುಂಬ ಪಾಚಿ ಬೆಳೆದಿದ್ದು, ಬೋಟ್ ಮೂಲಕ ಶುಚಿಗೊಳಿಸಲು ಪ್ರಯತ್ನಿಸಲಾಗುವುದು. ತುಂಗಭದ್ರಾ ಎಡದಂಡೆ ನಾಲೆಗೆ ನೀರು ಬಂದ ತಕ್ಷಣ ಕೆರೆಗೆ ನೀರು ಸರಬರಾಜು ಮಾಡಲಾಗುವುದು.

ದೇವಣ್ಣ ಕಟ್ಟಿ, ಎಇಇ, ನೀರು ಮತ್ತು ನೈರ್ಮಲ್ಯ ಇಲಾಖೆ ಗಂಗಾವತಿ