ಸಾರಾಂಶ
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ನಿಂದ ಮೂಲ ಶಿಕ್ಷಣ ಮತ್ತು ಸಾಕ್ಷರತೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪ್ರತಿಯೊಂದು ಮಗುವಿಗೆ ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಮಕ್ಕಳಿಗೆ ಮನೆಯಿಂದಲೇ ಶಿಕ್ಷಣ ಆರಂಭವಾಗುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಡಾ.ಕೆ.ಬಿ.ಧನಂಜಯ ಹೇಳಿದರು.ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೂಲ ಶಿಕ್ಷಣ ಮತ್ತು ಸಾಕ್ಷರತೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣ ಅತ್ಯಂತ ಪ್ರಭಾವಶಾಲಿ ಅಸ್ತ್ರ ಆಗಿದ್ದು, ಸದೃಢ ದೇಶ ನಿರ್ಮಾಣ ಮಾಡುವಲ್ಲಿ ಶಿಕ್ಷಣ ಪಡೆಯುವುದು ಬಹಳ ಮಹತ್ತರ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಶಿಕ್ಷಣವು ವ್ಯಕ್ತಿಯ ವ್ಯಕ್ತಿತ್ವ ಹಾಗೂ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ. ಶಿಕ್ಷಣವು ಪ್ರತಿಯೊಬ್ಬರಲ್ಲಿ ನಾಗರಿಕ ಮತ್ತು ಸಾಮಾಜಿಕ ಜವಾಬ್ದಾರಿ ಯನ್ನು ಬೆಳೆಸುತ್ತದೆ. ಎಲ್ಲ ಮಕ್ಕಳಿಗೆ ಶಿಕ್ಷಣ ಸಿಗುವಂತಾಗಬೇಕು ಎಂದರು.ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಜಿ.ಕಿರಣ್ ಕುಮಾರ್ ಮಾತನಾಡಿ, ಧನಂಜಯ ಅವರು ನನ್ನ ಗುರುಗಳು. ಅವರ ಜತೆಯಲ್ಲಿ ವೇದಿಕೆ ಹಂಚಿಕೊಳ್ಳುತ್ತಿ ರುವುದು ಸಂತಸದ ಸಂಗತಿ. ರೋಟರಿ ಸಂಸ್ಥೆಯು ನಿರಂತರ ತರಬೇತಿ ಹಾಗೂ ಜಾಗೃತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ನಮ್ಮ ಸಂಸ್ಥೆ ವತಿಯಿಂದ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಅರುಣ್ ಕುಮಾರ್ ಅವರು ರೋಟರಿ ಸ್ಥಾಪನೆಯಾದ ಚಿಕಾಗೋ ಹಾಗೂ ರೋಟರಿ ಮುಖ್ಯ ಕಚೇರಿಗೆ ಭೇಟಿ ಕೊಟ್ಟಿರುವ ಅಲ್ಲಿನ ಅನುಭವ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಪಿಡಿಜಿ ಪ್ರಕಾಶ್, ರವಿ ಕೋಟೋಜಿ, ಎಸ್.ಕೆ.ಕುಮಾರ್, ರಮಾನಾಥ್ ಗಿರೀಮಾಜಿ, ಚೆನ್ನಪ್ಪ, ಧರ್ಮೇಂದ್ರ ಸಿಂಗ್, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಈಶ್ವರ್ ಬಿ.ವಿ., ರಮೇಶ್ ಸಂತೋಷ್, ಬಸವರಾಜ್ ಗುರುರಾಜ ಮತ್ತು ಕ್ಲಬ್ ಎಲ್ಲಾ ಸದಸ್ಯರು ಭಾಗವಹಿಸಿದ್ದರು.