ಮಗುವಿಗೆ ವಿದ್ಯೆ ಕೊಡಿಸಿ, ಅನ್ನವನ್ನು ತಾವೇ ಸಂಪಾದಿಸುತ್ತಾರೆ: ಚುಂಚಶ್ರೀ

| Published : May 14 2024, 01:07 AM IST

ಮಗುವಿಗೆ ವಿದ್ಯೆ ಕೊಡಿಸಿ, ಅನ್ನವನ್ನು ತಾವೇ ಸಂಪಾದಿಸುತ್ತಾರೆ: ಚುಂಚಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರನ್ನು ಮಾರೇಹಳ್ಳಿ ಜನರಿಂದ ಆತ್ಮೀಯವಾಗಿ ಅಭಿನಂದಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಶ್ರೀಗಳನ್ನು ನಾದಸ್ವರ ಪೂರ್ಣಕುಂಭದೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಗುವಿಗೆ ಮನಸ್ಸಿಗೆ ಬೇಕಾದ ವಿದ್ಯೆ ಕೊಡಿಸಿದರೆ ತನ್ನ ಬದುಕಿಗೆ ಆಗತ್ಯವಾಗಿರುವ ಅನ್ನ, ಪ್ರತಿಷ್ಠೆ ಜೊತೆಗೆ ಗೌರವವನ್ನೂ ಸಂಪಾದಿಸಿಕೊಳ್ಳುತ್ತಾರೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.

ತಾಲೂಕಿನ ಮಾರೇಹಳ್ಳಿಯಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ನೂತನವಾಗಿ ಆರಂಭಿಸಿರುವ ಬಿಜಿಎಸ್ ಪಬ್ಲಿಕ್ ಸ್ಕೂಲ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಶಿಕ್ಷಣವೊಂದೇ ಆಗಿದೆ ಎಂದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರು ಆಸ್ಪೃಶ್ಯತೆ ಜಗತ್ತಿನಲ್ಲಿ ವಿಚಿತ್ರವಾದ ಕಷ್ಟಗಳನ್ನು ಎದುರಿಸಿದರೂ ಕೂಡ ವಿದ್ಯೆಯನ್ನು ಸಂಪಾದಿಸಿದ್ದರು. ಜೊತೆಗೆ ಎಲ್ಲಾ ದೇಶಗಳ ಸಂವಿಧಾನಗಳನ್ನು ಓದಿ ಸ್ವತಂತ್ರ ಬಂದ ಭಾರತ ದೇಶಕ್ಕೆ ಆಗತ್ಯವಾದ ಸಂವಿಧಾನವನ್ನು ಕೊಟ್ಟರು. ಸಂವಿಧಾನ ಬರೆಯಲು ಅವರು ಕಲಿತ ವಿದ್ಯೆಯೇ ಕಾರಣವಾಗಿದೆ ಎಂದರು.

ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು, ಪೋಷಕರು ಕೂಡ ತಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸಲು ಮುಂದಾಗಬೇಕು.

ಹಲವಾರು ಸಂಸ್ಥೆಗಳು ಸಮಾಜದ ಎಲ್ಲಾ ಮಕ್ಕಳಿಗೂ ಶಿಕ್ಷಣವನ್ನು ನೀಡುತ್ತಿವೆ. ಶ್ರೀ ಮಠವು ಶಿಕ್ಷಣದ ಜೊತೆಗೆ ಆಧಾತ್ಮಿಕ ಶಿಕ್ಷಣವನ್ನೂ ನೀಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಆರಂಭಿಸಿರುವ ಶಾಲೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಅನ್ನದಾನ ಮಹಾದಾನ. ವಿದ್ಯೆ ನೀಡುವುದು ಎಲ್ಲಾಕ್ಕಿಂತಲೂ ಶ್ರೇಷ್ಠ ಹಾಗೂ ಅಮೋಘ ದಾನವಾಗಿದೆ. ಮಕ್ಕಳಿಗೆ ಅನ್ನ ಕೊಟ್ಟರೆ ಬದುಕಿನ ಸಮಸ್ಯೆಗಳು ಪೂರ್ಣವಾಗಿ ಬಗೆಹರಿಯುವುದಿಲ್ಲ. ಆದರೆ ವಿದ್ಯೆ ನೀಡಿದರೆ ಎಲ್ಲವನ್ನೂ ಪಡೆದುಕೊಳ್ಳುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಆರಂಭಿಸಿರುವ ಶಾಲೆಯನ್ನು ಇಲ್ಲಿನ ನಿವಾಸಿಗಳು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಮೂಲಕ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.

ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರನ್ನು ಮಾರೇಹಳ್ಳಿ ಜನರಿಂದ ಆತ್ಮೀಯವಾಗಿ ಅಭಿನಂದಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಶ್ರೀಗಳನ್ನು ನಾದಸ್ವರ ಪೂರ್ಣಕುಂಭದೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.

ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಕೊಮ್ಮೇರಹಳ್ಳಿ ವಿಶ್ವಮಾನವ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಪಿ ನಾಗೇಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ದ್ಯಾಪೇಗೌಡ, ಪುರಸಭೆ ಸದಸ್ಯ ಸಿದ್ದರಾಜು, ಸಾವಯವ ಕೃಷಿಕ ಸಂಘದ ಅಧ್ಯಕ್ಷ ಮಹೇಶ್‌ಕುಮಾರ್, ಮುಖಂಡರಾದ ಮಾರ್ಕಂಡಯ್ಯ, ದೇವರಾಜು, ಮೋಹನ್‌ಕುಮಾರ್, ಶಿವರಾಜ್ ಸೇರಿ ಇತರರು ಇದ್ದರು.