ಹೊಳೆಹೊನ್ನೂರಿನಲ್ಲಿ ಮಳೆಯಿಂದಾಗಿ ಅವಾಂತರ ಸೃಷ್ಠಿ

| Published : Oct 13 2024, 01:00 AM IST / Updated: Oct 13 2024, 01:01 AM IST

ಸಾರಾಂಶ

ಭದ್ರಾವತಿ ನಗರದಲ್ಲಿ ಶುಕ್ರವಾರ ಸಂಜೆಯಿಂದ ಧಾರಾಕಾರ ಮಳೆಯಾಗಿದ್ದು, ಚರಂಡಿಗಳಲ್ಲಿ ಕಸಕಡ್ಡಿ ಕಟ್ಟಿಕೊಂಡು ರಸ್ತೆ ಮೇಲೆ ನೀರು ಹರಿಯುತ್ತಿರುವುದು ಕಂಡು ಬಂದಿತು. ಅಲ್ಲದೆ ರಸ್ತೆ ಪಕ್ಕದ ಕೆಲವು ಮನೆಗಳಿಗೆ ಚರಂಡಿ ನೀರು ನುಗ್ಗಿದೆ.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಪಟ್ಟಣದ ಸುತ್ತಮುತ್ತಲ ಪ್ರದೇಶದಲ್ಲಿ ಶುಕ್ರವಾರ ಸಂಜೆಯಿಂದ ತಡರಾತ್ರಿ ವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಅವಾಂತರ ಸೃಷ್ಟಿ ಆಯಿತು.

ಬೆಳಗ್ಗೆಯಿಂದ ಉಷ್ಣಾಂಶದಿಂದ ಕೂಡಿದ್ದ ವಾತಾವಾರಣ ಸಂಜೆ ಅಗುತ್ತಿದ್ದಂತೆ ಮೋಡ ಕವಿದು ಕತ್ತಲೆ ಆವರಿಸಿತು. ನಿಧಾನವಾಗಿ ಶುರು ಇಟ್ಟ ಮಳೆಯು ಏಕಾಏಕಿ ಬಾರಿ ಮಳೆ ಬಿಡಲು ಆರಂಭಿಸಿದ ಮಳೆಯು ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಸುರಿಯಿತು. ಬಳಿಕ ಕೊಂಚ ಬಿಡುವು ಕೊಟ್ಟು ಮತ್ತೆ ಆರಂಭಿಸಿದ ಮಳೆಯು ತಡರಾತ್ರಿ ವರೆಗೂ ಭರ್ಜರಿ ಮಳೆ ಸುರಿಯಿತು. ಬಾರಿ ಮಳೆಯಿಂದಾಗಿ ಪಟ್ಟಣದ ಚನ್ನಗಿರಿ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ತುಂಬಿ ರಸ್ತೆಗೆ ಅಡ್ಡಲಾಗಿ ಹರಿದು ತಗ್ಗು ಪ್ರದೇಶದ ಮನೆ ಹಾಗೂ ಮಳಿಗೆಗಳಿಗೆ ನೀರು ನುಗ್ಗಿ ಅಪಾರ ನಷ್ಟ ಉಂಟು ಮಾಡಿತು.

ರಾತ್ರಿಯಿಡೀ ಜಾಗರಣೆ:

ಚರಂಡಿ ಇಲ್ಲದೆ ಮಳೆ ನೀರು ಚರಂಡಿಯಲ್ಲಿ ಮುಂದೆ ಸರಾಗವಾಗಿ ಹರಿದು ಹೋಗಲು ಆಗದೆ ಚರಂಡಿಯಲ್ಲಿನ ಕೊಳಚೆ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದೆ. ಇದರಿಂದ ಚನ್ನಗಿರಿ ರಸ್ತೆ, ಮಿಯಾಜಾನ್ ಕಾಲೋನಿ, ಅಂಬೇಡ್ಕರ್ ನಗರದ ಸುಮಾರು 20ಕ್ಕೂ ಹೆಚ್ಚು ಮನೆಗಳಲ್ಲಿ ಒಂದು ಅಡಿಗೂ ಹೆಚ್ಚು ನೀರು ನಿಂತು ಆಹಾರ ಸಾಮಾಗ್ರಿ ಸೇರಿದಂತೆ ನಿತ್ಯ ಬಳಕೆ ವಸ್ತುಗಳು ತೊಯ್ದು ತೊಪ್ಪೆಯಾದವು. ಇದರಿಂದ ಮನೆಯಿಂದ ನೀರು ಹೊರಹಾಕಲು ಹರಸಾಹಸಪಟ್ಟರು. ಆದರೂ ಮಳೆ ನೀರಿನಿಂದ ಹಾಸಿಗೆ, ಹೊದಿಕೆಗಳು ಹಸಿಯಾಗಿದ್ದು, ರಾತ್ರಿ ಮಲಗಲು ಸಾಧ್ಯವಾಗದೆ ಜಾಗರಣೆ ಮಾಡುವಂತಾಯಿತು.

ಅಧಿಕಾರಿಗಳ ನಿರ್ಲಕ್ಷ್ಯತನ:

ಪ್ರತಿ ಬಾರಿ ಮಳೆ ಬಂದಾಗ ಇದೇ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಈ ಬಗ್ಗೆ ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗೆ ಮನವಿ ಪತ್ರ ಕೊಟ್ಟು ಸೂಕ್ತ ಚರಂಡಿ ವ್ಯವಸ್ಥೆ ಮಾಡು ವಂತೆ ಗಮನಕ್ಕೆ ತರಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯತನ ತೋರಿದ್ದಾರೆ. ಇದರಿಂದ ಮಳೆ ನೀರು ಮನೆ ಹಾಗೂ ಮಳಿಗೆಗೆ ನುಗ್ಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾಳಾಗಿವೆ. ಇಂತಹ ಅವ್ಯವಸ್ಥೆಯ ಪಟ್ಟಣ ಪಂಚಾಯಿತಿಯ ನಿರ್ಲಕ್ಷ್ಯತನಕ್ಕೆ ಸಂತ್ರಸ್ತರು ಹಿಡಿಶಾಪ ಹಾಕಿದ್ದಾರೆ.

ಪಂಚಾಯಿತಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಆಗಿರುವ ನಷ್ಟ ಭರಿಸಬೇಕು. ತಕ್ಷಣ ಈ ಬಗ್ಗೆ ಗಮನ ಹರಿಸಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಸೋಮವಾರ ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಭದ್ರಾವತೀಲಿ ಮಳೆಯಾರ್ಭಟ; ಹಬ್ಬದ ಸಂಭ್ರಮ ಕಸಿದ ವರುಣಭದ್ರಾವತಿ: ನಗರದಲ್ಲಿ ಶುಕ್ರವಾರ ಸಂಜೆಯಿಂದ ಧಾರಾಕಾರ ಮಳೆಯಾಗಿದ್ದು, ಇದರಿಂದಾಗಿ ಕೆಲವು ಗಂಟೆಗಳವರೆಗೆ ಜನಜೀವನ ಸ್ತಬ್ಧಗೊಂಡಿತ್ತು.ಹಳ್ಳಕೊಳ್ಳಗಳ್ಳಲ್ಲಿ ನೀರು ತುಂಬಿಕೊಂಡಿದ್ದು, ಕೆಲವು ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಚರಂಡಿಗಳಲ್ಲಿ ಕಸಕಡ್ಡಿ ಕಟ್ಟಿಕೊಂಡು ರಸ್ತೆ ಮೇಲೆ ನೀರು ಹರಿಯುತ್ತಿರುವುದು ಕಂಡು ಬಂದಿತು. ಅಲ್ಲದೆ ರಸ್ತೆ ಪಕ್ಕದ ಕೆಲವು ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಆಯುಧಪೂಜೆ ದಿನದಂದು ಮಳೆಯಾಗಿರುವುದು ಕೆಲವು ಗಂಟೆಗಳವರೆಗೆ ಹಬ್ಬದ ಸಂಭ್ರಮ ಕುಸಿಯುವಂತೆ ಮಾಡಿತು.ವ್ಯಾಪಾರ ವಹಿವಾಟು ಸ್ಥಗಿತ :ಸಂಜೆ ಏಕಾಏಕಿ ಧಾರಾಕಾರವಾಗಿ ಮಳೆಯಾದ ಹಿನ್ನೆಲೆಯಲ್ಲಿ ಹೂ-ಹಣ್ಣು, ತರಕಾರಿ ವ್ಯಾಪಾರಸ್ಥರು, ಬೀದಿಬದಿ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ನಗರದ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ, ಮಾರುಕಟ್ಟೆಯಲ್ಲಿ ಬೆಳಿಗ್ಗೆಯಿಂದ ಭರ್ಜರಿ ವ್ಯಾಪಾರ ವಹಿವಾಟು ನಡೆದಿದ್ದು, ಸಂಜೆ ಧಾರಾಕಾರ ಮಳೆಯಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತು. ಜನರು ಮನೆಯಿಂದ ಹೊರಬಾರದೆ ಮನೆಗಳಲ್ಲಿ ಉಳಿದುಕೊಂಡಿದ್ದು, ಹೆಚ್ಚಿನ ವ್ಯಾಪಾರ ವಹಿವಾಟಿನ ನಿರೀಕ್ಷೆ ಹೊಂದಿದ್ದ ವ್ಯಾಪಾರ ಸ್ಥರು ಹಾಗೂ ವರ್ತಕರಲ್ಲಿ ನಿರಾಸೆ ಉಂಟು ಮಾಡಿತು. ರಾತ್ರಿ ಕತ್ತಲಿನಲ್ಲಿ ಕಳೆದ ಜನರು: ಧಾರಕಾರ ಮಳೆ ಹಿನ್ನೆಲೆಯಲ್ಲಿ ಸಂಜೆ ವಿದ್ಯುತ್ ಸ್ಥಗಿತಗೊಂಡಿದ್ದು, ಮಧ್ಯರಾತ್ರಿವರೆಗೂ ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಯಿತು. ಅಲ್ಲಲ್ಲಿ ಸಣ್ಣಪುಟ್ಟ ವಿದ್ಯುತ್ ಸಮಸ್ಯೆಗಳು ಕಂಡುಬಂದಿದ್ದು, ಶನಿವಾರ ಬೆಳಿಗ್ಗೆ ಕೆಲವು ತಾಸು ವಿದ್ಯುತ್ ವ್ಯತ್ಯಯ ಉಂಟಾಯಿತು. ಮೆಸ್ಕಾಂ ಸಿಬ್ಬಂದಿ ರಾತ್ರಿಯಿಂದಲೇ ಸಣ್ಣಪುಟ್ಟ ವಿದ್ಯುತ್ ಸಮಸ್ಯೆಗಳನ್ನು ಸರಿಪಡಿಸಿದರು.