ಸಾರಾಂಶ
ಹರಿಹರ ನಗರದಲ್ಲಿ ದಸರಾ ಮಹೋತ್ಸವ ಸಮಿತಿ ನೇತೃತ್ವದ ಸಾಮೂಹಿಕ ದಸರಾ ಮತ್ತು ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಶನಿವಾರ ಸಂಜೆ ಶ್ರೀ ಜೋಡು ಬಸವೇಶ್ವರ ದೇವಸ್ಥಾನದಲ್ಲಿ ತಹಸೀಲ್ದಾರ್ ಗುರುಬಸವರಾಜ್ ಬನ್ನಿ ಮುಡಿಯುವ ಮೂಲಕ ತೆರೆಬಿದ್ದಿತು.
ಹರಿಹರ: ನಗರದಲ್ಲಿ ದಸರಾ ಮಹೋತ್ಸವ ಸಮಿತಿ ನೇತೃತ್ವದ ಸಾಮೂಹಿಕ ದಸರಾ ಮತ್ತು ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಶನಿವಾರ ಸಂಜೆ ಶ್ರೀ ಜೋಡು ಬಸವೇಶ್ವರ ದೇವಸ್ಥಾನದಲ್ಲಿ ತಹಸೀಲ್ದಾರ್ ಗುರುಬಸವರಾಜ್ ಬನ್ನಿ ಮುಡಿಯುವ ಮೂಲಕ ತೆರೆ ಬಿದ್ದಿತು.
ನಗರದ ಶ್ರೀ ಹರಿಹರೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆಗೆ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ, ಚಾಲನೆ ನೀಡಿದರು. ದುರ್ಗಾ ಮಾತೆಯ ಉತ್ಸವ ಮೂರ್ತಿ ಹೊತ್ತ ಗಜರಾಜ, ಸಾರ್ವಜನಿಕರ ಗಮನ ಸೆಳೆಯಿತು.ಕಲಾ ತಂಡಗಳೊಂದಿಗೆ ಮೆರವಣಿಗೆಯು ವಿವಿಧ ರಸ್ತೆಗಳಲ್ಲಿ ಸಾಗಿ, ವಾಟರ್ ವರ್ಕ್ಸ್ ಬಳಿಯ ಶ್ರೀ ಜೋಡು ಬಸವೇಶ್ವರ ದೇವಸ್ಥಾನಕ್ಕೆ ಸಂಜೆ ತಲುಪಿತು. ಅಲ್ಲಿ ಸಾಮೂಹಿಕ ಬನ್ನಿ ಮುಡಿಯಲಾಯಿತು. 20ಕ್ಕೂ ಅಧಿಕ ದೇವತೆಗಳು ಉತ್ಸವ ಮೂರ್ತಿಗಳು ಪಾಲ್ಗೊಂಡಿದ್ದವು. ನೆರೆದ ಜನ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಶುಭಾಶಯ ಕೋರಿದರು.
ಅಧ್ಯಕ್ಷತೆಯನ್ನು ಶಂಕರ್ ಕಟಾವ್ಕರ್ ವಹಿಸಿದ್ದರು. ಶಾಸಕ ಬಿ.ಪಿ. ಹರೀಶ್ ಮಾಜಿ ಶಾಸಕರಾದ ಎಸ್. ರಾಮಪ್ಪ, ಎಚ್.ಎಸ್. ಶಿವಶಂಕರ್, ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಎಂ. ಜಂಬಣ್ಣ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಸಹಸ್ರಾರು ಜನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.- - - -12 ಎಚ್ಆರ್ಆರ್ 3: