ರಾಮಮಂದಿರದಲ್ಲಿ ಈ ಬಾರಿಯ ದಸರಾ ಉತ್ಸವ

| Published : Sep 25 2024, 12:54 AM IST

ಸಾರಾಂಶ

ಕಳೆದ 33 ರ್ಷಗಳಿಂದ ತುಮಕೂರು ನಗರದಲ್ಲಿ ದಸರಾ ಉತ್ಸವ ನಡೆಸಿಕೊಂಡು ಬರುತ್ತಿದ್ದ ದಸರಾ ಸಮಿತಿಯನ್ನು ಜಿಲ್ಲಾಡಳಿತ ನಡೆಸುವ ಸರ್ಕಾರಿ ದಸರಾ ಉತ್ಸವ ಸಮಿತಿ ಕಡೆಗಣಿಸಿದ ಹಿನ್ನೆಲೆಯಲ್ಲಿ ನಗರದ ಶ್ರೀರಾಮಮಂದಿರದ ಆವರಣದಲ್ಲಿ 10 ದಿನಗಳ ಕಾಲ ದಸರಾ ಉತ್ಸವದ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಧಿ ವಿಧಾನಗಳು ನಡೆಯಲಿವೆ ಎಂದು ದಸರಾ ಉತ್ಸವ ಸಮಿತಿಯ ಖಜಾಂಚಿ ಜಿ.ಎಸ್.ಬಸವರಾಜು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಕಳೆದ 33 ರ್ಷಗಳಿಂದ ತುಮಕೂರು ನಗರದಲ್ಲಿ ದಸರಾ ಉತ್ಸವ ನಡೆಸಿಕೊಂಡು ಬರುತ್ತಿದ್ದ ದಸರಾ ಸಮಿತಿಯನ್ನು ಜಿಲ್ಲಾಡಳಿತ ನಡೆಸುವ ಸರ್ಕಾರಿ ದಸರಾ ಉತ್ಸವ ಸಮಿತಿ ಕಡೆಗಣಿಸಿದ ಹಿನ್ನೆಲೆಯಲ್ಲಿ ನಗರದ ಶ್ರೀರಾಮಮಂದಿರದ ಆವರಣದಲ್ಲಿ 10 ದಿನಗಳ ಕಾಲ ದಸರಾ ಉತ್ಸವದ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಧಿ ವಿಧಾನಗಳು ನಡೆಯಲಿವೆ ಎಂದು ದಸರಾ ಉತ್ಸವ ಸಮಿತಿಯ ಖಜಾಂಚಿ ಜಿ.ಎಸ್.ಬಸವರಾಜು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಳೆದ 33 ವರ್ಷಗಳಿಂದ ದಸರಾ ಉತ್ಸವ ಸಮಿತಿ ಪ್ರತಿವರ್ಷ ಒಂದೊಂದು ಸಮುದಾಯ ಸ್ವಾಮೀಜಿಗಳ ನೇತೃತ್ವದಲ್ಲಿ ಶೋಭಾ ಯಾತ್ರೆ ಮತ್ತು ಸಾಂಸ್ಕೃತಿಕ ಉತ್ಸವಗಳನ್ನು ನಡೆಸಿಕೊಂಡು ಬರಲಾಗುತಿತ್ತು. ಆದರೆ ಈ ಬಾರಿ ಜಿಲ್ಲಾಡಳಿತವೇ ದಸರಾ ಉತ್ಸವವನ್ನು ಸರ್ಕಾರಿ ಉತ್ಸವವಾಗಿ ಆಚರಿಸಲು ಮುಂದಾದಾಗ ನಾವುಗಳು ಸಹ ಸ್ವಾಗತಿಸಿ,ಅವರೊಂದಿಗೆ ಸಹಕರಿಸಲು ಮುಂದಾಗಿದ್ದೇವು. ಆದರೆ ಜಿಲ್ಲಾಡಳಿತ ನಮ್ಮನ್ನು ಕಡೆಗಣಿಸಿ, ಸರ್ಕಾರದ ಅನುದಾನದಲ್ಲಿ ಒಂದು ಪಕ್ಷದ ಕಾರ್ಯಕ್ರಮವಾಗಿ ಕಾರ್ಯಕ್ರಮ ರೂಪಿಸಿರುವ ಹಿನ್ನೆಲೆಯಲ್ಲಿ,ಎಂದಿನಂತೆ ದಸರಾ ಸಮಿತಿ ಶೋಭಾ ಯಾತ್ರೆಯನ್ನು ಕೈಬಿಟ್ಟು, ಬನ್ನಿಪೂಜೆ, ಸಾಮೂಹಿಕ ಶಮಿ ಪೂಜೆ ಸೇರಿದಂತೆ ಎಲ್ಲಾ ವಿಧಿ, ವಿಧಾನಗಳನ್ನು ಶ್ರೀರಾಮಮಂದಿರದ ಆವರಣದಲ್ಲಿ ಕೈಗೊಳ್ಳಲಿದ್ದೇವೆ ಎಂದರು.ಜಿಲ್ಲಾಡಳಿತ ನಡೆಸುವ ದಸರಾ ಉತ್ಸವ ಸಮಿತಿಯಲ್ಲಿ ಶೇ.90ರಷ್ಟು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೇ ಸದಸ್ಯರಾಗಿದ್ದಾರೆ. ಅಲ್ಲದೆ ಜನಸಾಮಾನ್ಯರಲ್ಲಿ ಸದಸ್ಯರಾಗಿ ಒಂದೇ ಪಕ್ಷದ ವ್ಯಕ್ತಿಗಳನ್ನು ಸದಸ್ಯರಾಗಿ ನೇಮಕ ಮಾಡಿದ್ದಾರೆ. ಅಲ್ಲದೆ ಸಾಮೂಹಿಕ ಶಮಿ ಪೂಜೆ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಶಮಿ ಪೂಜೆ ಎಂಬುದು ಹಿಂದುಗಳಿಗೆ ಸೇರಿದ್ದು. ಕಳೆದ 33 ವರ್ಷಗಳಿಂದ ಜಿಲ್ಲಾಡಳಿತಕ್ಕೆ ಅನುದಾನಕ್ಕಾಗಿ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ ಒಂದು ನೈಯಾ ಪೈಸೆ ನೀಡಿಲ್ಲ. ಆದರೆ ಈಗ ಎರಡು ಕೋಟಿ ರು. ಅನುದಾನ ನೀಡಲು ಮುಂದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ದಸರಾ ಉತ್ಸವ ಸಮಿತಿ ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್ ಮಾತನಾಡಿ, ಕಳೆದ 33 ವರ್ಷಗಳಿಂದ ನಡೆಸಿಕೊಂಡು ಬಂದ ರೀತಿಯಲ್ಲಿಯೇ ಈ ಬಾರಿಯೂ ದಸರಾ ಉತ್ಸವ ನಡೆಸಲು ನಾವು ಸಿದ್ದತೆ ಮಾಡಿಕೊಂಡು ಹಲವಾರು ಸಮಿತಿಗಳನ್ನು ರಚಿಸಿ ಕಾರ್ಯೋನ್ಮುಖವಾಗಿ,ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡುವಂತೆ ಕೋರಿದ್ದೇವು. ಆದರೆ ಮನವಿ ನೀಡಿ ಮೂರು ತಿಂಗಳು ಕಳೆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಿಂಬರಹವನ್ನು ನೀಡಿಲ್ಲ. ಜಿಲ್ಲಾಡಳಿತ ನಡೆಸುವ ಉತ್ಸವಕ್ಕೆ ನಮ್ಮ ಬೆಂಬಲವಿದೆ. ಆದರೆ ಧಾರ್ಮಿಕ ವಿಧಿ ವಿಧಾನಗಳ ಶಾಸ್ತ್ರೋಕ್ತವಾಗಿ ನಡೆಯಬೇಕೆಂಬ ಕಾರಣಕ್ಕೆ ಶ್ರೀರಾಮಮಂದಿರದ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸುತ್ತಿರುವುದಾಗಿ ನುಡಿದರು.ದಸರಾ ಉತ್ಸವ ಸಮಿತಿ ವತಿಯಿಂದ ಶ್ರೀರಾಮನಗರದ ಆವರಣದಲ್ಲಿ ಅಕ್ಟೋಬರ್ 13ರವರೆಗೆ ಕಾರ್ಯಕ್ರಮಗಳು ಜರುಗಲಿವೆ. ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿದ್ದು,ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. - ಜಿ.ಎಸ್‌. ಬಸವರಾಜು, ಖಜಾಂಚಿ.

ಸುದ್ದಿಗೋಷ್ಠಿಯಲ್ಲಿ ಶಾಸಕ ಜಿ.ಬಿ.ಜೋತಿಗಣೇಶ್, ದಸರಾ ಉತ್ಸವ ಸಮಿತಿ ಅಧ್ಯಕ್ಷ ಡಾ.ಪರಮೇಶ್, ಕಾರ್ಯಾಧ್ಯಕ್ಷ ಬಿ.ಎಸ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಕೋಟ್‌..

ಸರ್ಕಾರಕ್ಕೆ ಈಗ ತುಮಕೂರಿನಲ್ಲಿ ದಸರಾ ನಡೆಸುವ ಇಚ್ಛೆಯಾಗಿದೆ. ಕಳೆದ 33 ವರ್ಷಗಳಿಂದ ತುಮುಕೂರಿನಲ್ಲಿ ದಸರಾ ನಡೆಸುವ ಮೂಲಕ ನಾಡ ಹಬ್ಬವನ್ನು ಮನೆ ಮನೆಗೆ ತಲುಪಿಸಿದ ಜನರನ್ನು ಕಡೆಗಣಿಸಲಾಗಿದೆ. ಇದು ಉತ್ತಮ ಬೆಳವಣಿಗೆಯಲ್ಲ. ಹಬ್ಬಗಳು ಎಲ್ಲರನ್ನೂ ಬೆಸೆಯುವ ಕೊಂಡಿಯಾಗಬೇಕೆ ಹೊರತು ದೂರ ಮಾಡಬಾರದು.