ಸಾರಾಂಶ
ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿಗಳಿಂದ ವಸ್ತು ಪ್ರದರ್ಶನಕ್ಕೆ ಚಾಲನೆ । ಮೇಳದಲ್ಲಿ ೪೦ಕ್ಕೂ ಹೆಚ್ಚು ಮಳಿಗೆಗಳು: ಜನರಿಂದ ಉತ್ತಮ ಪ್ರತಿಕ್ರಿಯೆ
ಕನ್ನಡಪ್ರಭ ವಾರ್ತೆ ಚಾಮರಾಜನಗರಕಾಡಂಚಿನಲ್ಲಿರುವ ಮೂಕನಪಾಳ್ಯ ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ರೋಟರಿ ಸಿಲ್ಕ್ ಸಿಟಿ ಆಯೋಜಿಸಿರುವ ಆಹಾರ ಮೇಳ ಮತ್ತು ವಸ್ತು ಪ್ರದರ್ಶನ ಶನಿವಾರ ಆರಂಭವಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ.
ನಗರದ ಶ್ರೀ ಸಿದ್ಧಮಲ್ಲೇಶ್ವರ ವಿರಕ್ತ ಮಠದ ಅವರಣದಲ್ಲಿರುವ ಶ್ರೀ ಸಿದ್ಧಬಸವರಾಜಸ್ವಾಮಿಗಳ ಅನುಭವ ಮಂಟಪದಲ್ಲಿ ಎರಡು ದಿನಗಳ ಕಾಲ ಆಯೋಜನೆಗೊಂಡಿರುವ ಆಹಾರ ಮೇಳ ಮತ್ತು ವಸ್ತುಪ್ರದರ್ಶನಕ್ಕೆ ಮಠದ ಶ್ರೀ ಚನ್ನಬಸವಸ್ವಾಮೀಜಿ, ಮರಿಯಾಲದ ಶ್ರೀ ಮುರುಘ ರಾಜೇಂದ್ರಸ್ವಾಮೀಜಿ ಹಾಗೂ ನಗರಸಭೆ ಪೌರಾಯುಕ್ತ ರಾಮದಾಸ್ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಶ್ರೀ ಚನ್ನಬಸವ ಸ್ವಾಮೀಜಿ ಮಾತನಾಡಿ, ಕಾಡಂಚಿನ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಲು ರೋಟರಿ ಸಿಲ್ಕ್ಸಿಟಿ ತಂಡದವರು ಆಹಾರ ಮೇಳ ಮತ್ತು ವಸ್ತು ಪ್ರದರ್ಶನ ಆಯೋಜಿಸಿರುವುದು ವಿಶೇಷವಾಗಿದೆ. ಆಹಾರ ಮೇಳದಲ್ಲಿ ಬಗೆ ಬಗೆಯ ತಿಂಡಿ, ತಿನಿಸುಗಳು, ವಸ್ತು ಪ್ರದರ್ಶನದ ಮಳಿಗೆಗಳಲ್ಲಿ ದೈನಂದಿನ ಉಪಯುಕ್ತ ವಸ್ತುಗಳು ಮಾರಾಟಕ್ಕಿವೆ. ಸುಮಾರು ೪೦ಕ್ಕೂ ಹೆಚ್ಚು ಮಳಿಗೆಗಳಿದ್ದು, ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಅವರ ಕಾರ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ಹಾಗೂ ಸಹಕಾರ ನೀಡಬೇಕು ಎಂದ ಮನವಿ ಮಾಡಿದರು.
ಎಸ್. ಬಾಲಸುಬ್ರಮಣ್ಯಂ ಸಾಂಸ್ಕೃತಿಕ ಕಲಾತಂಡದಿಂದ ಸಂಗೀತ ಕಾರ್ಯಕ್ರಮ, ಪಿಟೀಲು ಚೌಡಯ್ಯರವರ ಮರಿ ಮೊಮ್ಮಗ ಚಂದನ್ಕುಮಾರ್ ವೃಂದದವರಿಂದ ವೇಣು ವಾದನ, ಖ್ಯಾತ ಚಲನಚಿತ್ರ ಹಾಸ್ಯ ನಟ ಮಿಮಿಕ್ರಿ ಗೋಪಿ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.ಇಂದು ಶ್ರೇಯ ಪಿ. ಜೈನ್ ರಿಂದ ಭಾವಗೀತೆ: ಡಿ.೧೫ ರ ಭಾನುವಾರ ಸಾಯಂಕಾಲ ೩ ಗಂಟೆಗೆ ಎದೆ ತುಂಬಿ ಹಾಡುವೆನು ಖ್ಯಾತಿಯ ಕು. ಶ್ರೇಯ ಪಿ.ಜೈನ್ ಅವರಿಂದ ಭಾವಗೀತೆ ಕಾರ್ಯಕ್ರಮ ಹಾಗೂ ಮೈಸೂರಿನ ಗುರುಸ್ವಾಮಿ ಅವರಿಂದ ಮಾತನಾಡುವ ಗೊಂಬೆ ಹಾಗೂ ಮ್ಯಾಜಿಕ್ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಮಾಣಿಕ್ಯ ಚಂದ್ರ ಸೀರ್ವಿ, ಮಾಜಿ ಅಧ್ಯಕ್ಷ ದೊಡ್ಡರಾಯಪೇಟೆ ಗಿರೀಶ್, ಡಿ.ಪಿ, ವಿಶ್ವಾಸ್, ಮುರುಗೇಂದ್ರಸ್ವಾಮಿ, ಕಾರ್ಯದರ್ಶಿ ಶಮಿತ್ ಕುಮಾರ್, ಅಜಯ್ ಹೆಗ್ಗವಾಡಿಪುರ, ಅಕ್ಷಯ್ ಕುಮಾರ್, ಚೈತನ್ಯ ಜಿ. ಹೆಗಡೆ, ರಾಜೇಶ್, ಮಣಿಕಂಠ, ರಾಜು, ಶ್ರೀನಿಧಿ, ಮೊದಲಾದವರು ಇದ್ದರು.