ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಪುರಸಭಾ ಅನುದಾನದಲ್ಲಿ ಬೆಸ್ಕಾಂ ನಡೆಸಿದ ವಿದ್ಯುತ್ ಕಂಬದ ಬದಲಾವಣೆ ಕಾಮಗಾರಿ, ಸರಕಾರಿ ಬಸ್ಗಳ ಕೊರತೆ, ಡಿಪೋ ಸಮಸ್ಯೆ, ಬೆಸ್ಕಾಂ ಅಕ್ರಮ ಸಕ್ರಮ ಯೋಜನೆ ಸೇರಿದಂತೆ ಹಲವು ಸಮಸ್ಯೆಗಳು ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿಧ್ವನಿಸಿದವು.ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಕ್ರಮ ಮತ್ತು ತಾಲೂಕಿನ ಅಭಿವೃದ್ಧಿಗೆ ಅಗತ್ಯವಿರುವ ಕಾರ್ಯಗಳ ಕುರಿತು ಚರ್ಚೆಗಳು ನಡೆದವು. ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಸಮಸ್ಯೆ ಇತ್ಯರ್ಥ ಪಡಿಸುವ ಭರವಸೆ ನೀಡಿದರು.
ಪಂಚ ಗ್ಯಾರಂಟಿ ಯೋಜನೆಗಳು ಬಡ ಜನರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದ್ದು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಪ್ರಾಮಾಣಿಕತೆಯಿಂದ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು, ಫಲಾನುಭವಿಗಳೊಂದಿಗೆ ಮುಕ್ತ ಸಂವಾದ ನಡೆಸುವುದು. ಯೋಜನೆಗಳ ಪ್ರಯೋಜನ ಪಡೆಯುವಲ್ಲಿ ಫಲಾನುಭವಿಗಳು ಸಮಸ್ಯೆ ಎದುರಿಸುತ್ತಿದ್ದರೆ ತಕ್ಷಣ ಸ್ಪಂದಿಸುವಂತೆ ಗ್ಯಾರಂಟಿ ಸಮಿತಿ ಸದಸ್ಯರಿಗೆ ಅಧ್ಯಕ್ಷ ಚಂದ್ರಶೇಖರ್ ಸೂಚಿಸಿದರು.ಶಕ್ತಿ ಯೋಜನೆಯಲ್ಲಿ ಉತ್ತಮ ಸೇವೆ ನೀಡಲಾಗುತ್ತಿದೆ. ಮೊದಲು ಘಟಕಕ್ಕೆ ಪ್ರತಿ ಕಿ.ಮೀ ಗೆ 25 ರು.ಗಳು ಆದಾಯ ಬರುತ್ತಿತ್ತು. ಯೋಜನೆ ಪ್ರಾರಂಭದಿಂದ ಪ್ರತಿ ಕಿ.ಮೀ ಗೆ 43ರು. ಆದಾಯ ಬರುತ್ತಿದೆ. ಇದೇ ವೇಳೆ ಹೆಚ್ಚಿನ ಸೇವೆ ನೀಡಲು ಬಸ್ ಗಳ ಅವಶ್ಯಕತೆ ಇದೆ ಎಂದು ತುರುವೇಕೆರೆ ಘಟಕಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಅನುಕೂಲವಾಗಲು, ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಮಾರ್ಗಗಳನ್ನು ಹೊಂದಾಣಿಕೆ ಮಾಡಿ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಚಂದ್ರಶೇಖರ್ ಸೂಚಿಸಿದರು.
ಪಡಿತರವನ್ನು ಗ್ರಾಮಗಳಲ್ಲಿ ಸರಕಾರ ತಿಳಿಸಿರುವ ಸಮಯದಲ್ಲಿ ವಿತರಿಸುವ ಕ್ರಮ ಕೈಗೊಳ್ಳಬೇಕು. ಆಹಾರ ಧಾನ್ಯ ವಿತರಿಸುವಾಗ ತೂಕದ ಬಗ್ಗೆ ಪಾರದರ್ಶಕತೆ ಕಾಯ್ದುಕೊಳ್ಳಲು ಗ್ಯಾರಂಟಿ ಸಮಿತಿ ಸದಸ್ಯ ಚೌಳಕಟ್ಟೆ ನಟರಾಜ್ ಒತ್ತಾಯಿಸಿದರು. 1000 ಕಾರ್ಡಿಗೆ ಹತ್ತಿರ 40 ಸಾವಿರ ರು. ಅಂಗಡಿಕಾರರಿಗೆ ಕಮಿಷನ್ ಸಿಗಲಿದ್ದು ಪ್ರಮಾಣಿಕವಾಗಿ ವಿತರಿಸಲು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲು ಆಹಾರ ಇಲಾಖೆಯ ಪ್ರಜ್ವಲ್ ಅವರಿಗೆ ಚಂದ್ರಶೇಖರ್ ತಿಳಿಸಿದರು.ಗೃಹ ಜ್ಯೋತಿ ಯೋಜನೆಯಡಿ 200 ಯುನಿಟ್ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ತಾಲೂಕಿನಲ್ಲಿ ವಿವಿಧ ಕಾರಣಗಳಿಂದ ಯೋಜನೆಯಿಂದ ಹೊರಗಿರುವ ಸುಮಾರು 526 ಫಲಾನುಭವಿಗಳಿಗೆ ತಿಳುವಳಿಕೆ ನೋಟೀಸ್ ಕಳುಹಿಸಲಾಗಿದೆ. ಅವರಿಗೆ ಅರಿವು ಮೂಡಿಸಿ ಯೋಜನೆಗೆ ಒಳಪಡಲು ತಿಳಿಸಲಾಗುವುದು ಎಂದು ಬೆಸ್ಕಾಂ ಎಇಇ ಗವಿರಂಗಯ್ಯ ಸಭೆಗೆ ಮಾಹಿತಿ ನೀಡಿದರು.ಇಓ ದೊಡ್ಡಸಿದ್ದಯ್ಯ, ಸಿಡಿಪಿಓ ಹೊನ್ನಪ್ಪ, ಉದ್ಯೋಗ ವಿನಿಮಯ ಕೇಂದ್ರದ ಅರುಣ್, ಉಪಾಧ್ಯಕ್ಷ ಪಾಂಡುರಂಗಯ್ಯ, ಸಮಿತಿ ಸದಸ್ಯರುಗಳಾದ ಮಂಜುನಾಥ್, ಚಂದ್ರಶೇಖರ್, ಓಕಾಂರಮೂರ್ತಿ, ನಿರಂಜನಮೂರ್ತಿ, ರಾಜಣ್ಣ, ರೇಣುಕಾ, ಚಿಕ್ಕತಿಮ್ಮಯ್ಯ ಸಭೆಯಲ್ಲಿ ಹಾಜರಿದ್ದರು.
ಕೋಟ್....ಸರ್ಕಾರ ಜಾರಿ ಮಾಡಿರುವ ಗ್ಯಾರೆಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಈಗಾಗಲೇ ಬಹುತೇಕರು ಗ್ಯಾರಂಟಿ ಯೋಜನೆ ಲಾಭ ಪಡೆಯುತ್ತಿದ್ದು ಒಂದು ವೇಳೆ ಯಾರಾದರೂ ಅಶಕ್ತರು ಯೋಜನೆಗಳಿಂದ ಹೊರಗೆ ಉಳಿದಿದ್ದರೆ ಸಾರ್ವಜನಿಕರು ಗ್ಯಾರೆಂಟಿ ಸಮಿತಿ ಗಮನಕ್ಕೆ ತಂದರೆ ಕೂಡಲೇ ಅವರಿಗೆ ನೆರವು ನೀಡಲಾಗುವುದು - ಸಿ.ಡಿ.ಚಂದ್ರಶೇಖರ್ ಗ್ಯಾರೆಂಟಿ ಸಮಿತಿ ಅಧ್ಯಕ್ಷ