ಆರ್ಥಿಕ, ಆಧ್ಯಾತ್ಮಿಕ ಪ್ರಗತಿ ಧರ್ಮಸ್ಥಳ ಸಂಸ್ಥೆಯ ಗುರಿ

| Published : Feb 04 2025, 12:33 AM IST

ಸಾರಾಂಶ

ಸೊರಬ: ಮನುಷ್ಯ ಕೇವಲ ಆರ್ಥಿಕವಾಗಿ ಬೆಳೆದರಷ್ಟೇ ಸಾಲದು. ಆತ ಆಧ್ಯಾತ್ಮ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಬೇಕು. ಆತ್ಮ ಸಾಧನೆ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ. ಇದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರಿಯಾಗಿದೆ ಎಂದು ಸಮಾಧಾನ ಹಿರೇಮಠ ಜಡೆ ಬಂಕಸಾಣದ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸೊರಬ: ಮನುಷ್ಯ ಕೇವಲ ಆರ್ಥಿಕವಾಗಿ ಬೆಳೆದರಷ್ಟೇ ಸಾಲದು. ಆತ ಆಧ್ಯಾತ್ಮ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಬೇಕು. ಆತ್ಮ ಸಾಧನೆ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ. ಇದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರಿಯಾಗಿದೆ ಎಂದು ಸಮಾಧಾನ ಹಿರೇಮಠ ಜಡೆ ಬಂಕಸಾಣದ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ತವನಂದಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ತವನಂದಿ ವಲಯದ ವತಿಯಿಂದ ಆಯೋಜಿಸಿದ್ದ ಸಹಸ್ರ ಬಿಲ್ವಾರ್ಚನೆ ಹಾಗೂ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.ಆಧ್ಯಾತ್ಮಿಕತೆ ಎನ್ನುವುದು ಭಾರತೀಯ ಸಂಸ್ಕೃತಿಯಲ್ಲಿ ಸಮ್ಮಿಳಿತವಾಗಿದೆ. ಸನಾತನ ಧರ್ಮದಲ್ಲಿ ಬೋಧಿಸಿದ ನಾಲ್ಕು ಪುರುಷಾರ್ಥಗಳಲ್ಲಿ ಧರ್ಮವನ್ನು ಮೊದಲಿಗೆ ಇಟ್ಟು ಆನಂತರದಲ್ಲಿ ಅರ್ಥ, ಕಾಮ, ಮೋಕ್ಷಗಳನ್ನು ಹೇಳಿದ್ದಾರೆ. ಅಂದರೆ ಧರ್ಮದಿಂದ ನೀನು ಅರ್ಥವನ್ನು ಸಂಪಾದಿಸಿ ನಿನ್ನ ಬಯಕೆ ತೀರಿಸಿಕೊಂಡು ನಂತರ ಮೋಕ್ಷ ಪಡೆಯಬೇಕು ಎಂಬುದು ಇದರ ಅಂತರಾರ್ಥವಾಗಿದೆ ಎಂದು ತಿಳಿಸಿದರು.ಮೌಲ್ಯಗಳಿಲ್ಲದ ಬದುಕು ಬದುಕಲ್ಲ. ಹಣವನ್ನು ಯಾರೂ ಬೇಕಾದರೂ ಗಳಿಸಬಹುದು. ಹೇಗೆ ಬೇಕಾದರೂ ಗಳಿಸಬಹುದು. ಆದರೆ ಗಳಿಸುವಾಗ ಮೌಲ್ಯಗಳ ಪಾಲನೆ ಅಗತ್ಯ. ಇದರಿಂದ ಆ ಹಣಕ್ಕೆ ಬೆಲೆ ಬರುತ್ತದೆ. ಆ ಜೀವನಕ್ಕೆ ಅರ್ಥ ಬರುತ್ತದೆ ಎಂದ ಅವರು, ಶಿವಸಂಸ್ಕೃತಿಯಲ್ಲಿ ಶಿವ ಬಹು ಮುಖ್ಯ ದೇವರು. ಶಿವಾರಾಧನೆ ಈ ದೇಶದ ಮುಖ್ಯ ದೇವಾರಾಧನೆ. ಶಿವ ಸ್ಮರಣೆ ನಮ್ಮೆಲ್ಲರ ಬದುಕಿನ ಭಾಗವಾಗಬೇಕು. ಅತ್ಮೊನ್ನತಿ ಎಲ್ಲರ ಜೀವನದ ಗುರಿಯಾಗಬೇಕು ಎಂದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿರಸಿ ಘಟಕದ ಅಧ್ಯಕ್ಷ ಎ.ಬಾಬು ನಾಯ್ಕ ಮಾತನಾಡಿ, ಧರ್ಮಸ್ಥಳ ಕ್ಷೇತ್ರದಲ್ಲಿ ಎಲ್ಲವು ಧರ್ಮವಾಗಿಯೇ ನಡೆಯುತ್ತದೆ. ಸಾಮಾಜಿಕ ಜಾಲ ತಾಣಗಳಲ್ಲಿ ಹಲವಾರು ಸುಳ್ಳು ಮಾಹಿತಿ ನೀಡುವುದು ತಪ್ಪು . ಸಂಸ್ಥೆಯು ಈ ಯೋಜನೆಯನ್ನು ಉದ್ಯೋಗವಾಗಿ ಮಾಡುತ್ತಿಲ್ಲ. ಇದೊಂದು ಸೇವೆಯಾಗಿ ಮಾಡುತ್ತಿದೆ. ಇದರಿಂದ ಲಕ್ಷಾಂತರ ಜನಗಳಿಗೆ ಪ್ರಯೋಜನವಾಗುತ್ತಿದೆ ಎಂದರು. ಪ್ರಾಂಶುಪಾಲ ಡಾ.ಎಂ.ಬಿ.ಗಣಪತಿ ಮಾತನಾಡಿ, ಸ್ವತಂತ್ರ ಭಾರತದಲ್ಲಿ ಹಲವಾರು ಜನಗಳು ಸರ್ವೋದಯ ಕಲ್ಪನೆಯೊಂದಿಗೆ ಸಮಾಜದ ಸರ್ವರನ್ನೂ ಮೇಲೆತ್ತುವ ಪ್ರಯತ್ನ ಮಾಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಧರ್ಮಸ್ಥಳ ಸಂಸ್ಥೆಯು ಆ ಸರ್ವೋದಯ ಕಾರ್ಯವನ್ನು ಅತ್ಯುತ್ತಮವಾಗಿ ಮಾಡುತ್ತಿದೆ ಎಂದರು.ಜನಜಾಗೃತಿ ಸಮಿತಿಯ ಸುಧಾ ಶಿವಪ್ರಸಾದ ಹಾಗೂ ಸಮನವಳ್ಳಿ ಒಕ್ಕೂಟದ ಅಧ್ಯಕ್ಷರಾದ ಮುತ್ತಮ್ಮ ಸಿದ್ಧಯ್ಯ ಹಿರೇಮಠ ಹಾಗೂ ಚಂದ್ರಶೇಖರ ಗೌಡ್ರು ಮಾತನಾಡಿದರು.

ವೇದಿಕೆಯಲ್ಲಿ ಧರ್ಮಸ್ಥಳ ಸಂಘದ ತಾಲೂಕು ಯೋಜನಾಧಿಕಾರಿ ಜಯಂತಿ, ತಿಮ್ಮಣ್ಣ ಬಾವಿ, ಬಸವರಾಜ ಮೂಡೇರ್, ದೇವೇಂದ್ರಪ್ಪ ಸುರಣಗಿ ಮುಂತಾದವರು ಹಾಜರಿದ್ದರು.

ಪ್ರವೀಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಟ್ಟಪ್ಪ ನಿರೂಪಿಸಿದರು.