ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘ ಮಂಗಳೂರು ನಗರ ಪೊಲೀಸ್ ಮತ್ತು ರೋಶನಿ ನಿಲಯ ವಿದ್ಯಾ ಸಂಸ್ಥೆಗಳ ಸಹಯೋಗದಲ್ಲಿ ಸ್ಟೇಟ್ ಬ್ಯಾಂಕ್ನ ಕೇಂದ್ರ ಬಸ್ ನಿಲ್ದಾಣದ ಬಳಿ ಬುಧವಾರ ಮಾದಕ ದ್ರವ್ಯ ವ್ಯಸನಗಳ ವಿರುದ್ಧ ಜನಜಾಗೃತಿ
ಮಂಗಳೂರು: ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘ ಮಂಗಳೂರು ನಗರ ಪೊಲೀಸ್ ಮತ್ತು ರೋಶನಿ ನಿಲಯ ವಿದ್ಯಾ ಸಂಸ್ಥೆಗಳ ಸಹಯೋಗದಲ್ಲಿ ಸ್ಟೇಟ್ ಬ್ಯಾಂಕ್ನ ಕೇಂದ್ರ ಬಸ್ ನಿಲ್ದಾಣದ ಬಳಿ ಬುಧವಾರ ಮಾದಕ ದ್ರವ್ಯ ವ್ಯಸನಗಳ ವಿರುದ್ಧ ಜನಜಾಗೃತಿ ಕಾರ್ಯಕ್ರಮ ನಡೆಯಿತು.
ಮಂಗಳೂರು ನಗರ ಉಪ ಪೊಲೀಸ್ ಆಯುಕ್ತ ಪಿ.ಉಮೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸಮಾರಂಭದಲ್ಲಿ ಎಸಿಪಿ ರವೀಶ್ ನಾಯ್ಕ್ ಮಾತನಾಡಿ, ಮಾದಕ ದ್ರವ್ಯ ಬಳಕೆಯಿಂದ ಸಮಾಜದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು. ಮಾದಕ ದ್ರವ್ಯ ಸೇವನೆ ಒಂದು ಪಿಡುಗು. ಮಕ್ಕಳು ಮಾದಕ ದ್ರವ್ಯ ಸೇವನೆ ಮಾಡುವವರು ಬಂದರೆ ಅವರ ಮಾಹಿತಿ ಗೌಪ್ಯವಾಗಿಟ್ಟು ಅವರಿಗೆ ಚಿಕಿತ್ಸೆಗೆ ಸಹಾಯ ಮಾಡಲಾಗುವುದು. ನಗರದಲ್ಲಿ ಮಾದಕ ಪದಾರ್ಥಗಳ ಪೂರೈಕೆ ಮಾಡುವವರ ವಿರುದ್ಧ ಪ್ರಕರಣ ದಾಖಲು ಮಾಡಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ ಎಂದರು. ಸೈಬರ್ ಕ್ರೈಮ್ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಭಯ ಪಡಬಾರದು ಧೈರ್ಯವಾಗಿ ಎದುರಿಸಬೇಕು. ಪೊಲೀಸರ ಸಹಾಯ ಪಡೆದುಕೊಳ್ಳಬೇಕು. ಇದುವರೆಗೆ ಸೈಬರ್ ಕ್ರೈಂಗೆ ಸಂಬಂಧಿಸಿದಂತೆ ಮಂಗಳೂರಿನ 6,500 ಮಂದಿ ಮೇಲೆ ಕೇಸ್ ಇದೆ. ಲೋನ್ ಆ್ಯಪ್, ಗೇಮ್ ಆ್ಯಪ್ ಮೂಲಕ ಜನರನ್ನು ವಂಚಿಸಿ ಹಣ ಪಡೆಯುವ ವಂಚನೆ ಜಾಲ ಇದೆ. ಜೊತೆಗೆ ಬ್ಲಾಕ್ ಮೇಲ್ ಮಾಡುವವರು, ಡಿಜಿಟಲ್ ಅರೆಸ್ಟ್, ಪೊಲೀಸ್ ಡ್ರೆಸ್ ಹಾಕಿ ವಂಚಿಸುವವರು, ಪೋನ್ ಮಾಡುವವರು ಇದ್ದಾರೆ. ಇವರಿಂದ ಸಾಕಷ್ಟು ಜನರ ಜೀವಮಾನದ ಉಳಿತಾಯ ನಷ್ಟ ಆಗುತ್ತಿದೆ. ಈ ರೀತಿಯ ಸಮಸ್ಯೆ ಇದ್ದರೆ 1930 ಗೆ ಪೋನ್ ಮಾಡಿ ಪೊಲೀಸರ ಪಡೆದು ಕೊಳ್ಳಬಹುದು. ಇಂತಹ ಕರೆಗಳ ಬಗ್ಗೆ ಅಪ್ತರ ಬಳಿ ವಿಚಾರಿಸಿ ಹಂಚಿಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು.ಎಸಿಪಿ ಪ್ರತಾಪ್ ಸಿಂಗ್ ಥೋರಟ್ ಮಾದಕ ವ್ಯಸನದ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಿದರು.
ರೋಶನಿ ನಿಲಯ ಸಮಾಜ ಕಾರ್ಯ ಕಾಲೇಜಿನ ಉಪನ್ಯಾಸಕ ಸ್ಯಾಂಡ್ರೊ ಲೋಬೊ, ಸಾರಿಕ ಅಂಕಿತ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಮಾಹಿತಿ ನೀಡಿದರು. ಬಳಿಕ ವಿದ್ಯಾರ್ಥಿಗಳು ಬೀದಿ ನಾಟಕದ ಮೂಲಕ ಜನಜಾಗೃತಿ ಕಾರ್ಯಕ್ರಮ ನಡೆಯಿತು. ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು.ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್, ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘದ ಪೂರ್ವಾಧ್ಯಕ್ಷ ಜಯರಾಮ ಶೇಖ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್, ಜೊತೆ ಕಾರ್ಯದರ್ಶಿ ರಾಜೇಶ್ ಟಿ, ಕೋಶಾಧಿಕಾರಿ ಜೊಯೆಲ್ ದಿಲ್ ರಾಜ್ ಫರ್ನಾಂಡಿಸ್ ಮತ್ತಿತರರಿದ್ದರು.