ತಾಲೂಕಾ ಪಂಚಾಯಿತಿಯಲ್ಲಿ ಜಿಪಂ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಜಿಲ್ಲಾ ಪ್ರಯೋಗಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆ ಕುರಿತ ಕಾರ್ಯಾಗಾರ ನಡೆಯಿತು.
ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆ ಕುರಿತ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ ಭಟ್ಕಳತಾಲೂಕಾ ಪಂಚಾಯಿತಿಯಲ್ಲಿ ಜಿಪಂ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಜಿಲ್ಲಾ ಪ್ರಯೋಗಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆ ಕುರಿತ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಪಂ ಇಒ ಸುನಿಲ್, ಪಂಚಾಯಿತಿ ಮಟ್ಟದಲ್ಲಿ ಕುಡಿಯುವ ನೀರಿನ ಪರೀಕ್ಷೆ ನಡೆಸುವವರಿಗೆ ಉತ್ತಮ ತರಬೇತಿ ದೊರೆತಿದ್ದು ಪರೀಕ್ಷೆಗಾಗಿ ನೀಡಿದ ಕಿಟ್ ಮೂಲಕ ನೀರಿನ ಪರೀಕ್ಷೆ ನಡೆಸಬೇಕು. ಗುಣಮಟ್ಟ ಪರೀಕ್ಷೆಯ ನಂತರ ಯಾವುದೇ ರೀತಿಯ ಅಸಾಮಾನ್ಯ ಇಲ್ಲವೇ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.ನೀರಿನಲ್ಲಿ ಮಿತಿಗಿಂತ ಯಾವುದೇ ಖನಿಜಾಂಶ ಜಾಸ್ತಿ ಇದ್ದರೂ ಕೂಡಾ ಅವುಗಳು ಸೇವಿಸಲು ಯೋಗ್ಯವಾಗಿರುವುದಿಲ್ಲ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಮಾತನಾಡಿದ ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಶೋಕ ವಡ್ಡರ್, ಕುಡಿಯುವ ನೀರಿನ ಮಾದರಿ ಪರೀಕ್ಷೆ ನಡೆಸುವವರು ತಮ್ಮ ತಮ್ಮ ಕರ್ತವ್ಯವನ್ನು ಗಂಭೀರವಾಗಿ ಪರಿಗಣಿಸಿ ನಿಗದಿತ ಸಮಯಕ್ಕೆ ಸರಿಯಾಗಿ ನೀರಿನ ಪರೀಕ್ಷೆಯನ್ನು ಮಾಡಿ ದಾಖಲೀಕರಣ ಮಾಡಬೇಕು ಎಂದರು.ಜೆಜೆಎಂ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವೆಂಕಟೇಶ ನಾಯ್ಕ ಮಾತನಾಡಿ, ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಯ ಅಭಿಯಾನವನ್ನು ಕಡ್ಡಾಯವಾಗಿ ಹಮ್ಮಿಕೊಂಡು ೧೩ರ ಒಳಗಾಗಿ ಎಲ್ಲಾ ಗ್ರಾಮಗಳ ನೀರಿನ ಮಾದರಿಗಳನ್ನು ಪರೀಕ್ಷೆ ಮಾಡಿ ರಾಜ್ಯ ಕಚೇರಿಗೆ ಅಪ್ಲೋಡ್ ಮಾಡಬೇಕು ಎಂದು ಕೋರಿದರು. ತಾಲೂಕಾ ಪ್ರಯೋಗಾಲಯ ಅನಾಲಿಸ್ಟ್ (ಕಿರಿಯ ವಿಶ್ಲೇಷಕಿ) ದೀಪಾ, ಭಟ್ಕಳ ಹಾಗೂ ಹೊನ್ನಾವರ ತಾಲೂಕುಗಳ ನೀರು ಮಾದರಿ ಸಂಗ್ರಾಹಕ ಮಿಥುನ್ ನೀರಿನ ಪರೀಕ್ಷೆಯ ವಿಧಾನ, ಕಿಟ್ ಬಳಕೆ, ಕಲುಷಿತ ನೀರಿನ ದುಷ್ಪರಿಣಾಮಗಳ ಕುರಿತು ಮಾರ್ಗದರ್ಶನ ನೀಡಿದರು.
ಕಾರ್ಯಾಗಾರದಲ್ಲಿ ತಾಪಂ ಲೆಕ್ಕಾಧಿಕಾರಿ ರಾಜೇಶ ಮಹಾಲೆ, ತಾಪಂ ವಿಷಯ ನಿರ್ವಾಹಕ ರಾಘವೇಂದ್ರ ಪೂಜಾರಿ ಮುಂತಾದವರಿದ್ದರು.