ಚಿಕ್ಕಮಗಳೂರುವಿದ್ಯಾರ್ಥಿನಿಯರು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದಾಗ ಮಾತ್ರ ಸಮಾಜದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಿಸಿದರು.
ಶೈಕ್ಷಣಿಕ ವರ್ಷದ ಯುವ ರೆಡ್ ಕ್ರಾಸ್, ರೇಂಜರ್ಸ್ ಘಟಕಗಳ ಸಮಾರೋಪ ಸಮಾರಂಭ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುವಿದ್ಯಾರ್ಥಿನಿಯರು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದಾಗ ಮಾತ್ರ ಸಮಾಜದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಿಸಿದರು.
ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡಾ, ರಾ.ಸೇ.ಯೋ, ಯುವ ರೆಡ್ ಕ್ರಾಸ್, ರೇಂಜರ್ಸ್ ಘಟಕಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ. ಶಿಕ್ಷಣವನ್ನು ಪಡೆದವರು ಹುಲಿ ಹಾಲನ್ನು ಕುಡಿದವರಂತೆ ಗರ್ಜಿಸುತ್ತಾರೆ ಈ ನಿಟ್ಟಿನಲ್ಲಿ ಪೋಷಕರು ಶ್ರಮ ಪಟ್ಟು ದುಡಿದ ಹಣದಿಂದ ಮಕ್ಕಳನ್ನು ಕಾಲೇಜಿಗೆ ಕಳುಹಿಸಿ ವಿದ್ಯಾವಂತರನ್ನಾಗಿ ಮಾಡುವುದಕ್ಕೆ ಶ್ರಮಿಸುತ್ತಾರೆ. ಅದಕ್ಕೆ ತಕ್ಕಂತ ಮಕ್ಕಳು ಪರಿಶ್ರಮಪಟ್ಟು ವಿದ್ಯಾವಂತರಾಗಬೇಕು ಎಂದರು,ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ ಮಾತನಾಡಿ, ಪೋಷಕರ ಇಚ್ಛೆ, ಅಭಿಲಾಷೆಯಂತೆ ವಿದ್ಯಾರ್ಥಿನಿಯರು ಉತ್ತಮ ಶಿಕ್ಷಣ ಪಡೆದಾಗ ಮಾತ್ರ ಮನೆಗೆ, ನಾಡಿಗೆ ಬೆಳಕಾಗುತ್ತಾರೆ. ಹಿಂದಿನ ಕಾಲದಲ್ಲಿ ಎಸ್.ಎಸ್.ಎಲ್.ಸಿ ಓದಿದರೆ ಸಾಕು ಮದುವೆ ಮಾಡಿ ಕಳುಹಿಸುತ್ತಿದ್ದರು. ಆದರೆ ಹೆಣ್ಣು ಮಕ್ಕಳು ಶಿಕ್ಷಣವಂತರಾಗುತ್ತಿರುವುದರಿಂದ ಪ್ರಶ್ನೆ ಮಾಡುವ ಹಕ್ಕು ಬೆಳೆಯುತ್ತಿದೆ ಎಂದು ಶ್ಲಾಘಿಸಿದರು.ಸರ್ವ ಸಾಧನೆಗೆ ಶಿಕ್ಷಣವನ್ನು ನಿಗದಿತ ಸಮಯದಲ್ಲಿ ಕಲಿಯುವುದು ಅಗತ್ಯ ನಾಡು, ನುಡಿಗೆ ಬೆಳಕಾಗುವ ಶಿಕ್ಷಣವನ್ನು ಎಲ್ಲರೂ ಪರಿಶ್ರಮದಿಂದ ಕಲಿಯಬೇಕು. ಇಂದಿನ ಸ್ಪರ್ಧಾತ್ಮಕಯುಗಕ್ಕೆ ತಕ್ಕಂತೆ ಶಿಕ್ಷಣ ಪಡೆಯಬೇಕಾಗಿದೆ. ಸರ್ಕಾರಿ ಕಾಲೇಜುಗಳಲ್ಲಿ ಕಲಿಯುತ್ತಿದ್ದೇವೆ ಎಂಬ ಕೀಳರಿಮೆ ಬೇಡ, ಕನ್ನಡ ಭಾಷೆಕಲಿಯುತ್ತಿದ್ದೇವೆ. ಕನ್ನಡ ಉಳಿಸಿ-ಬೆಳೆಸುತ್ತೇವೆ ಎಂಬ ಭಾಷಾಭಿಮಾನ ಇರಬೇಕು ಅಂಧಾಭಿಮಾನ ಇರಬಾರದು ಎಂದು ತಿಳಿಸಿದರು.
ಮೊದಲ ಭಾರಿ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದ ಮುಖ್ಯ ಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಎಂದ ಅವರು ಜಗತ್ತಿನಲ್ಲೇ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಕನ್ನಡ ಎಂದು ಹೇಳಿದರು. ಕಾಲೇಜು ಪ್ರಾಂಶುಪಾಲ ಡಾ,ಮೂಡಲಗಿರಿಯಯ್ಯ, ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿ ಮಹೇಶ್ವರಪ್ಪ, ಸಾಂಸ್ಕೃತಿಕ ಸಮಿತಿ ಸಂಚಾಲಕ ಪುಟ್ಟಸ್ವಾಮಿ, ದೀಕ್ಷಿತ್ಕುಮಾರ್, ಶಿವರಾಜ್, ಡಾ. ಅಹ್ಮದ್ ಶರೀಫ್, ಕ್ರೀಡಾ ಸಮಿತಿ ಸಂಚಾಲಕ ದೇವರಾಜ್ ಉಪಸ್ಥಿತರಿದ್ದರು.