ಕಳೆದ ಎರಡು ಮೂರು ತಲೆಮಾರುಗಳಿಂದ ಯಾವುದೇ ಪರಭಾರೆಯಾಗದೆ ಸತ್ತು ಹೋಗಿರುವ ವ್ಯಕ್ತಿಗಳ ಹೆಸರಿನಲ್ಲಿದ್ದ ಜಮೀನುಗಳ ಮಾಲೀಕತ್ವವನ್ನು ಪ್ರಸ್ತುತ ಬದುಕಿರುವ ವಾರಸುದಾರರ ಹೆಸರಿಗೆ ಖಾತೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರದ ಇ-ಪೌತಿ ಆಂದೋಲನ ಆರಂಭಿಸಿದೆ. ಆದರೆ, ಈ ಆಂದೋಲನ ಆರಂಭವಾದಾಗಿನಿಂದ ಕೆಳಹಂತದ ಅಧಿಕಾರಿಗಳು ಅದರಲ್ಲೂ ಗ್ರಾಮ ಲೆಕ್ಕಾಧಿಕಾರಿಗಳ ಪರಿಸ್ಥಿತಿ ಹೇಳತೀರದಂತಾಗಿದೆ.

ಮೂಲ ಮಾಲೀಕರ ದಾಖಲೆ ಲಭ್ಯತೆ ಇಲ್ಲ । ನೂರಾರು ಸಮಸ್ಯೆ ಮಧ್ಯೆ ಗುರಿ ತಲುಪುವ ಸವಾಲು । ಆತ್ಮಹತ್ಯೆ ಯತ್ನ ಘಟನೆಅರಹತೊಳಲು ಕೆ.ರಂಗನಾಥ

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಕಳೆದ ಎರಡು ಮೂರು ತಲೆಮಾರುಗಳಿಂದ ಯಾವುದೇ ಪರಭಾರೆಯಾಗದೆ ಸತ್ತು ಹೋಗಿರುವ ವ್ಯಕ್ತಿಗಳ ಹೆಸರಿನಲ್ಲಿದ್ದ ಜಮೀನುಗಳ ಮಾಲೀಕತ್ವವನ್ನು ಪ್ರಸ್ತುತ ಬದುಕಿರುವ ವಾರಸುದಾರರ ಹೆಸರಿಗೆ ಖಾತೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರದ ಇ-ಪೌತಿ ಆಂದೋಲನ ಆರಂಭಿಸಿದೆ. ಆದರೆ, ಈ ಆಂದೋಲನ ಆರಂಭವಾದಾಗಿನಿಂದ ಕೆಳಹಂತದ ಅಧಿಕಾರಿಗಳು ಅದರಲ್ಲೂ ಗ್ರಾಮ ಲೆಕ್ಕಾಧಿಕಾರಿಗಳ ಪರಿಸ್ಥಿತಿ ಹೇಳತೀರದಂತಾಗಿದೆ.

ಕಾರಣ ಪೌತಿ ಖಾತೆ ಮಾಡಲು ವಾರಸುದಾರರು ನೀಡಬೇಕಾದ ಕೆಲವು ದಾಖಲೆಗಳ ಲಭ್ಯತೆ ಇಲ್ಲ. ಸರಿಯಾದ ದಾಖಲೆ ನೀಡದೇ ಹೋದರೆ ಪೌತಿ ಖಾತೆ ಮಾಡಲು ಬರುವುದಿಲ್ಲ. ಇಂತಹ ನೂರಾರು ಸಮಸ್ಯೆಗಳ ಮಧ್ಯೆಯೂ ಗ್ರಾಮ ಲೆಕ್ಕಾಧಿಕಾರಿಗಳು ತಮಗೆ ನೀಡಿರುವ ಗುರಿಯನ್ನು ತಲುಪಬೇಕಿದೆ. ಇ-ಪೌತಿ ಖಾತೆಯಲ್ಲಿ ನೂರಾರು ಸವಾಲುಗಳಿದ್ದರೂ ಮೇಲಾಧಿಕಾರಿಗಳಿಗಳು ಗುರಿ ತಲುಪುವಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದು, ಅನೇಕ ಗ್ರಾಮ ಲೆಕ್ಕಾಧಿಕಾರಿಗಳು ಈ ಕೆಲಸವೇ ಬೇಡ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಮೇಲಾಧಿಕಾರಿಗಳ ಒತ್ತಡದಿಂದ ಬೇಸತ್ತು ಆತ್ಮಹತ್ಯೆಗೂ ಪ್ರಯತ್ನಿಸುತ್ತಿರುವ ಘಟನೆಗಳು ನಡೆದಿದೆ.

ಗ್ರಾಮ ಲೆಕ್ಕಾಧಿಕಾರಿಗಳಿಗೆ ತಲೆನೋವಾದ ಸಮಸ್ಯೆಗಳು:

ಯಾವುದೇ ಒಂದು ಪೌತಿ ಖಾತೆಯನ್ನು ಮಾಡಬೇಕೆಂದರೆ ಮೃತರ ಮರಣ ಪ್ರಮಾಣಪತ್ರ, ವಾರಸುದಾರರ ವಂಶವೃಕ್ಷವನ್ನು ಸಲ್ಲಿಸಿ, ವಂಶವೃಕ್ಷದಲ್ಲಿ ಇರುವ ಪ್ರತಿಯೊಬ್ಬರೂ ಒಟಿಪಿ ನೀಡಿ ಪೌತಿ ಖಾತೆ ಮಾಡಿಸಿಕೊಳ್ಳಬಹುದು. ಆದರೆ, ಇ-ಪೌತಿಗೆ ಶೇ.40 ರಷ್ಟು ಮೃತ ಖಾತೆದಾರರ ಮರಣ ಪ್ರಮಾಣಪತ್ರಗಳ ಲಭ್ಯತೆ ಇಲ್ಲ. ಜಮೀನುಗಳಿಗೆ ಸಂಭಂಧಪಟ್ಟಂತೆ ಸಾವಿರಾರು ಪ್ರಕರಣಗಳು ವಿವಿಧ ಕಾರಣಗಳಿಂದ ನ್ಯಾಯಾಲದಲ್ಲಿ ತೀರ್ಮಾನವಾಗದೇ ಬಾಕಿ ಇವೆ. ಇಂತಹ ಪ್ರಕರಣಗಳನ್ನು ಪೌತಿಖಾತೆ ಮಾಡಲು ಕಂದಾಯ ಅಧಿಕಾರಿಗಳಿಗೆ ಅವಕಾಶ ಇಲ್ಲ. ಜೊತೆಗೆ ಪೌತಿಖಾತೆ ಮಾಡಲು ಕುಟುಂಬ ಸದಸ್ಯರ ವಂಶವೃಕ್ಷ ಬೇಕು. ವಂಶವೃಕ್ಷ ಮಾಡಲು ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್ ಬೇಕು. ಆದರೆ ಕೌಟುಂಬಿಕ ಕಲಹದ ಕಾರಣ ಕೆಲವು ಸದಸ್ಯರು ತಮ್ಮ ಆಧಾರ್ ಕಾರ್ಡ್ ನೀಡುತ್ತಿಲ್ಲ. ಇದು ಪೌತಿ ಖಾತೆಗೆ ಅಡ್ಡಿಯಾಗುತ್ತಿದೆ. ಇನ್ನೂ ಕೆಲವು ಭಾರತೀಯ ಪ್ರಜೆಗಳು ವಿದೇಶದಲ್ಲಿ ನೆಲೆಸಿದ್ದು, ಆ ದೇಶದ ಪೌರತ್ವ ಪಡೆದುಕೊಂಡಿದ್ದಾರೆ. ಇಂತವರು ವಂಶವೃಕ್ಷದಲ್ಲಿ ಸೇರ್ಪಡೆಯಾಗಲು ಅವಕಾಶ ಇಲ್ಲ ಇಷ್ಟೆಲ್ಲ ನ್ಯೂನತೆಗಳ ನಡುವೆ ಗುರಿ ತಲುಪುವುದು ಅಧಿಕಾರಿಗಳಿಗೆ ಅಷ್ಟು ಸುಲಭದ ಕಾರ್ಯವಲ್ಲ.

ಇಷ್ಟೆಲ್ಲಾ ತೊಡಕುಗಳ ನಡುವೆ ಗ್ರಾಮ ಲೆಕ್ಕಾಧಿಕಾರಿಗಳು ಅಧಿಕ ಕೆಲಸದ ಒತ್ತಡ, ಮೇಲಾಧಿಕಾರಿಗಳ ಒತ್ತಡದಿಂದ ಬೇಸತ್ತು ಹೋಗಿದ್ದಾರೆ. ಭದ್ರಾವತಿ ತಾಲೂಕಿನ ಅಗರದಹಳ್ಳಿ ಗ್ರಾಮ ಲೆಕ್ಕಿಗರೊಬ್ಬರು ತಹಸೀಲ್ದಾರ್ ವಿರುದ್ದ ಮಾನಸಿಕ ಹಿಂಸೆ ಆರೋಪ ಮಾಡಿ ಪತ್ರ ಬರೆದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ತಾವು ಬರೆದಿರುವ ಡೆತ್ ನೋಟ್‍ಅನ್ನು ವಾಟ್ಸಪ್ ಮೂಲಕ ಸಾಮಾಜಿಕ ಜಾಲಾತಾಣದಲ್ಲಿ ಹರಿಬಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಆತನ ಆಪ್ತರು ಮತ್ತು ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಆತ್ಮಹತ್ಯೆಯನ್ನು ತಡೆದಿರುವುದು ವರದಿಯಾಗಿದೆ.

ಇನ್ನು ಮುಂದಾದರೂ ಸರ್ಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಅತ್ಯಂತ ಜಟಿಲ ಸಮಸ್ಯೆ ಇರುವ ಪ್ರಕರಣಗಳಲ್ಲಿ ಕೆಲವೊಂದು ಸರಳವಾದ ಮಾರ್ಪಾಟುಗಳನ್ನು ತರಬೇಕು. ಆಗಾದಾಗ ಮಾತ್ರ ಎಲ್ಲಾ ಕೆಲಸಗಳು ಸುಸೂತ್ರವಾಗ ನಡೆಯಲು ಸಾಧ್ಯ ಎಂದು ಕೆಲ ಅಧಿಕಾರಿಗಳು ಹೇಳುತ್ತಾರೆ. ಬಾಕ್ಸ್‌..

ಅಧಿಕಾರಿಗಳ ಕೊರತೆ

ಪ್ರಸ್ತುತ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳ ಸಂಖ್ಯೆ ಬಹಳ ಕಡಿಮೆ ಇದೆ. ಒಬ್ಬನೇ ಗ್ರಾಮ ಲೆಕ್ಕಿಗ ಎರಡು ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ನೋಡಿಕೊಳ್ಳಬೇಕು. ಇದರಿಂದ ಗ್ರಾಮ ಲೆಕ್ಕಾಧಿಕಾರಿಗಳು ಹೈರಾಣಾಗಿದ್ದಾರೆ. ಕೋಟ್‌....

ನ್ಯಾಯಾಲಯದ ಪ್ರಕರಣಗಳನ್ನು ಕಾಲಂ 11ರಲ್ಲಿ ನಮೂದಿಸುವುದರ ಜೊತೆಗೆ ಪೌತಿ ಖಾತೆ ವಾರಸುದಾರರು ದಾಖಲೆ ನೀಡುವ ಮೂಲಕ ಈ ಆಂದೋಲನಕ್ಕೆ ಬೆಂಬಲ ನೀಡಬೇಕು. ಇಲ್ಲವಾದರೆ ಕೆಳ ಹಂತದ ಅಧಿಕಾರಿಗಳು ಒತ್ತಡಕ್ಕೆ ಸಿಲುಕಿ ಅನಾಹುತ ಮಾಡಿಕೊಳ್ಳುವ ಸಾಧ್ಯತೆ ಇದೆ.

ಯೋಗೀಶ್ ನಾಯ್ಕ್, ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ. ಪೋಟೋ: 30ಎಚ್‌ಎಚ್‌ಆರ್‌01: ಯೋಗೀಶ್ ನಾಯ್ಕ್