ಸಾರಾಂಶ
ಭಟ್ಕಳದಲ್ಲಿ ಶಾಲಾ ವಾಹನಗಳು ಬೇಕಾಬಿಟ್ಟಿ ಚಲಾಯಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಇದು ಸರಿಯಲ್ಲ.
ಭಟ್ಕಳ:
ಶಾಲಾ ಬಸ್ ಚಾಲಕರು ಯಾವುದೇ ಗಡಿಬಿಡಿ, ಒತ್ತಡಗಳಿಗೆ ಒಳಗಾಗದೇ ಸುರಕ್ಷಿತವಾಗಿ ಚಾಲನೆ ಮಾಡಬೇಕು ಎಂದು ಬಿಇಒ ವಿ.ಡಿ. ಮೊಗೇರ ಹೇಳಿದರು.ಅವರು ಗುರುವಾರ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯ ಸಭಾಂಗಣದಲ್ಲಿ ತಾಲೂಕಿನ ಖಾಸಗಿ ಅನುದಾನಿತ ಶಾಲೆಗಳ ವಾಹನ ಚಾಲಕರು, ಆಡಳಿತ ಮಂಡಳಿ ಮುಖ್ಯಸ್ಥರು ಹಾಗೂ ಮುಖ್ಯಾಧ್ಯಾಪರ ಸಭೆ ಉದ್ದೇಶಿಸಿ ಮಾತನಾಡಿದರು.
ಮಕ್ಕಳ ಜೀವ ಎಷ್ಟು ಮುಖ್ಯವೋ ನಿಮ್ಮ ಜೀವವೂ ಕೂಡ ಅಷ್ಟೇ ಮುಖ್ಯ. ಭಟ್ಕಳ ತಾಲೂಕಿನಲ್ಲಿ ೧೪೦ಕ್ಕೂ ಹೆಚ್ಚು ವಾಹನಗಳು ನಿತ್ಯವೋ ಸಾವಿರಾರು ಮಕ್ಕಳನ್ನು ಶಾಲೆಗೆ ತಲುಪಿಸುವ ಕಾಯಕದಲ್ಲಿ ನಿರತವಾಗಿವೆ. ಪಾಲಕರು ತಮ್ಮ ಮಕ್ಕಳ ಜೀವವನ್ನು ನಿಮ್ಮ ಕೈಯಲ್ಲಿ ನೀಡುತ್ತಾರೆ. ವಾಹನದಲ್ಲಿ ಮಕ್ಕಳು ಪ್ರಯಾಣಿಸುತ್ತಿಲ್ಲ, ಬದಲಾಗಿ ಭಾರತದ ಭವಿಷ್ಯದ ಪ್ರಜೆಗಳು ಪ್ರಯಾಣಿಸುತ್ತಿದ್ದಾರೆ ಎಂದು ಭಾವಿಸಿ ಚಾಲನೆ ಮಾಡಿ ಎಂದು ಕಿವಿಮಾತು ಹೇಳಿದರು.ಪಿಎಸ್ಐ ರಾಜೇಶ್ ನಾಯ್ಕ, ಭಟ್ಕಳದಲ್ಲಿ ಶಾಲಾ ವಾಹನಗಳು ಬೇಕಾಬಿಟ್ಟಿ ಚಲಾಯಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಇದು ಸರಿಯಲ್ಲ. ಸುರಕ್ಷತೆ ಪ್ರಯಾಣದ ಎಲ್ಲ ನಿಯಮ ಪಾಲಿಸುತ್ತ ವಾಹನಕ್ಕೆ ಸಂಬಂಧಿಸಿದ ಎಲ್ಲ ರೀತಿಯ ದಾಖಲೆ ಇಟ್ಟುಕೊಳ್ಳಬೇಕು ಮತ್ತು ಕಾಲಕಾಲಕ್ಕೆ ನವೀಕರಣಗೊಳಿಸುತ್ತಿರಬೇಕು ಎಂದು ಮಾಹಿತಿ ನೀಡಿದರು.ಪಿಎಸ್ಐ ನಾಗೇಶ್ ಮಡಿವಾಳ, ನ್ಯೂ ಶಮ್ಸ್ ಸ್ಕೂಲ್ನ ಹಿರಿಯ ಶಿಕ್ಷಕ ಮುಹಮ್ಮದ್ ರಝಾ ಮಾನ್ವಿ ಹಾಗೂ ಆರ್ಎನ್ಎಸ್ ಆಡಳಿತ ಮಂಡಳಿ ಆಡಳಿತಾಧಿಕಾರಿ ದಿನೇಶ್ ಗಾಂವಕರ್ ಮಾತನಾಡಿದರು. ಮುಖ್ಯಾಧ್ಯಾಪಕ ಶಬ್ಬಿರ್ ಆಹ್ಮದ್ ದಫೆದಾರ್, ಕ್ಷೇತ್ರ ಶಿಕ್ಷಣ ಕಚೇರಿಯ ಇಸಿಒ ಆಶೋಕ ಆಚಾರ್ಯ ಉಪಸ್ಥಿತರಿದ್ದರು.