ಮಹಿಳೆಯರ ಸ್ವಾಭಿಮಾನದ ಬದುಕಿಗಾಗಿ ಶಿಕ್ಷಣ ಅಗತ್ಯ: ಮಂಗಳ ಮುದ್ದುಮಾದಪ್ಪ ಅಭಿಮತ

| Published : Jun 26 2024, 12:33 AM IST / Updated: Jun 26 2024, 12:34 AM IST

ಮಹಿಳೆಯರ ಸ್ವಾಭಿಮಾನದ ಬದುಕಿಗಾಗಿ ಶಿಕ್ಷಣ ಅಗತ್ಯ: ಮಂಗಳ ಮುದ್ದುಮಾದಪ್ಪ ಅಭಿಮತ
Share this Article
  • FB
  • TW
  • Linkdin
  • Email

ಸಾರಾಂಶ

ಜೀವನದಲ್ಲಿ ಬಸವ ತತ್ವವನ್ನು ಆಳವಡಿಸಿಕೊಂಡು ವಚನಗಳನ್ನು ಓದುವ ಜೊತೆಗೆ ಅರ್ಥ ಮಾಡಿಕೊಂಡರೆ ಬದುಕು ಸುಂದರವಾಗಿರುತ್ತದೆ. ಬಸವಾದಿ ಶರಣರು ನೀಡಿರುವ ವಚನಗಳೇ ನಮ್ಮ ಜೀವನ ಸಂದೇಶವಾಗಿದೆ. ಹೀಗಾಗಿ ವಿದ್ಯಾರ್ಥಿನಿಯರು ನಮ್ಮ ಧರ್ಮದ ಆಚಾರ ವಿಚಾರಗಳನ್ನು ತಿಳಿದುಕೊಂಡು ವಚನಗಳನ್ನು ಓದುವ ಮೂಲಕ ಧರ್ಮವನ್ನು ಉಳಿಸುವ ಕೆಲಸ ಮಾಡಬೇಕು. ನಿಮ್ಮೆಲ್ಲರ ಪ್ರಗತಿಯೇ ಬಸವ ಧರ್ಮದ ಪಾಲನೆಯಾಗಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಹೆಣ್ಣು ಮಕ್ಕಳು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಶಿಕ್ಷಣ ಅತ್ಯವಶ್ಯಕವಾಗಿದ್ದು, ೧೨ನೇ ಶತಮಾನದಲ್ಲಿಯೇ ಬಸವಣ್ಣ ಮಹಿಳೆಯರಿಗೆ ಸಮಾನತೆಯನ್ನು ನೀಡಿ, ಪ್ರೋತ್ಸಾಹಿಸುವ ಜೊತೆಗೆ ಪವಿತ್ರವಾದ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದ್ದರು ಎಂದು ಮೈಸೂರಿನ ಮರಿಮಲ್ಲಪ್ಪ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ಅಧಿಕಾರಿ ಹಾಗೂ ಸಾಹಿತಿ ಮಂಗಳಾ ಮುದ್ದಮಾದಪ್ಪ ತಿಳಿಸಿದರು.

ನಗರದ ಕರಿನಂಜನಪುರದಲ್ಲಿರುವ ಗುಬ್ಬಿ ತೋಟದಪ್ಪ ಉಚಿತ ಮಹಿಳಾ ವಿದ್ಯಾರ್ಥಿನಿಯದಲ್ಲಿ ಮೈಸೂರಿನ ಚಾಮರಾಜೇಶ್ವರಿ ಅಕ್ಕನ ಬಳಗದಿಂದ ನಡೆದ ಸಮಾಜ ಸೇವಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ನುಡಿಯಂತೆ ಪ್ರತಿ ಮನೆಯಲ್ಲಿಯೂ ಸಹ ಹೆಣ್ಣು ಮಕ್ಕಳು ಶಿಕ್ಷಣ ಪಡೆದುಕೊಳ್ಳಬೇಕು. ತಂದೆ ತಾಯಿ ಹಾಗೂ ಹಿರಿಯರನ್ನು ಗೌರವಿಸುವ ಪರಿಪಾಠ ಬೆಳೆಸಿಕೊಳ್ಳಬೇಕು. ವಿದ್ಯಾಭ್ಯಾಸದ ಜೊತೆಗೆ ಸಮಯ ಪರಿಪಾಲನೆ , ಶಿಸ್ತು ಹಾಗೂ ನಮ್ಮ ಕುಟುಂಬದ ಗೌರವವನ್ನು ಕಾಪಾಡುವ ಗುರುತಾರ ಜವಾಬ್ದಾರಿ ನಿಮ್ಮದಾಗಿದೆ. ಬಹಳ ಕಷ್ಟಪಟ್ಟು ತಂದೆ ತಾಯಿ ನಿಮ್ಮನ್ನು ವಿದ್ಯಾವಂತರನ್ನಾಗಿ ಮಾಡುತ್ತಾರೆ. ಅವರ ಆಶಯ ಈಡೇರಿಸುವ ದಿಕ್ಕಿನಲ್ಲಿ ಬದುಕು ರೂಪಿಸಿಕೊಳ್ಳಿ. ಸ್ವಾಭಿಮಾನದ ಬದುಕು ಕಟ್ಟಿಕೊಂಡು ಬಸವ ಮಾರ್ಗದಲ್ಲಿ ನಡೆಯೋಣ. ನಮ್ಮ ಧರ್ಮ ಮತ್ತು ವಚನಗಳನ್ನು ತಿಳಿದುಕೊಂಡು ಅದರಂತೆ ನಡೆಯುವ ಮೂಲಕ ಪರಿಪೂರ್ಣವಾದ ಜೀವನ ನಮ್ಮದಾಗಬೇಕು. ಅಲ್ಪ ತೃಪ್ತಿಗಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ. ಜೀವನ ಮಹತ್ತರವಾದದು, ಅದಕ್ಕಿಂತ ಮಿಗಲಾದದ್ದು ಸಮಾಜ, ತಂದೆ ತಾಯಿ ಮುಖ್ಯ ಎನ್ನುವುದನ್ನು ರೂಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಗುಬ್ಬಿ ತೋಟದಪ್ಪ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ ಅಧ್ಯಕ್ಷತೆ ವಹಿಸಿ, ಜೀವನದಲ್ಲಿ ಬಸವ ತತ್ವವನ್ನು ಆಳವಡಿಸಿಕೊಂಡು ವಚನಗಳನ್ನು ಓದುವ ಜೊತೆಗೆ ಅರ್ಥ ಮಾಡಿಕೊಂಡರೆ ಬದುಕು ಸುಂದರವಾಗಿರುತ್ತದೆ. ಬಸವಾದಿ ಶರಣರು ನೀಡಿರುವ ವಚನಗಳೇ ನಮ್ಮ ಜೀವನ ಸಂದೇಶವಾಗಿದೆ. ಹೀಗಾಗಿ ವಿದ್ಯಾರ್ಥಿನಿಯರು ನಮ್ಮ ಧರ್ಮದ ಆಚಾರ ವಿಚಾರಗಳನ್ನು ತಿಳಿದುಕೊಂಡು ವಚನಗಳನ್ನು ಓದುವ ಮೂಲಕ ಧರ್ಮವನ್ನು ಉಳಿಸುವ ಕೆಲಸ ಮಾಡಬೇಕು. ನಿಮ್ಮೆಲ್ಲರ ಪ್ರಗತಿಯೇ ಬಸವ ಧರ್ಮದ ಪಾಲನೆಯಾಗಿದೆ ಎಂದರು.

ನಂತರ ಮೈಸೂರಿನ ಚಾಮರಾಜೇಶ್ವರಿ ಅಕ್ಕನ ಬಳಗದ ಪದಾಧಿಕಾರಿಗಳು ಸಮಾಜ ಸೇವಾ ಕಾರ್ಯಕ್ರಮದ ಅಂಗವಾಗಿ ಹಾಸ್ಟೆಲ್ ಕುಕ್ಕರ್ ಅನ್ನು ಕೊಡುಗೆ ನೀಡಿದರು. ವಾರ್ಡನ್, ಅಡುಗೆಯವರು ಹಾಗೂ ನಿಲಯದ ಅಧ್ಯಕ್ಷರನ್ನು ಸನ್ಮಾನಿಸುವ ಮೂಲಕ ಅವರ ಸೇವೆಯನ್ನು ಪ್ರಶಂಸಿದರು.

ಬಳಗದ ಅಧ್ಯಕ್ಷ ಮಾದಲಾಂಬಿಕೆ ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಾಮರಾಜೇಶ್ವರಿ ಅಕ್ಕನ ಬಳಗವು ಮೈಸೂರಿನಲ್ಲಿ ನೆಲೆಸಿರುವ ಚಾ.ನಗರ ಜಿಲ್ಲೆಯ ಮಹಿಳೆಯರ ಬಳಗವಾಗಿದೆ. ಈ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ನಮ್ಮ ಬಾಂಧವ್ಯ ಮತ್ತು ಸಂಬಂಧಗಳನ್ನು ಗಟ್ಟಿಗೊಳಿಸುವ ಬಳಗ ಇದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಾಸ್ಟೆಲ್ ಪದಾಧಿಕಾರಿಗಳಾದ ಎ.ಎಂ. ಗುರುಸ್ವಾಮಿ, ಪರಮಶಿವಯ್ಯ, ಪ್ರಭುಸ್ವಾಮಿ, ಆರ್. ಪುಟ್ಟಮಲ್ಲಪ್ಪ, ಗೌಡಿಕೆ ನಾಗೇಶ್, ಅಕ್ಕನ ಬಳಗದ ಕಾರ್ಯದರ್ಶಿ ಪ್ರತಿಮಾ ಮಂಜುನಾಥ್, ಇಂದಿರಾ ಪರಮಶಿವಯ್ಯ, ವಿಜಯಾ ಚಿನ್ನಸ್ವಾಮಿ, ಸುನಿತಾ ಗುರು, ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.