ಸಾರಾಂಶ
ರಾಣಿಬೆನ್ನೂರು: ನಗರದ ಹಿರೇಮಠ ಶನೈಶ್ಚರಸ್ವಾಮಿ ಬಯಲು ಆಲಯದ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಮಹೋತ್ಸವದ ಪ್ರಯುಕ್ತ ಲೋಕ ಕಲ್ಯಾಣಾರ್ಥ ಹಾಗೂ ಪ್ರಾಚೀನ ಧರ್ಮ ಪರಂಪರೆಯ ಸಂವರ್ಧನೆಗಾಗಿ ನಗರದ ಹೊರವಲಯದ ಹಿರೇಮಠದ ಶನೇಶ್ಚರ ಮಂದಿರದಲ್ಲಿ ಭಾನುವಾರದಿಂದ "ಅತಿರುದ್ರ ಮಹಾಯಾಗ "ವು ಭಕ್ತರ ಮಧ್ಯ ಭಕ್ತಿಪೂರ್ವಕವಾಗಿ ನೆರವೇರಿತು. ಶ್ರೀಮಠದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಯಾಗದ ಸಾನಿಧ್ಯ ವಹಿಸಿ ಅತಿರುದ್ರ ಮಹಾಯಾಗವು ಮನುಷ್ಯನ ಬದುಕಿಗೆ ಸದಾ ಸಂಜೀವಿನಿಯಾಗಿ ಕಾರ್ಯನಿರ್ವಹಿಸುವುದು. ಈ ಯಾಗ ಮಾಡುವುದರಿಂದ ಮನುಷ್ಯನ ಆರೋಗ್ಯ ವೃದ್ಧಿಯ ಜೊತೆಗೆ ಆಯಸ್ಸು ಹೆಚ್ಚುತ್ತದೆ. ಪಾಪ, ಕರ್ಮಗಳು ದೂರವಾಗುತ್ತವೆ. ಪುಣ್ಯಗಳು ಅರಸಿಕೊಂಡು ಬರುತ್ತವೆ. ಸಂಪತ್ತು ಇಮ್ಮಡಿಗೊಳ್ಳುತ್ತದೆ ಎಂದರು.ಅತಿರುದ್ಧ ಮಹಾಯಾಗವು ಬಹಳಷ್ಟು ಕಠಿಣವಾದ ವ್ರತವಾಗಿದೆ, ಭಕ್ತಿಯಿಂದ ಜಪ, ತಪ, ಪಾರಾಯಣ ಮಂತ್ರ ಘೋಷಣೆ ಮಾಡುವುದರಿಂದ ಮನುಜನಿಗೆ ಸದಾ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದರು. ಅನೇಕ ಪುರೋಹಿತರು, ಶಾಸ್ತ್ರಿಗಳು, ಒಟುಗಳು ಮಹಾಯಾಗದ ನೇತೃತ್ವ ವಹಿಸಿದ್ದರು. ಇಂದಿನ ಪ್ರಥಮ ಮಹಾಯಾಗದಲ್ಲಿ ಹಿರೇಕೆರೂರ ಶಾಸಕ ಯು.ಬಿ. ಬಣಕಾರ ದಂಪತಿ ಸೇರಿದಂತೆ ಅನೇಕ ದಂಪತಿಗಳು ಯಾಗದಲ್ಲಿ ಭಾಗವಹಿಸಿ ಭಕ್ತಿಯ ಮೆರೆದದ್ದು ವಿಶೇಷವಾಗಿತ್ತು.