ಸಾರಾಂಶ
ಅಂದಾಜು ₹1200 ಕೋಟಿ ವೆಚ್ಚದಲ್ಲಿ ಬಳ್ಳಾರಿ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು.
ಸಲಾಂ ಬಳ್ಳಾರಿ ಅಭಿಯಾನದ ಭಾಗವಾಗಿ ಶಾಸಕ ಭೇಟಿ
ಕನ್ನಡಪ್ರಭ ವಾರ್ತೆ ಬಳ್ಳಾರಿಅಂದಾಜು ₹1200 ಕೋಟಿ ವೆಚ್ಚದಲ್ಲಿ ಬಳ್ಳಾರಿ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಸಲಾಂ ಬಳ್ಳಾರಿ ಅಭಿಯಾನದ ಭಾಗವಾಗಿ ನಗರದ 12ನೇ ವಾರ್ಡಿಗೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು.ನಗರದ ಗಡಗಿ ಚೆನ್ನಪ್ಪ ವೃತ್ತದ ಲೋಕಾರ್ಪಣೆ ಹಾಗೂ ₹1200 ಕೋಟಿ ವೆಚ್ಚದ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನಗರಕ್ಕೆ ಆಗಮಿಸಲಿದ್ದು, ಕೆಲವು ದಿನಗಳಲ್ಲಿ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು.
ಈಗಾಗಲೇ ಭೇಟಿ ನೀಡಲಾಗಿರುವ ವಾರ್ಡ್ಗಳಲ್ಲಿನ ಸ್ಥಳೀಯರ ಬೇಡಿಕೆ, ಅಹವಾಲು ಆಧರಿಸಿ ಅನುದಾನ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಬೇಸಿಗೆಯ ಹಿನ್ನೆಲೆಯಲ್ಲಿ ಅಭಿಯಾನವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು ಎಂದರು.ವಾರ್ಡಿನಾದ್ಯಂತ ಸಂಚರಿಸಿ ಜನರ ಅಹವಾಲು ಸ್ವೀಕರಿಸಿದ ಶಾಸಕರು, ಹಲವು ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಮಹಾನಗರ ಪಾಲಿಕೆಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸಿದರು.
ವಾರ್ಡಿನ ಮುಖಂಡರಾದ ಸೋಮಪ್ಪ, ಮಡಿವಾಳಪ್ಪ, ಲೋಕೇಶ್, ಡೋಣೆಪ್ಪ, ನಟರಾಜ, ಮಹೇಶ, ಸಿಲಾರ್, ಅನಿಲ್, ಸುನಿಲ್, ರವಿ, ಕಾಂಗ್ರೆಸ್ ವಕ್ತಾರ ವೆಂಕಟೇಶ ಹೆಗಡೆ, ಅಬ್ದುಲ್ ಬಾರಿ, ಸುಬ್ಬರಾಯುಡು, ಚಂಪಾ ಚವ್ಹಾಣ್, ಕುಡಿತಿನಿ ರಾಮಾಂಜನೇಯ, ಭರತ್, ಥಿಯೇಟರ್ ಶಿವು ಮತ್ತಿತರರಿದ್ದರು.