ಸಾರಾಂಶ
ಕನ್ನಡಪ್ರಭ ವಾರ್ತೆ ಆನೆಗೊಂದಿ
ಆನೆಗೊಂದಿ ಉತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ಉತ್ಸವದ ಮುಖ್ಯ ವೇದಿಕೆ ಆವರಣದಲ್ಲಿ ಫಲ-ಪುಷ್ಪ ಪ್ರದರ್ಶನಕ್ಕೆ ಶಾಸಕ ಜಿ. ಜನಾರ್ದನ ರೆಡ್ಡಿ ಸೋಮವಾರ ಚಾಲನೆ ನೀಡಿದರು.ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಬಗೆಯ ಹೂವಿನ ಮತ್ತು ಹಣ್ಣಿನ ಮಾದರಿಗಳನ್ನು ಸಿದ್ಧಪಡಿಸಲಾಗಿದೆ. ಹೂವಿನ ಜೋಡಣೆ ಮುಖಾಂತರ ವಿವಿಧ ರೀತಿಯ ಮಾದರಿಯ ಸ್ತಬ್ಧ ಚಿತ್ರಗಳ ಮೂಲಕ ಜನರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ವಿಶೇಷವಾಗಿ ಹಣ್ಣುಗಳಲ್ಲಿ ನಾಡದೇವತೆಯಾದ ಭುವನೇಶ್ವರಿ ದೇವಿ, ಕುವೆಂಪು, ದ.ರಾ. ಬೇಂದ್ರೆ, ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಚಿತ್ರಗಳು ಹಾಗೂ ಆನೆಗೊಂದಿ ಕೋಟೆಯ ಮುನ್ನೋಟ, ಹಂಪಿ ದೇವಸ್ಥಾನದ ಗೋಪುರ ಸ್ತಬ್ಧ ಚಿತ್ರ ವಿವಿಧ ಮಾದರಿಯ ಅಲಂಕಾರಿಕ ಗಿಡಗಳ ಜೋಡಣೆ, ಕ್ಯಾಕ್ಟಸ್ ಮಾದರಿ, ತ್ರಿಕೋನಾಕಾರ ಅಲಂಕಾರಿಕ ಗಿಡಗಳ ಮಾದರಿ, ಹುಲ್ಲಿನ ಮಾದರಿಯ ನೀರಿನ ಜಲಪಾತ ಅನಾವರಣ, ವಿವಿಧ ಹಣ್ಣು ಮತ್ತು ತರಕಾರಿಗಳ ಕೆತ್ತನೆ, ಜಿಲ್ಲೆಯ ರೈತರು ಬೆಳೆದ ತೋಟಗಾರಿಕೆ ಬೆಳೆಗಳ ಪ್ರದರ್ಶಿಕೆಗಳು, ವಿವಿಧ ಅಲಂಕಾರಿಕ ಕುಂಡಗಳ ಜೋಡಣೆ, ಬಣ್ಣ ಬಣ್ಣದ ಹೂವುಗಳ ಮತ್ತು ತರಕಾರಿಗಳ ಜೋಡಣೆ ಹಾಗೂ ಇಲಾಖೆಯ ಯೋಜನೆಗಳ ಮಾಹಿತಿಗಳ ಬಗ್ಗೆ ವಿವರಣೆ ಹಾಗೂ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಪರಿಕರಗಳ ಪ್ರದರ್ಶನವನ್ನು ಈ ಫಲಪುಷ್ಪ ಪ್ರದರ್ಶನದಲ್ಲಿ ಅನಾವರಣಗೊಳಿಸಲಾಗಿದ್ದು, ಒಟ್ಟಾರೆ ಈ ಫಲ-ಪುಷ್ಪ ಪ್ರದರ್ಶನವು ತುಂಬಾ ಆಕರ್ಷಣಿವಾಗಿದ್ದು, ಜನರನ್ನು ತನ್ನತ್ತ ಕೈಬೀಸಿ ಕರೆಯುವಂತಿದೆ.
ಈ ಸಂದರ್ಭದಲ್ಲಿ ರಾಜವಂಶಸ್ಥೆ ಲಲಿತರಾಣಿ ರಂಗದೇವರಾಯಲು, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಗಂಗಾವತಿ ತಹಸೀಲ್ದಾರ ಯು.ನಾಗರಾಜ, ಗಣ್ಯರಾದ ಅರುಣಾ ಲಕ್ಷ್ಮೀ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.