ಸಾರಾಂಶ
ಹೊಸಕೋಟೆ: ಕುಡಿದ ಅಮಲಿನಲ್ಲಿ ಕಾರು ಚಾಲಕನೊಬ್ಬ ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿ ಮುಂದೆ ಚಲಿಸುತ್ತಿದ್ದ ಎರಡು ಬೈಕ್ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಮೃತಪಟ್ಟು, ಇನ್ನಿಬ್ಬರು ಸವಾರರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ತಾಲೂಕಿನ ದೊಡ್ಡಹುಲ್ಲೂರು ಬಳಿ ನಡೆದಿದೆ.
ತಾಲೂಕಿನ ಕಣ್ಣೂರಹಳ್ಳಿ ಗ್ರಾಮದ ಜಗದೀಶ್(27), ಹಾಗೂ ಶಿವಾಜಿನಗರದ ಮಹಮದ್ ಫೈಜ್(17) ಮೃತಪಟ್ಟವರು, ಶಿವಾಜಿನಗರದ ಅರ್ಬಾಜ್ (18), ಅಬುಜರ್(18) ಸ್ಥಿತಿ ಗಂಭೀರವಾಗಿದ್ದು, ಹೊಸಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ತಾಲೂಕಿನ ದೊಡ್ಡಹುಲ್ಲೂರು ಗ್ರಾಮದ ಪ್ರಗತಿಶೀಲರಾವ್ ಎಂಬಾತ ಬುಧವಾರ ರಾತ್ರಿ 11 ಗಂಟೆ ವೇಳೆಯಲ್ಲಿ ಕುಡಿದ ಮತ್ತಿನಲ್ಲಿ ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿ ಅಪಘಾತಕ್ಕೆ ಕಾರಣನಾಗಿ ನಾಪತ್ತೆಯಾಗಿದ್ದಾನೆ. ಮೃತ ಕಣ್ಣೂರಹಳ್ಳಿ ಜಗದೀಶ್ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ ಕರ್ತವ್ಯ ಮುಗಿಸಿ ಮನೆಗೆ ತೆರಳುವ ವೇಳೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಉಳಿದಂತೆ ಶಿವಾಜಿನಗರದ ಮಹಮದ್ ಫೈಜ್, ಅರ್ಬಾಜ್, ಅಬುಜರ್ ಮೂವರು ಒಂದೇ ಬೈಕ್ನಲ್ಲಿ ಶಿವಾಜಿನಗರದಿಂದ ಹೊಸಕೋಟೆ-ಚಿಂತಾಮಣಿ ರಸ್ತೆಯ ತಾಜ್ ಹೋಟೆಲ್ನಲ್ಲಿ ಊಟಕ್ಕಾಗಿ ಮನೆಯಲ್ಲಿ ಸುಳ್ಳು ಹೇಳಿ ಬಂದಿದ್ದರು ಎನ್ನಲಾಗಿದೆ. ಆದರೆ ಅಪಘಾತದ ವೇಳೆ ಮೂವರು ಒಂದೇ ಬೈಕ್ನಲ್ಲಿ ತೆರಳುವ ವೇಳೆ ಅಪಘಾತ ಸಂಭವಿಸಿ ಮಹಮದ್ ಫೈಜ್ ಮೃತಪಟ್ಟಿದ್ದು, ಅರ್ಬಾಜ್, ಅಬುಜರ್ ಸ್ಥಿತಿ ಗಂಭೀರವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರ ಕುಟುಂಬ ಸದಸ್ಯರ ಆಕ್ರೋಶ:ಅಪಘಾತದ ವೇಳೆ ಕಾರಿನಲ್ಲಿ ಮದ್ಯದ ಬಾಟಲ್ಗಳು, ಗಾಂಜಾ ಕಾರಿನಲ್ಲಿದ್ದು, ನಾಪತ್ತೆಯಾಗಿರುವ ಕಾರು ಚಾಲಕ ಪ್ರಗತಿಶೀಲರಾವ್ನನ್ನು ಬಂಧಿಸುವವರೆಗೆ ಮೃತದೇಹಗಳನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಲ್ಲ. ಬದಲಾಗಿ ಪೊಲೀಸ್ ಠಾಣೆ ಮುಂದೆ ಇಟ್ಟು ಪ್ರತಿಭಟನೆ ಮಾಡ್ತೇವೆ ಎಂದು ಮೃತರ ಕುಟುಂಬದ ಸದಸ್ಯರು ಪಟ್ಟು ಹಿಡಿದರು. ಸ್ಥಳಕ್ಕೆ ಧಾವಿಸಿದ ಡಿವೈಎಸ್ಪಿ ರವಿ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಮನವೊಲಿಸಿದರು. ಫೋಟೋ: ೬ ಹೆಚ್ಎಸ್ಕೆ 3, 4, 5 , 6, 7
3: ಮೃತ ಜಗದೀಶ್ ಭಾವಚಿತ್ರ.4: ಮೃತ ಮಹಮದ್ ಫೈಜ್ ಭಾವಚಿತ್ರ.
5: ಅಪಘಾತ ಗೊಂಡ ಕಾರು ನಜ್ಜುಗುಜ್ಜಾಗಿರುವುದು.6: ಕಾರಿನಲ್ಲಿರುವ ಮದ್ಯದ ಬಾಟಲ್ ಪಾಕೆಟ್ಗಳು.
7: ಹೊಸಕೋಟೆ ಸರ್ಕಾರಿ ಆಸ್ಪತ್ರೆ ಶವಾಗಾರದ ಮೃತ ಸಂಬಂಧಿಕರ ಆಕ್ರೋಶ.