ಡೆಂಘೀ ತಡೆಗೆ ಉಡುಪಿ ನಗರಸಭೆ ವತಿಯಿಂದ ಡ್ರೈಡೇ

| Published : Jul 27 2024, 12:49 AM IST

ಸಾರಾಂಶ

ಅಂಗಡಿಗಳ ಸರ್ವೆ ನಡೆಸಿ ಸುತ್ತಮುತ್ತ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಅರಿವು ಮೂಡಿಸಲಾಗುತ್ತಿದೆ. ಈಗಾಗಲೇ ಸ್ವಚ್ಛತೆಯನ್ನು ಕಾಪಾಡದ ೧೭೧ ಅಂಗಡಿಗಳಿಗೆ ನಗರಸಭೆ ವತಿಯಿಂದ ನೋಟಿಸ್ ನೀಡಿ ೭೨೦೦ ರು. ದಂಡ ವಸೂಲಿ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ನಗರಸಭೆ ವತಿಯಿಂದ ಡೆಂಘೀ, ಚಿಕೂನ್ ಗೂನ್ಯ, ಮಲೇರಿಯಾ, ಡಯೇರಿಯಾ ಮತ್ತು ಫೈಲೇರಿಯಾ ಮುಂತಾದ ಸಾಂಕ್ರಮಿಕ ರೋಗಗಳು ಹರಡದಂತೆ ಮಾಹಿತಿ ಕಾರ್ಯಾಗಾರ ಮತ್ತು ಡ್ರೈ ಡೇ (ಒಣದಿನ)ಯನ್ನು ನಗರದ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಶುಕ್ರವಾರ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪೌರಾಯುಕ್ತ ರಾಯಪ್ಪ ಮಾತನಾಡಿ, ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಡೆಂಘೀ ಮುಂಜಾಗೃತಾ ಕ್ರಮವಾಗಿ ಅಪಾರ್ಟ್ಮೆಂಟ್, ಹೋಟೆಲ್, ಅಂಗಡಿಗಳು, ಗೂಡಂಗಡಿಗಳು, ಫಾಸ್ಟ್ ಫುಡ್ ಅಂಗಡಿಗಳು ಸೇರಿದಂತೆ ಮತ್ತಿತರ ಅಂಗಡಿಗಳ ಸರ್ವೆ ನಡೆಸಿ ಸುತ್ತಮುತ್ತ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಅರಿವು ಮೂಡಿಸಲಾಗುತ್ತಿದೆ. ಈಗಾಗಲೇ ಸ್ವಚ್ಛತೆಯನ್ನು ಕಾಪಾಡದ ೧೭೧ ಅಂಗಡಿಗಳಿಗೆ ನಗರಸಭೆ ವತಿಯಿಂದ ನೋಟಿಸ್ ನೀಡಿ ೭೨೦೦ ರು. ದಂಡ ವಸೂಲಿ ಮಾಡಲಾಗಿರುತ್ತದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗದಂತೆ ಮುಂಜಾಗೃತೆ ವಹಿಸಿ ನಗರಸಭೆಯೊಂದಿಗೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿಕೊಂಡರು.

ಈ ಸಂದರ್ಭ ವಿದ್ಯಾರ್ಥಿಗಳಿಗೆ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಬೇವಿನ ಎಣ್ಣೆಯನ್ನು ವಿತರಿಸಿ ಶಾಲೆಯ ಸುತ್ತ ಕೀಟನಾಶಕವನ್ನು ಸಿಂಪಡಿಸಲಾಯಿತು.

ಈ ಸಂದರ್ಭ ಸೈಂಟ್ ಮೇರಿಸ್ ಶಾಲೆಯ ಮುಖ್ಯೋಪಾಧ್ಯಾಯರು, ಪರಿಸರ ಅಭಿಯಂತರರಾದ ಸ್ನೇಹ ಕೆಎಸ್, ಆರೋಗ್ಯ ನಿರೀಕ್ಷರು, ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಇದೇ ಮಾಹಿತಿ ಕಾರ್ಯಾಗಾರವು ಮಲ್ಪೆಯ ಸರ್ಕಾರಿ ಪ್ರೌಢ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿಯೂ ಆಯೋಜಿಸಲಾಗಿತ್ತು. ಪೌರಾಯುಕ್ತರು ವಿದ್ಯಾರ್ಥಿಗಳಿಗೆ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಬೇವಿನ ಎಣ್ಣೆ ವಿತರಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸಂಧ್ಯಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಗದೀಶ ಸಾಲ್ಯಾನ್, ನಗರಸಭೆಯ ಆರೋಗ್ಯ ನಿರೀಕ್ಷಕ ಮನೋಹರ್, ಸೂಪರ್ ವೈಸರ್‌ಗಳಾದ ಪ್ರಶಾಂತ್, ಶ್ರೀಕಾಂತ್, ಶಾಲೆಯ ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಅಶ್ವಿನಿ ಕಾರ್ಯಕ್ರಮ ನಿರ್ವಹಿಸಿದರು.