ಸಾರಾಂಶ
ಮಕ್ಕಳಿಗೆ ಸಂಸ್ಕಾರ ನೀಡಿ, ಉತ್ತಮ ಪ್ರಜೆಗಳಾನ್ನಾಗಿ ಮಾಡಿ ಎಂದು ಬಸವಲಿಂಗ ಸ್ವಾಮೀಜಿ ತಿಳಿಸಿದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಮಕ್ಕಳಿಗೆ ಸಂಸ್ಕಾರ ನೀಡಿ, ಉತ್ತಮ ಪ್ರಜೆಗಳನ್ನಾಗಿ ಮಾಡಿ ಎಂದು ಬಸವಾಪಟ್ಟಣದ ತೋಂಟದಾರ್ಯ ಸಂಸ್ಥಾನ ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ ತಿಳಿಸಿದರು.ಕರ್ಕಳ್ಳಿಯಲ್ಲಿನ ಅಕ್ಕನ ಬಳಗದ ಸಭಾಂಗಣದಲ್ಲಿ ಆಡಳಿತ ಮಂಡಳಿಯ ಸದಸ್ಯರಿಗೆ ಮಾರ್ಗದರ್ಶನ ನೀಡಿ ಮಾತನಾಡಿದರು.
ಮಕ್ಕಳಿಗೆ ಸಂಸ್ಕಾರದ ಅಗತ್ಯವಿದೆ. ತಾಯಂದಿರು ಜವಾಬ್ದಾರಿ ತೆಗೆದುಕೊಳ್ಳಬೇಕು. ಆಧುನಿಕತೆ ಬೆಳೆದಂತೆ ಆದ್ಯಾತ್ಮ, ಸಂಸ್ಕಾರ ಮರೆಯಾಗುತ್ತಿದೆ ಎಂದರು.ಮಾಸಿಕ ಪೂಜೆಯ ದಿನ ಎಲ್ಲಾ ತಾಯಂದಿರು ತಮ್ಮ ಮಕ್ಕಳೊಂದಿಗೆ ವಚನಗಳ ಅಭ್ಯಾಸ, ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡಿ ಆ ಮೂಲಕ ಧಾರ್ಮಿಕ ಜಾಗೃತಿ ಮೂಡಿಸುವುದರೊಂದಿಗೆ, ಅಕ್ಕಮಹಾದೇವಿ ಮತ್ತು ವಚನಕಾರರ ಬಗ್ಗೆ ಅರಿವು ಮೂಡಿಸುವ ಕೆಲಸವಾಗಲಿ ಎಂದರು.
ಬೆಂಗಳೂರಿನ ಸ್ತ್ರೀರೋಗ ತಜ್ಞ ವೈದ್ಯರಾದ ಬಿ.ಎಂ.ಲತಾ ರವರು ಸಾರ್ವಜನಿಕರ ಉಪಯೋಗಕ್ಕೆ ನೀಡಿದ್ದ ಅಡುಗೆ ಪಾತ್ರೆಗಳನ್ನು ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ ಅಕ್ಕನ ಬಳಗಕ್ಕೆ ಹಸ್ತಾಂತರಿಸಿದರು.ಕಾರ್ಯಕ್ರಮದಲ್ಲಿ ಅಕ್ಕನ ಬಳಗದ ಅಧ್ಯಕ್ಷೆ ಗೀತಾರಾಜು, ವೀರಶೈವ ಲಿಂಗಾಯತ ಸಮಾಜದ ಯಜಮಾನ ಶಿವಕುಮಾರ್, ಶೆಟ್ರು ಜಯಣ್ಣ ಅಕ್ಕನ ಬಳಗದ ಉಪಾಧ್ಯಕ್ಷೆ ಸರಿತಾ ಮಲ್ಲಿಕಾರ್ಜುನ, ಖಜಾಂಚಿ ಆಶಾ ಹೂವಯ್ಯ ಉಪಸ್ಥಿತರಿದ್ದರು.