ಬೇಗ ಬಂದ ಮುಂಗಾರು: ಭತ್ತ ನಾಟಿ ಶೀಘ್ರ ಪೂರ್ಣ

| Published : Sep 01 2025, 01:04 AM IST

ಸಾರಾಂಶ

ಸೋಮವಾರಪೇಟೆ ತಾಲೂಕಿನಾದ್ಯಂತ ಅವಧಿಗೂ ಮುನ್ನವೇ ಮುಂಗಾರು ಪ್ರಾರಂಭವಾಗಿದ್ದರಿಂದ ಹೆಚ್ಚಿನ ಪ್ರದೇಶಗಳಲ್ಲಿ ಬತ್ತದ ನಾಟಿ ಕೆಲಸ ಮುಗಿದಿದೆ.

ಮುರಳೀಧರ್‌ ಶಾಂತಳ್ಳಿ

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಭತ್ತದ ಕಣಜ ಎಂದು ಕರೆಸಿಕೊಳ್ಳುವ ಸೋಮವಾರಪೇಟೆ ತಾಲೂಕಿನಾದ್ಯಂತ ಅವಧಿಗೂ ಮುನ್ನವೇ ಮುಂಗಾರು ಪ್ರಾರಂಭವಾಗಿದ್ದರಿಂದ ಹೆಚ್ಚಿನ ಪ್ರದೇಶಗಳಲ್ಲಿ ಭತ್ತದ ನಾಟಿ ಕೆಲಸ ಮುಗಿದಿದೆ.ಕಳೆದ ಕೆಲವು ವರ್ಷಗಳಲ್ಲಿ ಸಮಯಕ್ಕೆ ಮಳೆಯಾಗದೆ ರೈತರು ತಡವಾಗಿ ಗದ್ದೆಗೆ ಇಳಿಯುತ್ತಿದ್ದರು. ಈ ಭಾರಿ ಭತ್ತದ ಬೇಸಾಯಕ್ಕೆ ಸಾಕಷ್ಟು ನೀರು ದೊರಕಿದೆ. ಇನ್ನೊಂದೆಡೆ ಭತ್ತದ ಕೃಷಿಗೆ ಕಾರ್ಮಿಕರ ಕೊರತೆ, ಹವಾಮಾನ ವೈಪರಿತ್ಯ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಳದಿಂದಾಗಿ, ಭತ್ತದ ಬೆಳೆಗಾರರು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬರುತ್ತಿದ್ದು, ಗದ್ದೆಗಳು, ಕಾಫಿ, ಅಡಕೆ ತೋಟಗಳಾಗಿ ಪರಿವರ್ತನೆಯಾಗುತ್ತಿದೆ.ಅತೀ ಹೆಚ್ಚು ಮಳೆ ಬೀಳುವ ಶಾಂತಳ್ಳಿ ಹೋಬಳಿಯ ಹೆಗ್ಗಡಮನೆ, ಬೀದಳ್ಳಿ, ಮಲ್ಲಳ್ಳಿ, ಕುಮಾರಳ್ಳಿ, ಕುಂದಳ್ಳಿ, ಕೊತ್ತನಳ್ಳಿ, ಬೆಟ್ಟದಕೊಪ್ಪ, ಹರಗ, ಕೂತಿ, ಯಡೂರು, ತೋಳೂರುಶೆಟ್ಟಳ್ಳಿ, ಚಿಕ್ಕತೋಳೂರು, ದೊಡ್ಡತೋಳೂರು ಇತ್ಯಾದಿ ಗ್ರಾಮಗಳಲ್ಲಿ ಜೀವನೋಪಾಯಕ್ಕಾಗಿ ಭತ್ತವನ್ನೇ ಆಶ್ರಯಿಸಲಾಗುತ್ತಿದೆ. ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ ಹೋಬಳಿಯ ಗ್ರಾಮಗಳಲ್ಲಿ ಭತ್ತ ನಾಟಿ ಕೆಲಸ ಈಗಾಗಲೇ ಮುಗಿದಿದೆ. ಕುಶಾಲನಗರ ಭಾಗಗಳಲ್ಲಿ ಮಾತ್ರ ಹಾರಂಗಿ ನಾಲೆಯ ನೀರನ್ನು ಬಳಸಿಕೊಂಡು ನಾಟಿ ಕೆಲಸ ಮಾಡುವುದರಿಂದ ನಾಟಿ ಕೆಲಸ ಮುಗಿದಿಲ್ಲ.ಸಹಾಯಧನದ ಅಗತ್ಯ:

ನಾವು ಈ ಬಾರಿ ಹೈಬ್ರೀಡ್ ಭತ್ತದ ಬೀಜವನ್ನು ಭಿತ್ತಿ ಗದ್ದೆಯಲ್ಲಿ ನಾಟಿ ಮಾಡಿದ್ದೇವೆ. ನೀರಿನ ಕೊರತೆ ಕಾಣುತ್ತಿಲ್ಲ. ಆದರೂ, ಭತ್ತದ ಬೆಳೆಗಾರರು ನಿರಂತರವಾಗಿ ನಷ್ಟಕ್ಕೊಳಗಾಗುವುದು ಮುಂದುವರಿದಿದೆ. ಸರ್ಕಾರ ಭತ್ತದ ಕೃಷಿಕರಿಗೆ ಸಹಾಯಧನವನ್ನು ನೀಡುವ ಮೂಲಕ ಬೆಳೆಗಾರರ ಹಿತ ಕಾಯುವ ಕೆಲಸ ಮಾಡಬೇಕೆಂದು ಹಾನಗಲ್ಲು ಗ್ರಾಮದ ಮೋಹನ್ ತಿಳಿಸಿದರು.ಈ ವರ್ಷ ಭಾರಿ ಮಳೆಯಾಗುತ್ತಿದ್ದರೂ, ಹಲವೆಡೆ ಭತ್ತದ ಪೈರು ಕೊಳೆತುಹೋಗಿದೆ. ಮತ್ತೊಮ್ಮೆ ಭತ್ತದ ಬೀಜವನ್ನು ಭಿತ್ತಿ ಗರ್ವಾಲೆ ಗ್ರಾಮ ಪಂಚಾಯಿತಿಯ ಹಲವೆಡೆ ಭತ್ತದ ನಾಟಿ ಕೆಲಸ ಮುಗಿಸಲಾಗಿದೆ. ನದಿ ತೊರೆಗಳ ಬದಿಯಲ್ಲಿನ ಗದ್ದೆಗೆ ಹಲವು ಭಾರಿ ನೀರು ತುಂಬಿ ಹರಿದು, ಗದ್ದೆ ಮುಚ್ಚಿದ್ದವು. ನಮ್ಮ ಭಾಗದಲ್ಲಿ ಭತ್ತದ ಒಂದು ಬೆಳೆಯನ್ನು ಎಲ್ಲರೂ ಬೆಳೆಯುತ್ತಿದ್ದು, ಮನೆ ಬಳಕೆಹೊಂದಿಗೆ ಅಲ್ಪ ಫಸಲನ್ನು ಮಾರುತ್ತಿದ್ದೇವೆ ಎಂದು ಗರ್ವಾಲೆ ಗ್ರಾಮದ ಲೋಕೇಶ್ ಮಾಹಿತಿ ನೀಡಿದರು.೭೧೦೦ ಹೆಕ್ಟೇರ್ ಭತ್ತ ಕೃಷಿ ಗುರಿ:

ತಾಲೂಕಿನಲ್ಲಿ ಈ ಭಾರಿ ೭೧೦೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿಗೆ ಗುರಿಯನ್ನಿರಿಸಿಕೊಳ್ಳಲಾಗಿದೆ. ಈಗಾಗಲೇ ೫೩೯೦ ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯ ಮುಗಿದಿದೆ. ಇಲಾಖೆಯಿಂದ ಸಹಾಯಧನದಲ್ಲಿ ಭತ್ತದ ಭಿತ್ತನೆ ಬೀಜ ವಿತರಿಸಲಾಗಿತ್ತು. ಆದರೂ, ಹೆಚ್ಚಿನವರು ಖಾಸಗಿ ಅಂಗಡಿಗಳಲ್ಲಿ ಹೈಬ್ರೀಡ್ ಭತ್ತ ಸೇರಿದಂತೆ ಹಲವಾರು ತಳಿಗಳನ್ನು ಖರೀದಿಸಿ ಹಾಗೂ ಕೆಲವರು ಪ್ರಾದೇಶಿಕ ತಳಿಗಳನ್ನು ಬಳಸಿ ನಾಟಿ ಮಾಡಿದ್ದಾರೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೀರಣ್ಣ ತಿಳಿಸಿದ್ದಾರೆ.

ಈ ವರ್ಷ ಭಾರಿ ಮಳೆಯಾಗುತ್ತಿದ್ದರೂ, ಹಲವೆಡೆ ಭತ್ತದ ಪೈರು ಕೊಳೆತುಹೋಗಿದೆ. ಮತ್ತೊಮ್ಮೆ ಭತ್ತದ ಬೀಜವನ್ನು ಭಿತ್ತಿ ಗರ್ವಾಲೆ ಗ್ರಾಮ ಪಂಚಾಯಿತಿಯ ಹಲವೆಡೆ ಭತ್ತದ ನಾಟಿ ಕೆಲಸ ಮುಗಿಸಲಾಗಿದೆ. ನದಿ ತೊರೆಗಳ ಬದಿಯಲ್ಲಿನ ಗದ್ದೆಗೆ ಹಲವು ಭಾರಿ ನೀರು ತುಂಬಿ ಹರಿದು, ಗದ್ದೆ ಮುಚ್ಚಿದ್ದವು. ನಮ್ಮ ಭಾಗದಲ್ಲಿ ಭತ್ತದ ಒಂದು ಬೆಳೆಯನ್ನು ಎಲ್ಲರೂ ಬೆಳೆಯುತ್ತಿದ್ದು, ಮನೆ ಬಳಕೆ ಬಳಿಕ ಉಳಿದರೆ ಅಲ್ಪ ಫಸಲನ್ನು ಮಾರುತ್ತಿದ್ದೇವೆ.

। ಲೋಕೇಶ್, ಗರ್ವಾಲೆ ಗ್ರಾಮದ ಕೃಷಿಕಇದೀಗ ಪ್ಲೇಸ್ಟೋರ್‌ನಲ್ಲಿ ಬೆಳೆ ಸಮೀಕ್ಷೆ ಎಂಬ ಆ್ಯಪ್ ಇದ್ದು, ಅದನ್ನು ರೈತರೇ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು, ಅವರ ಬೆಳೆ ಸಮೀಕ್ಷೆ ಮಾಡಿ ವೆಬ್‌ಗೆ ಅಪ್‌ಲೋಡ್ ಮಾಡಬಹುದು. ತಾವು ಬೆಳೆದ ಬೆಳೆಯ ವಿಸ್ತೀರ್ಣ, ಬೆಳೆವಿಮೆಗೆ, ಪ್ರಕೃತ್ತಿ ವಿಕೋಪದ ಬೆಳೆ ನಷ್ಟ, ಮಿನಿಮಮ್ ಬೆಲೆ ಸಪೋರ್ಟ್‌ಗೆ ವರದಿಯನ್ನು ಅವರೇ ನೀಡಬಹುದಾಗಿದೆ.

। ವೀರಣ್ಣ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ