ಕನ್ನಡಪ್ರಭ ವಾರ್ತೆ ಮಂಡ್ಯ

ಕುಟುಂಬದಲ್ಲಿ ಮಹಿಳೆಯೊಬ್ಬರು ಸ್ವಾವಲಂಬಿಯಾದರೆ ಆರ್ಥಿಕ ಪ್ರಗತಿ ಕಾಣಬಹುದು. ಕುಟುಂಬ ನಿರ್ವಹಣೆ ಸುಗಮವಾಗಿ ಸಾಗುವುದಕ್ಕೆ ಮಹಿಳೆಯರ ಆರ್ಥಿಕ ಚಿಂತನೆಗಳು ಪೂರಕವಾಗಿರುತ್ತವೆ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.

ತಾಲೂಕಿನ ಕೆರಗೋಡು ಗ್ರಾಮದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು, ಸ್ತ್ರೀಶಕ್ತಿ ಸಂಭ್ರಮ, ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಆರ್ಥಿಕ ನಿರ್ವಹಣೆಯಲ್ಲಿ ಪುರುಷರಿಗಿಂತ ಮಹಿಳೆಯರು ಬುದ್ಧಿವಂತರು. ಸಾಲ ಮರುಪಾವತಿಯಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಪುರುಷರಲ್ಲಿ ಅಂತಹದ್ದೊಂದು ಆರ್ಥಿಕ ಶಿಸ್ತಿನ ಕೊರತೆ ಕಾಣುತ್ತಿದೆ ಎಂದರು.

ಮಹಿಳೆಯರನ್ನು ಸ್ವಾವಲಂಬಿಯಾಗಿ ಮಾಡಲು ಜಿಲ್ಲೆಯಲ್ಲಿ ದೊಡ್ಡಮಟ್ಟದ ಕಾರ್ಯಕ್ರಮ ರೂಪುಗೊಳಿಸಲಾಗುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ೨೫ ಸಾವಿರ ಮಹಿಳೆಯರನ್ನು ಸೇರಿಸಿ ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಲು ಮಹಿಳೆಯರನ್ನು ಸ್ವ ಉದ್ಯಮಿಗಳನ್ನಾಗಿ ಮಾಡಲು ಶಕ್ತಿತುಂಬುತ್ತೇವೆ ಎಂದರು.


ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಶುಭದಾಯಿನಿ ಮಾತನಾಡಿ, ಕಾಂಗ್ರೆಸ್ ಸರ್ಕಾರದಿಂದ ಮಹಿಳಾ ಸಬಲೀಕರಣ ಹೆಚ್ಚಾಗುತ್ತಿದೆ. ಮಹಿಳೆಯರ ಆರ್ಥಿಕ ಪ್ರಗತಿಗೆ ಹೆಚ್ಚು ಮಹತ್ವ ನೀಡಲಾಗಿದೆ, ಪ್ರತಿ ಮನೆಯ ಯಜಮಾನಿಗೆ ಮಾಸಿಕ ೨೦೦೦ ರು. ಬರುತ್ತಿದೆ. ಸಾರಿಗೆ ಬಸ್ ಸೌಲಭ್ಯ ಉಚಿತವಾಗಿದೆ. ಇದರಿಂದ ಹಣ ಉಳಿತಾಯವಾಗುತ್ತಿದೆ ಎಂದರು.

ಐದು ಗ್ಯಾರಂಟಿ ಯೋಜನೆಗಳು ಕುಟುಂಬದ ಆದಾಯವನ್ನು ಹೆಚ್ಚಿಸುತ್ತಿವೆ. ಖರ್ಚುಗಳನ್ನು ಕಡಿಮೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ, ರಾಜ್ಯ ಮಂತ್ರಿಗಳು, ಸ್ಥಳೀಯ ಶಾಸಕರ ಅಭಿವೃದ್ದಿ ಯೋಜನೆಗಳು ದಿನೇ ದಿನೇ ಜನರ ಕಣ್ಣಿಗೆ ಕಾಣುತ್ತಿವೆ, ಇದು ಅಭಿವೃದ್ಧಿಯ ಪರ್ವ ಎಂದರು.

ಮಹಿಳೆಯರನ್ನು ಸಂಘಟಿಸಿ, ಕ್ರಿಯಾಶೀಲರನ್ನಾಗಿಸುವ ದೃಷ್ಟಿ ಮತ್ತು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಪ್ರೋತ್ಸ್ಸಾಹ ನೀಡಲಾಗುತ್ತಿದೆ. ಸಾವಿರಾರು ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ನುಡಿದರು.

ಸ್ಥಳೀಯ ಕಾಂಗ್ರೆಸ್ ಮುಖಂಡ ವಸಂತಕುಮಾರ್ ಮಾತನಾಡಿ, ಕೆರಗೋಡು ಹೋಬಳಿ ಅಭಿವೃದ್ಧಿಗಾಗಿ ಶಾಸಕರು ಸಾಕಷ್ಟು ಶ್ರಮಿಸುತ್ತಿದ್ದಾರೆ. ರಸ್ತೆ, ನಾಲೆಗಳು, ಕೆರೆಗಳು, ಗ್ರಾಮದಲ್ಲಿನ ರಸ್ತೆ ಚರಂಡಿ ಅಭಿವೃದ್ಧಿಪಡಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಪ್ರಶಾಂತ್‌ಬಾಬು, ವಿಜಯಲಕ್ಷ್ಮೀ, ಶಿವ, ನಾಗರಾಜು, ಶೈಲೇಂದ್ರ ಸೇರಿದಂತೆ ಹಲವರಿದ್ದರು.