ಸಾರಾಂಶ
ಬಹದ್ದೂರ್ಬಂಡಿ ಗ್ರಾಮದಲ್ಲಿ ದಂಪತಿ ಸಂಪರ್ಕ ಪಾಕ್ಷಿಕ ದಿನಾಚರಣೆ
ಕನ್ನಡಪ್ರಭ ವಾರ್ತೆ ಕೊಪ್ಪಳಹೆಣ್ಣಾಗಲಿ, ಗಂಡಾಗಲಿ ಮಕ್ಕಳು ಇಬ್ಬರೇ ಇರಲಿ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಿನ ಹಿರೇಸಿಂದೋಗಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಬಹದ್ದೂರ್ಬಂಡಿ ಗ್ರಾಪಂ ಕಾರ್ಯಾಲಯದ ಸಂಯುಕ್ತಾಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ತಾಲೂಕಿನ ಬಹದ್ದೂರ್ಬಂಡಿ ಗ್ರಾಮದ ಆಯುಷ್ಮಾನ್ ಭಾರತ್ ಆರೋಗ್ಯ ಮಂದಿರದಲ್ಲಿ ಸೋಮವಾರ ಜರುಗಿದ ದಂಪತಿ ಸಂಪರ್ಕ ಪಾಕ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರತಿ ವರ್ಷ ಜೂ. 27ರಿಂದ ಜುಲೈ 10ರವರೆಗೆ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ದಂಪತಿ ಸಂಪರ್ಕ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಂಡು ಅರ್ಹ ದಂಪತಿಗಳಿಗೆ ಹಾಗೂ ಯುವ ಜನತೆಗೆ ಅರಿವು ಮೂಡಿಸಲಾಗುತ್ತದೆ. ವಿಶ್ವದ ಜನಸಂಖ್ಯೆಯು 1987ರಲ್ಲಿ 500 ಕೋಟಿ ದಾಟಿದ ಪ್ರಯುಕ್ತ, ಪ್ರತಿ ವರ್ಷ ಜು. 11ರಂದು ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಮುದಾಯದ ಜನಪ್ರತಿನಿಧಿಗಳೊಂದಿಗೆ ಜಾಗೃತಿ ಮೂಡಿಸಲಾಗುತ್ತದೆ. ಜನಸಂಖ್ಯೆ ಹೆಚ್ಚಳದಿಂದ ದೇಶ ಅಭಿವೃದ್ಧಿಯಲ್ಲಿ ಕುಂಠಿತಗೊಳ್ಳುತ್ತದೆ. ನಾನಾ ರೀತಿಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಈ ವರ್ಷದ ಘೋಷವಾಕ್ಯವು ಅಭಿವೃದ್ಧಿ ಹೊಂದಿದ ಭಾರತದ ಹೊಸ ಗುರುತಿಗಾಗಿ ಕುಟುಂಬ ಯೋಜನೆ ಅಳವಡಿಕೆ ಪ್ರತಿ ದಂಪತಿಗಳ ಹೆಮ್ಮೆ ಎಂಬುದಾಗಿದೆ. ಒಂದು ಕುಟುಂಬಕ್ಕೆ 1 ಅಥವಾ 2, ಹೆಣ್ಣಿರಲಿ-ಗಂಡಿರಲಿ ಮಕ್ಕಳು ಎರಡೇ ಇರಲಿ. ಸರ್ಕಾರಿ ನಿಗದಿ ಪಡಿಸಿದ ವಯಸ್ಸಿಗೆ ಮದುವೆ ಮಾಡಬೇಕು. ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಕನಿಷ್ಠ 3 ವರ್ಷ ಅಂತರ ಕಾಪಾಡಲು ಕುಟುಂಬ ಕಲ್ಯಾಣ ಕಾರ್ಯಕ್ರಮದ ತಾತ್ಕಾಲಿಕ ನೂತನ ವಿಧಾನಗಳಾದ ಅಂತರ ಚುಚ್ಚುಮದ್ದು, ಛಾಯಾ ನುಂಗುವ ಮಾತ್ರೆ, ಮಾಲಾ-ಎನ್ ಮಾತ್ರೆ ಹಾಗೂ ಪಿ.ಪಿ.ಐ.ಯು.ಸಿ.ಡಿ (ವಂಕಿದಾರಣೆ) ಇವುಗಳನ್ನು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಶಾಶ್ವತ ವಿಧಾನಗಳಾದ ಮಹಿಳೆಯರಿಗೆ ಉದರ ದರ್ಶಕ ಶಸ್ತ್ರಚಿಕಿತ್ಸೆ ಹಾಗೂ ಪುರುಷರಿಗೆ ವ್ಯಾಸಕ್ಟಮಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಮಾತನಾಡಿ, ಮೂಢನಂಬಿಕೆ, ಅಜ್ಞಾನ, ಅನಕ್ಷರತೆ, ಬಡತನ, ಮಾಹಿತಿ ಕೊರತೆದಿಂದ ಜನಸಂಖ್ಯೆ ಹೆಚ್ಚಳವಾಗುತ್ತದೆ. ಜನಸಂಖ್ಯೆ ಸ್ಪೋಟದಿಂದ ಶೈಕ್ಷಣಿಕ, ಆರ್ಥಿಕ, ಧಾರ್ಮಿಕ, ಸಮಾಜದ ಅಸಮಾನತೆ, ನಿರುದ್ಯೋಗ ಸಮಸ್ಯೆ ಉಂಟಾಗುತ್ತವೆ. ಆದ್ದರಿಂದ ಜನಸಂಖ್ಯೆ ನಿಯಂತ್ರಣಕ್ಕಾಗಿ ಬಾಲ್ಯ ವಿವಾಹ ಮಾಡಬಾರದು ಎಂದು ಹೇಳಿ, ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಅಂತರ ಕಾಪಾಡಲು ಕುಟುಂಬ ಯೋಜನೆಯ ತಾತ್ಕಾಲಿಕ ಮತ್ತು ಶಾಶ್ವತ ವಿಧಾನಗಳ ಮಾದರಿಗಳನ್ನು ತೊರಿಸುತ್ತಾ ದಂಪತಿಗಳಿಗೆ ಜಾಗೃತಿ ಮೂಡಿಸಿದರು.ಗ್ರಾಪಂ ಸದಸ್ಯರಾದ ಮಹಮ್ಮದ್ ರಫೀ, ಮಂಜುನಾಥ, ಶೇಖರಪ್ಪ, ಗುರುಮೂರ್ತಿಯ್ಯ, ಕೆಂಚಮ್ಮ, ಮೆಹಬೂಬ್ಬೀ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪ್ರಭಾವತಿ, ಸಮುದಾಯ ಆರೋಗ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಣಾ ಅಧಿಕಾರಿಗಳಾದ ವಿಜಯಲಕ್ಷ್ಮೀ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿ, ಬಾಣಂತಿಯರು, ಸಾರ್ವಜನಿಕರು ಹಾಗೂ ಸಿಬ್ಬಂದಿ ಇತರರಿದ್ದರು.