ಕನ್ನಡಪ್ರಭ ವಾರ್ತೆ ಶಿಕಾರಿಪುರ
ಇತ್ತೀಚೆಗೆ ಬಂಜಾರ ಸಮುದಾಯದ ಪರಮ ಪವಿತ್ರ ಸೂರಗೊಂಡನಕೊಪ್ಪ ಸುಕ್ಷೇತ್ರದಲ್ಲಿ ನಡೆದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಕೆಲ ಕಿಡಿಗೇಡಿಗಳ ವರ್ತನೆಗೆ ಅಮಾಯಕ ಕಠಿಣ ಹಲವು ವ್ರತಧಾರಿಗಳ ವಿರುದ್ದ ದೂರು ದಾಖಲಿಸಿರುವುದು ಅತ್ಯಂತ ಹೇಯ ಕೃತ್ಯ. ಈ ಕೂಡಲೇ ಸರ್ಕಾರ ದೂರು ವಾಪಾಸ್ ಪಡೆದು ಸಮುದಾಯದ ಧಾರ್ಮಿಕ ಬಾವನೆಯನ್ನು ಗೌರವಿಸುವಂತೆ ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ಗಂಗಾನಾಯ್ಕ ಇಟ್ಟಿಗೆಹಳ್ಳಿ ಆಗ್ರಹಿಸಿದರು.ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಕೆಲ ದಿನದ ಹಿಂದೆ ತಾಲೂಕಿಗೆ ಸಮೀಪವಿರುವ ಬಂಜಾರ್ ಸಮಾಜದ ಪುಣ್ಯಕ್ಷೇತ್ರ ಸೂರಗೊಂಡನಕೊಪ್ಪದಲ್ಲಿ ನಡೆದ ಸಂತ ಸೇವಾಲಾಲ್ರ 287ನೇ ಜಯಂತಿ ಕಾರ್ಯಕ್ರಮಕ್ಕೆ ದೇಶದ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಕಠಿಣ ವ್ರತಧಾರಿಗಳಾಗಿ ಮಾಲಾಧಾರಿಗಳು ಆಗಮಿಸಿದ್ದು ಕೆಲವರು ಪಾದಯಾತ್ರೆ ಮೂಲಕ ಪಾಲ್ಗೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಒಳಮೀಸಲಾತಿಯನ್ನು ವರ್ಗೀಕರಿಸಿದ ಸರ್ಕಾರ ಸಮುದಾಯಕ್ಕೆ ದ್ರೋಹ ಬಗೆದಿದೆ ಎಂದು ಆರೋಪಿಸಿ ಕಪ್ಪು ಬಟ್ಟೆ ಧರಿಸಿ ಅನ್ಯಾಯವನ್ನು ಖಂಡಿಸುವ ಭರದಲ್ಲಿ ಕೆಲವರು ಉದ್ರೇಕರಾಗಿ ಹಾಜರಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಸರ್ಕಾರಕ್ಕೆ ಧಿಕ್ಕಾರದ ಜತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಕೆಲ ಕಿಡಿಗೇಡಿಗಳ ವರ್ತನೆ ಸಮುದಾಯಕ್ಕೆ ಕಪ್ಪು ಚುಕ್ಕೆಯಾಗಿದೆ ಎಂದು ವಿಷಾದಿಸಿದರು.
ಕಿಡಿಗೇಡಿಗಳ ವರ್ತನೆಗೆ ಉಪಮುಖ್ಯಮಂತ್ರಿಗಳು ಜಗ್ಗುವುದಿಲ್ಲ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಉದ್ದಟತನದಿಂದ ವರ್ತಿಸಿದ್ದಾರೆ. ಕಿಡಿಗೇಡಿಗಳ ಅಸಭ್ಯ ವರ್ತನೆಗೆ ಕಠಿಣ ವ್ರತಧಾರಿ 26 ಮಾಲಾಧಾರಿಗಳ ವಿರುದ್ದ ದೂರು ದಾಖಲಿಸಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಅತ್ಯಂತ ಹಿಂದುಳಿದ ಶ್ರಮಿಕ ವರ್ಗಕ್ಕೆ ಇದರಿಂದ ತೀವ್ರ ನೋವುಂಟಾಗಿದ್ದು ಪರಿಶೀಲಿಸಿ ಕೃತ್ಯದಲ್ಲಿ ಪಾಲ್ಗೊಂಡ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಮಾಲಾಧಾರಿಗಳ ವಿರುದ್ದ ದೂರು ವಾಪಾಸ್ ಪಡೆಯುವಂತೆ ಒತ್ತಾಯಿಸಿದರು.ಗೋರ್ ಸೇನಾ ಜಿಲ್ಲಾಧ್ಯಕ್ಷ ಚಂದ್ರು ನಾಯ್ಕ, ತಾ.ಬಂಜಾರ ಸಮಾಜದ ನಿರ್ದೇಶಕಿ ಸವಿತಾಬಾಯಿ, ಸಮಾಜದ ಉಪಾಧ್ಯಕ್ಷ ಕರಿಬಸವನಾಯ್ಕ ಬಿಳಕಿ, ಸಹ ಕಾರ್ಯ ದರ್ಶಿ ಆನಂದನಾಯ್ಕ, ನಿರ್ದೇಶಕರಾದ ಕುಮಾರನಾಯ್ಕ, ಜಗದೀಶ್ ನಾಯ್ಕ, ಗುರುಮೂರ್ತಿನಾಯ್ಕ, ಶಿವುನಾಯ್ಕ, ಮಂಜುನಾಯ್ಕ (ಚೋಟು), ಸತೀಶ್ ನಾಯ್ಕ, ಹನುಮಂತನಾಯ್ಕ ಮತ್ತಿತರರು ಹಾಜರಿದ್ದರು.