ಸಾರಾಂಶ
ನಗರದ ಹಲವು ಭಾಗದ ರಸ್ತೆಗಳಲ್ಲಿ ವ್ಯಾಪಾರಿಗಳು ವಹಿವಾಟು ನಡೆಸಿ, ಅಳಿದುಳಿದ ಹೂವು, ಬಾಳೆದಿಂಡು, ಮಾವಿನ ಎಲೆ ಇನ್ನಿತರೆ ವಸ್ತುಗಳನ್ನು ಅಲ್ಲೇ ಬಿಟ್ಟು ಹೋಗುವುದರಿಂದ ಮಳೆ ನೀರಿನೊಂದಿಗೆ ಸೇರಿ ಚರಂಡಿ ತುಂಬುತ್ತದೆ. ಇದರಿಂದ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತದೆ.
ಚಿಂತಾಮಣಿ: ಶ್ರಾವಣ ಮಾಸದಲ್ಲಿ ವ್ಯಾಪಾರ- ವಹಿವಾಟು ಜೋರಾಗಿರುತ್ತದೆ, ಬೀದಿಬದಿ ವ್ಯಾಪಾರಸ್ಥರು ತಳ್ಳುವ ಗಾಡಿ, ಇತ್ಯಾದಿಗಳನ್ನು ಬಳಸಿ ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರ ಮಾಡುತ್ತಾರೆ. ಇದರಿಂದ ನಗರದಲ್ಲಿ ಸುಗಮ ಸಂಚಾರಕ್ಕೆ ತೊಡಕಾಗಿ ಜನದಟ್ಟಣೆ ಉಂಟಾಗುತ್ತದೆ, ಇದನ್ನು ತಪ್ಪಿಸುವ ಸಲುವಾಗಿ ನಗರದ ಸಾರ್ವಜನಿಕ ಗ್ರಂಥಾಲಯದ ಮುಂಭಾಗದಲ್ಲಿ ವ್ಯಾಪಾರಸ್ಥರಿಗೆ ವಹಿವಾಟು ನಡೆಸಲು ಅನುಕೂಲ ಮಾಡಿಕೊಡಲಾಗಿದೆಯೆಂದು ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ಹಾಗೂ ಡಿವೈಎಸ್ಪಿ ಮುರಳೀಧರ್ ತಿಳಿಸಿದರು.
ಬೀದಿಬದಿ ವ್ಯಾಪಾರಸ್ಥರ ಸಭೆಯಲ್ಲಿ ಮಾತನಾಡಿ, ನಗರದ ಹಲವು ಭಾಗದ ರಸ್ತೆಗಳಲ್ಲಿ ವ್ಯಾಪಾರಿಗಳು ವಹಿವಾಟು ನಡೆಸಿ, ಅಳಿದುಳಿದ ಹೂವು, ಬಾಳೆದಿಂಡು, ಮಾವಿನ ಎಲೆ ಇನ್ನಿತರೆ ವಸ್ತುಗಳನ್ನು ಅಲ್ಲೇ ಬಿಟ್ಟು ಹೋಗುವುದರಿಂದ ಮಳೆ ನೀರಿನೊಂದಿಗೆ ಸೇರಿ ಚರಂಡಿ ತುಂಬುತ್ತದೆ. ಇದರಿಂದ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತದೆ. ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತದೆ, ಆದ್ದರಿಂದ ವ್ಯಾಪಾರಸ್ಥರು ನಗರಸಭೆ ನಿಗದಿ ಪಡಿಸಿದ ಸ್ಥಳದಲ್ಲೇ ವ್ಯಾಪಾರಕ್ಕೆ ಮುಂದಾಗಬೇಕೆಂದು ತಿಳಿಸಿದರು.ಶುಕ್ರವಾರದಂದು ವರಮಹಾಲಕ್ಷ್ಮೀ ಹಬ್ಬ ಹಿನ್ನೆಲೆಯಲ್ಲಿ ತಾವೆಲ್ಲರೂ ಈ ಸ್ಥಳದಲ್ಲೇ ವ್ಯಾಪಾರ, ವಹಿವಾಟು ನಡೆಸಿ ನಗರದ ಸ್ವಚ್ಛತೆ ಹಾಗೂ ಸಂಚಾರ ದಟ್ಟಣೆಯಾಗದಂತೆ ಸಹಕರಿಸಬೇಕೆಂದು ಕೋರಿದರು.
ನಗರ ಠಾಣೆ ಇನ್ಸ್ಪೆಕ್ಟರ್ ವಿಜಿಕುಮಾರ್, ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಶಿವರಾಜ್, ಬೀದಿಬದಿ ವ್ಯಾಪಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ವ್ಯಾಪಾರಿಗಳು ಉಪಸ್ಥಿತರಿದ್ದರು.