ಸಾರಾಂಶ
ಶೈಕ್ಷಣಿಕ ವರ್ಷ ಆರಂಭವಾಗಿದೆ, ಪ್ರತಿವರ್ಷ ಶಾಸಕರು 20000 ನೋಟ್ ಪುಸ್ತಕಗಳನ್ನು ವಿತರಿಸುತ್ತಿರುವುದು ಸ್ವಾಗತಾರ್ಹ, ತಾಲೂಕಿನಲ್ಲಿ 9 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ಪ್ರಾರಂಭ ಮಾಡಿದ್ದಾರೆ, 83 ಅತಿಥಿ ಶಿಕ್ಷಕರು, 1.83 ಕೋಟಿ ವೆಚ್ಚದ ಶಾಲಾ ಕಟ್ಟಡ ದುರಸ್ತಿ, 45 ಲಕ್ಷ ವೆಚ್ಚದ ನೋಟ್ ಪುಸ್ತಕ ವಿತರಣೆಯು ಶಾಸಕರ ಸಾರ್ಥಕ ಕಾರ್ಯ.
ಕನ್ನಡಪ್ರಭ ವಾರ್ತೆ ದಾಬಸ್ಪೇಟೆ
ಈ ಶತಮಾನ ಸ್ಪರ್ಧಾತ್ಮಕ ಯುಗವಾಗಿದ್ದು, ಪ್ರತಿಯೊಬ್ಬರಿಗೂ ಶಿಕ್ಷಣ ಅತ್ಯವಶ್ಯಕವಾಗಿದೆ. ಉತ್ತಮ ಶಿಕ್ಷಣ ಪಡೆಯುವುದರಿಂದ ಉತ್ತಮ ಸಮಾಜವನ್ನು ನಿರ್ಮಿಸಬಹುದಾಗಿದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.ರೈಲ್ವೆ ಗೊಲ್ಲಹಳ್ಳಿಯ ಶ್ರೀ ಬೈಲಾಂಜನೇಯ ವಿದ್ಯಾಸಂಸ್ಥೆಯ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಗಳನ್ನು ವಿತರಿಸಿ ಮಾತನಾಡಿದರು.
ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಕಳೆದ ಮೂರು ವರ್ಷಗಳಿಂದ ನೋಟ್ ಪುಸ್ತಕ ವಿತರಿಸಿದ್ದೇವೆ, ಚುನಾವಣೆ ಉದ್ದೇಶದಿಂದ ಈ ನೋಟ್ ಬುಕ್ ವಿತರಿಸಿಲ್ಲ. ನಾನು ಸರ್ಕಾರಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಓದಿದ್ದು, ಸರಕಾರಿ ಶಾಲೆ ಮಕ್ಕಳು, ಖಾಸಗಿ ಶಾಲೆ ಮಕ್ಕಳಿಗಿಂತ ಉತ್ತಮವಾಗಿ ಉತ್ತೀರ್ಣರಾಗಲು ಬಯಸಿ ಈ ಕಾರ್ಯ ಮಾಡುತ್ತಿದ್ದೇನೆ. ತಾಲೂಕಿನಲ್ಲಿ ಒಂಭತ್ತು ಸರ್ಕಾರಿ ಶಾಲೆಗಳಲ್ಲಿ ಆಂಗ್ಲಭಾಷಾ ಶಿಕ್ಷಣ ಆರಂಭವಾಗಿರುವುದು ಉತ್ತಮ ಬೆಳವಣೆಗೆ ಎಂದರು.ಬಿಇಒ ತಿಮ್ಮಯ್ಯ ವೇದಿಕೆಯಲ್ಲಿ ಮಾತನಾಡಿ, ಶೈಕ್ಷಣಿಕ ವರ್ಷ ಆರಂಭವಾಗಿದೆ, ಪ್ರತಿವರ್ಷ ಶಾಸಕರು 20000 ನೋಟ್ ಪುಸ್ತಕಗಳನ್ನು ವಿತರಿಸುತ್ತಿರುವುದು ಸ್ವಾಗತಾರ್ಹ, ತಾಲೂಕಿನಲ್ಲಿ 9 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ಪ್ರಾರಂಭ ಮಾಡಿದ್ದಾರೆ, 83 ಅತಿಥಿ ಶಿಕ್ಷಕರು, 1.83 ಕೋಟಿ ವೆಚ್ಚದ ಶಾಲಾ ಕಟ್ಟಡ ದುರಸ್ತಿ, 45 ಲಕ್ಷ ವೆಚ್ಚದ ನೋಟ್ ಪುಸ್ತಕ ವಿತರಣೆಯು ಶಾಸಕರ ಸಾರ್ಥಕ ಕಾರ್ಯ ಎಂದರು.
ಬ್ಲಾಕ್ ಕಾಂಗ್ರೆಸ್ ನಾಗರಾಜು, ಜಗದೀಶ್, ಗುಡೇಮಾರನಹಳ್ಳಿ ರಂಗಸ್ವಾಮಿ, ಕೆಂಪರಾಜು, ಬೂದಿಹಾಳ್ ನಾಗರಾಜು, ಗ್ರಾಪಂ ಸದಸ್ಯ ರಾಜಶೇಖರ್, ಜಗದಾಂಬ, ಅಕ್ಷರ ದಾಸೋಹ ನಿರ್ದೇಶಕರಾದ ಶಿವಕುಮಾರ್, ಗೊಲ್ಲಹಳ್ಳಿ, ಕೃಷ್ಣಪ್ಪ, ತಟ್ಟೇಕೆರೆ ನಾಗರುದ್ರ ಶರ್ಮಾ, ಬಿಟ್ಟಸಂದ್ರ ಗ್ರಾಪಂ ಅಧ್ಯಕ್ಷ ಗಂಗರಂಗಯ್ಯ, ಇನ್ನಿತರರಿದ್ದರು.