ಸಾರಾಂಶ
ದ.ಕ. ಜಿಲ್ಲಾ ಬಿಜೆಪಿ ಆರ್ಥಿಕ ಪ್ರಕೋಷ್ಠ ವತಿಯಿಂದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ವಿಕಸಿತ ಭಾರತದತ್ತ ಭಾರತದ ಆರ್ಥಿಕತೆ’ ವಿಚಾರಸಂಕಿರಣ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ವಿಕಸಿತ ಭಾರತಕ್ಕೆ ಬಡತನ ನಿರ್ಮೂಲನೆ, ಯುವ ಜನತೆ, ರೈತರು ಮತ್ತು ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವುದು ಅತ್ಯಗತ್ಯ. ಈ ವಿಚಾರಗಳು ದೇಶದ ಆರ್ಥಿಕತೆಯ ಆಧಾರ ಸ್ತಂಭಗಳಾಗಿದ್ದು, ಇವುಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ಬಿಜೆಪಿ ಆರ್ಥಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ಪ್ರಶಾಂತ್ ಜಿ.ಎಸ್. ಹೇಳಿದ್ದಾರೆ.ದ.ಕ. ಜಿಲ್ಲಾ ಬಿಜೆಪಿ ಆರ್ಥಿಕ ಪ್ರಕೋಷ್ಠ ವತಿಯಿಂದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ್ದ ‘ವಿಕಸಿತ ಭಾರತದತ್ತ ಭಾರತದ ಆರ್ಥಿಕತೆ’ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.ದೇಶದ ಶೇ. 90ರಷ್ಟುಮಂದಿ ಆದಾಯ ತೆರಿಗೆ ಪಾವತಿಸುವ ಮಟ್ಟಕ್ಕೆ ಬೆಳೆದಾಗ ವಿಕಸಿತ ಭಾರತದ ಪರಿಕಲ್ಪನೆ ಸಾಕಾರವಾಗಲಿದೆ. ಭಾರತವು ಅಮೆರಿಕದ ಆರ್ಥಿಕತೆಯ ಸನಿಹಕ್ಕೆ ಹೋಗಬೇಕಾದರೆ ಈ ರೀತಿಯ ಬೆಳವಣಿಗೆ ಮುಂದಿನ 20 ವರ್ಷಗಳ ಕಾಲ ನಿರಂತರವಾಗಿ ಮುಂದುವರಿಯಬೇಕು ಎಂದರು.
ಆರ್ಥಿಕ ತಜ್ಞ ರಾಜೇಶ್ ರಾವ್ ಎಂ. ಮಾತನಾಡಿ, ಭಾರತದ ಆರ್ಥಿಕತೆಯನ್ನು ಅಮೆರಿಕ, ಜಪಾನ್, ಜರ್ಮನಿ ಮೊದಲಾದ ದೇಶಗಳಿಗೆ ಹೋಲಿಸದೆ ಚೀನಾ ಆರ್ಥಿಕತೆಗೆ ಹೋಲಿಸಬೇಕು. ಭಾರತದಂತೆಯೇ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾವನ್ನು ಗುರಿಯಾಗಿರಿಸಿಕೊಂಡು ಭಾರತದ ಆರ್ಥಿಕತೆ ಬೆಳೆಯಬೇಕಾಗಿದೆ ಎಂದು ಹೇಳಿದರು.ಉದ್ಘಾಟನೆ ನೆರವೇರಿಸಿದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಭಾರತ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ. ಕೊರೊನಾದಂತಹ ಸಂಕಷ್ಟದ ಸ್ಥಿತಿಯಲ್ಲಿಯೂ ದೃಢವಾಗಿ ನಿಂತಿದೆ. ದೇಶದ ನೈಜ ಆರ್ಥಿಕ ಸ್ಥಿತಿಯ ಬಗ್ಗೆ ತಜ್ಞರು ಸಾಮಾನ್ಯ ಜನರಿಗೆ ತಿಳಿಸಿಕೊಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಪ್ರೇಮಾನಂದ ಶೆಟ್ಟಿ ಇದ್ದರು. ಜಿಲ್ಲಾ ಬಿಜೆಪಿ ಆರ್ಥಿಕ ಪ್ರಕೋಷ್ಠ ಸಹಸಂಚಾಲಕ ಸಿಎ ಎಸ್.ಎಸ್. ನಾಯಕ್ ಸಂವಾದ ನಡೆಸಿಕೊಟ್ಟರು. ಅಕ್ಷಯ್ ನಿರೂಪಿಸಿದರು. ದೀಕ್ಷಾ ಶಾನುಭಾಗ್, ಮಾನಸ ರಾವ್ ನಿರ್ವಹಿಸಿದರು.