ಸಾರಾಂಶ
ಹೊಸಕೋಟೆ: ಗ್ರಾಮೀಣ ಭಾಗದಲ್ಲಿ ನಾಗರಿಕರಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವ ದೃಷ್ಟಿಯಿಂದ ನೀರಿನ ಅಗತ್ಯ ಪರೀಕ್ಷೆಯೊಂದಿಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ದೇವನಗೊಂದಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ತಿಳಿಸಿದರು.
ಗ್ರಾಮ ಪಂಚಾಯತ್ ಆವರಣದಲ್ಲಿ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಹೊಸಕೋಟೆ ಉಪವಿಭಾಗದ ವತಿಯಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಕೊಳವೆ ಬಾವಿಗಳು ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ನೀರಿನ ಪರೀಕ್ಷೆ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.ಕರ್ನಾಟಕ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಕಲುಷಿತ ನೀರು ಸೇವನೆಯಿಂದ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಸರ್ಕಾರದ ಹಾಗೂ ನೀರು ಸರಬರಾಜು ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ನಿರ್ದೇಶನದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳವೆ ಬಾವಿಗಳ ಹಾಗೂ ಶುದ್ದ ಕುಡಿಯುವ ನೀರನ್ನು ಪರೀಕ್ಷಿಸಲಾಗುತ್ತಿದೆ. ಪ್ರಮುಖವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಟರ್ ಮ್ಯಾನ್ ಗಳಿಗೂ ತರಬೇತಿ ನೀಡುವುದರ ಮೂಲಕ ಕಾಲಕಾಲಕ್ಕೆ ನೀರಿನ ತಪಾಸಣೆ ಮಾಡುವ ಮೂಲಕ ಶುದ್ಧ ಕುಡಿಯುವ ನೀರಿನ ಸರಬರಾಜುಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ನೀರು ಸರಬರಾಜು ಅಭಿಯಂತರ ಶ್ರೀಕಾಂತ್ ಮಾತನಾಡಿ, ನೀರಿನಲ್ಲಿ ಕ್ಲೋರೈಡ್, ಫ್ಲೋರೈಡ್ ಅಂಶ, ನೀರಿನ ಗಡಸುತನ, ಕಬ್ಬಿಣಾಂಶ, ನೈಟ್ರೇಟ್ ಅಂಶವನ್ನ ಪರೀಕ್ಷೆ ಮಾಡುವುದರ ಮೂಲಕ ನೀರು ಬಳಕೆ ಮಾಡುವುದರ ಬಗ್ಗೆ ನೀರಿನ ಪರೀಕ್ಷಾ ಫಲಿತಾಂಶದ ನಂತರ ತಿಳಿಸಲಾಗುವುದು. ಒಂದು ವೇಳೆ ನೀರಿನಲ್ಲಿ ಒಂದಿಷ್ಟು ಕಲುಷಿತ ಕಂಡು ಬಂದರೆ ಅದನ್ನ ಪ್ರಯೋಗಾಲಯಕ್ಕೆ ಕಳುಹಿಸಿ ಮತ್ತೊಮ್ಮೆ ಪರೀಕ್ಷೆ ಮಾಡಲಾಗುವುದು ಎಂದು ಹೇಳಿದರು.ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಟರ್ ಮ್ಯಾನ್ ಗಳಾದ ದೊಡ್ಡದುನ್ನಸಂದ್ರದ ಸೊಣ್ಣೆಗೌಡ, ವೇಲು, ದೇವಲಾಪುರ ವೆಂಕಟೇಶ್, ಓಬಳಾಪುರ ವಿಜಯಕುಮಾರ್, ಲಿಂಗಧೀರ ಮಲ್ಲಸಂದ್ರ ವಿಜಯಕುಮಾರ್, ಹಂದೇನಹಳ್ಳಿ ಶಶಿಕುಮಾರ್, ಮೇಡಹಳ್ಳಿ ರಾಜಪ್ಪ, ದೇವನಗುಂದಿ ಮುನಿರತ್ನ, ಡಿ.ಹೊಸಳ್ಳಿ ರುದ್ರಪ್ಪ ಹಾಜರಿದ್ದರು.ಫೋಟೋ : 18 ಹೆಚ್ಎಸ್ಕೆ 1
ಹೊಸಕೋಟೆ ತಾಲೂಕಿನ ದೇವನಗೊಂದಿ ಗ್ರಾಮ ಪಂಚಾಯತಿಯಲ್ಲಿ ಸರ್ಕಾರಿ ಕೊಳವೆ ಬಾವಿಗಳು ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ನೀರನ್ನು ಪಿಡಿಒ ಹರೀಶ್ ನೇತೃತ್ವದಲ್ಲಿ ಪರೀಕ್ಷಿಸಲಾಯಿತು. ಬಳಿಕ ವಾಟರ್ಮೆನ್ಗಳಿಗೆ ತರಬೇತಿ ನೀಡಲಾಯಿತು.