ಸಾರಾಂಶ
ರೈತ ಮುಖಂಡ ಹೊನ್ನೂರು ಪ್ರಕಾಶ್ ಬೇಸರ
ಗುಂಡ್ಲುಪೇಟೆ: ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಕುಡಿವ ನೀರು, ರಸ್ತೆ, ಚರಂಡಿ ಕೇಳುತ್ತಿರುವುದು ದೇಶದ ದುರಂತ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ಹೇಳಿದರು. ತಾಲೂಕಿನ ಬನ್ನಿತಾಳಪುರ ಗ್ರಾಮದಲ್ಲಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ತಾಲೂಕಿನ ಕೆಲವು ಭಾಗಗಳಲ್ಲಿ ಇನ್ನು ಕೆರೆಗಳಿಗೆ ನೀರು ತುಂಬಿಸಿಲ್ಲ. ಹೋರಾಟ ಮಾಡಿ ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ರೈತರ ಆರ್ಥಿಕ ಶಕ್ತಿಯನ್ನು ನಾವೇ ಹೆಚ್ಚಿಸಿಕೊಂಡು ಸುಸ್ಥಿರ ಕೃಷಿ ಮೂಲಕ ಭೂಮಿಯ ಮತ್ತು ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಿದೆ ಎಂದರು. ಮುಂದಿನ ಏ.16 ರಂದು ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕುವ ಜೊತೆಗೆ ಬನ್ನಿತಾಳಾಪುರ ಕೆರೆಗೆ ನೀರು ತುಂಬಿಸುವಂತೆ ಒತ್ತಾಯಿಸಿ ಧರಣಿ ನಡೆಯಲಿದೆ ಎಂದರು.
ರೈತನಿಗೆ ಸನ್ಮಾನ:ಗ್ರಾಮದ ರೈತ ಮಾದೇಶ್ ಶೆಟ್ಟಿಗೆ ರಾಷ್ಟ್ರೀಯ ಮತ್ತು ರಾಜ್ಯದ ಪ್ರಗತಿಪರ ಕೃಷಿಕ ಪ್ರಶಸ್ತಿ ಲಭಿಸಿದ ಹಿನ್ನಲೆ ಇದೇ ಸಭೆಯಲ್ಲಿ ಹೊನ್ನೂರು ಪ್ರಕಾಶ್ ಸನ್ಮಾನಿಸಿದರು. ರೈತ ಮುಖಂಡರಾದ ವೀರನಪುರದ ನಾಗಪ್ಪ, ಮಂಚಳ್ಳಿ ಮಣಿ, ಬೆಟ್ಟದಮಾದಳ್ಳಿ ಷಣ್ಮುಖ ಸ್ವಾಮಿ ಮಾತನಾಡಿದರು. ಸಭೆಯಲ್ಲಿ ಬೆಟ್ಟದಮಾದಳ್ಳಿ ಶ್ರೀನಿವಾಸ್, ಉತ್ತಂಗೇರೆಹುಂಡಿ ಮಹೇಶ್, ಪುಟ್ಟೇಗೌಡ, ಅಣ್ಣೂರು ಕೇರಿ ಬೆಳ್ಳಶೆಟ್ಟಿ, ವೆಂಕಟರಮಣನಾಯಕ, ಕೂತನೂರು ಗಣೇಶ್,ಕಮರಹಳ್ಳಿ ಪ್ರಸಾದ್, ಕಬ್ಬಳ್ಳಿ ಪ್ರಕಾಶ್, ಕೋಡಳ್ಳಿಸ್ವಾಮಿ ಇದ್ದರು.