ಸಾರಾಂಶ
ಹೊಸದುರ್ಗ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಹಾಜರಾತಿ ಸೇರಿದಂತೆ ಫಲಿತಾಂಶದಲ್ಲಿ ಕಡಿಮೆ ಬಂದರೆ ಮುಖ್ಯ ಶಿಕ್ಷಕರು ಸೇರಿದಂತೆ ಸಹ ಶಿಕ್ಷಕರನ್ನೇ ನೇರ ಹೊಣೆ ಮಾಡಲಾಗುವುದು ಎಂದು ಬಿಇಒ ಸಯ್ಯದ್ ಮೊಸಿನ್ ಹೇಳಿದರು.
ತಾಲೂಕಿನ ಶ್ರೀರಾಂಪುರದ ಕೆಪಿಎಸ್ ಶಾಲೆಯಲ್ಲಿ 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ತಾಲೂಕಿನಲ್ಲಿ ಶ್ರೀರಾಂಪುರ ಕೆಪಿಎಸ್ ಶಾಲೆಯಲ್ಲಿ ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶ ತೀರ ಕಳಪೆಯಾಗಿದ್ದು, ಅದರಲ್ಲೂ ಕನ್ನಡ ವಿಷಯದಲ್ಲಿಯೇ ಮಕ್ಕಳು ಫೇಲಾಗಿರುವುದು ದುರಂತವೇ ಸರಿ. ಈ ಬಗ್ಗೆ ಕನ್ನಡ ವಿಷಯದ ಶಿಕ್ಷಕರು ಹೆಚ್ಚಿನ ಗಮನ ನೀಡುವಂತೆ ತಾಕಿತು ಮಾಡಿದರು.
ಕೆಪಿಎಸ್ ಶಾಲೆಯಲ್ಲಿ ಎಲ್ಕೆಜಿಯಿಂದ 12ನೇ ತರಗತಿಯವರೆಗೆ ತರಗತಿಗಳು ಇರುವುದರಿಂದ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಫಲಿತಾಂಶದ ಮೇಲೆ ಪ್ರಾಥಮಿಕ ಶಿಕ್ಷಕರ ಪಾತ್ರವೂ ಮಹತ್ವದ್ದಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಮಕ್ಕಳ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರ ಪುತ್ರ ಅರುಣ್ ಗೋವಿಂದಪ್ಪ, ಈ ವರ್ಷ ಉತ್ತಮ ಫಲಿತಾಂಶ ಪಡೆದ ಮಕ್ಕಳನ್ನು ಸ್ಫೂರ್ತಿಯಾಗಿ ಪಡೆದು ಮುಂದಿನ ಮಕ್ಕಳು ಹೆಚ್ಚಿನ ಫಲಿತಾಂಶ ತರುವಂತೆ ಕರೆ ನೀಡಿದರಲ್ಲದೇ, ಶಾಲೆಯ ಮೂಲಭೂತ ಸೌಕರ್ಯಕ್ಕೆ ಬೇಕಾದ ಅಗತ್ಯ ಕ್ರಮಗಳ ಬಗ್ಗೆ ಶಾಸಕರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಶಾಲಾಭಿವೃದ್ಧಿ ಸಲಹಾ ಸಮಿತಿ ಅಧ್ಯಕ್ಷ ಲೊಕೇಶಪ್ಪ ಪ್ರಸ್ತಾವಿಕವಾಗಿ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ನಿರಂತರವಾಗಿ ಶಾಲೆಗೆ ಕಳಿಸದಿರುವುದು ಹಾಗೆಯೇ ಮನೆಯಲ್ಲಿ ಮಕ್ಕಳ ಬೋಧನೆಗೆ ಅನುಕೂಲ ಮಾಡಿ ಕೊಡದಿರುವುದು ಶಾಲೆಗಳಲ್ಲಿ ಫಲಿತಾಂಶ ಕಡಿಮೆಯಾಗಲು ಕಾರಣವಾಗಿದೆ ಎಂದರು.ಇದೆ ವೇಳೆ ಅತಿ ಹೆಚ್ಚು ಅಂಕ ಪಡೆದ 13 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಉಪಾಧ್ಯಕ್ಷ ರೇವಣ್ಣ, ಪ್ರಾಂಶುಪಾಲ ಪ್ರಕಾಶ್, ಎಸ್ಡಿಎಂಸಿ ಸದಸ್ಯ ಲೊಕೇಶಪ್ಪ, ಆನಂದ್, ತಿಮ್ಮಯ್ಯ, ರಂಗನಾಥ್, ಪಲ್ಲವಿ, ಸುಮಿತ್ರಾ, ದಾದಾಪೀರ್, ಇಸಿಒ ನಸೀಮ್ ಉನ್ನಿಸ, ಸಿಆರ್ಪಿ ಮಂಜುನಾಥ್ ಮತ್ತಿತರರಿದ್ದರು.ಡಿ ಗ್ರೂಪ್ ನೌಕರನ ಅಮಾನತು
ಶಾಲೆಗೆ ಕುಡಿದು ಬರುವ ಪ್ರೌಢಶಾಲಾ ವಿಭಾಗದ ಡಿ ಗ್ರೂಪ್ ನೌಕರ ರಂಗಸ್ವಾಮಿಯನ್ನು ಈ ಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಪಡಿಸಿ ಆತನನ್ನು ಬಿಡುಗಡೆ ಗೊಳಿಸುವಂತೆ ಬಿಇಒ ಸೈಯದ್ ಮೊಸೀನ್ ಉಪ ಪ್ರಾಂಶುಪಾಲ ಸತೀಶ್ ಭಂಡಾರಿ ಅವರಿಗೆ ಆದೇಶ ಮಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಲಹಾ ಸಮಿತಿ ಅಧ್ಯಕ್ಷ ಲೋಕೇಶಪ್ಪ ಡಿ ಗ್ರೂಪ್ ನೌಕರ ಶಾಲೆಗೆ ಕುಡಿದು ಬರುತ್ತಿದ್ದಾನೆ. ಬಿ ಗ್ರೂಪ್ ನೌಕರರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಬಿಇಒ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಈ ರೀತಿ ಆದೇಶ ನೀಡಿದ ಬಿಇಒ, ಶಾಲಾ ಆವರಣದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳ ನಿಯಂತ್ರಣಕ್ಕೆ ಪೊಲೀಸರನ್ನು ಬೀಟ್ ನೀಡುವಂತೆ ಶ್ರೀರಾಂಪುರ ಪೊಲೀಸ್ ಠಾಣೆಗೆ ಪತ್ರ ಬರೆಯುವುದಾಗಿ ತಿಳಿಸಿದರು.