ಸಾರಾಂಶ
ಮುಧೋಳ ತಾಲೂಕು ಬ್ರಾಹ್ಮಣ ಸಮಾಜದ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಕನ್ನಡ ಪ್ರಭ ವಾರ್ತೆ ಮುಧೋಳ
ಹಣ, ಆಸ್ತಿ, ಸಂಪತ್ತನ್ನು ಗಳಿಸಿದರೆ ಯಾರು ಬೇಕಾದರೂ ಕಸಿದುಕೊಳ್ಳಬಹುದು. ವಿದ್ಯೆ ಯಾರೂ ಕಸಿದುಕೊಳ್ಳಲಾಗದ ಆಸ್ತಿ. ಬ್ರಾಹ್ಮಣರಿಗೆ ವಿದ್ಯೆಯೊಂದೇ ಬಲವಾದ ಅಸ್ತ್ರವಾಗಿದೆ ಎಂದು ಋಷಿ ಕೇಶಾಚಾರ್ಯ ಜೋಶಿ ಹೇಳಿದರು. ಇಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮಕ್ಕಳು ಉನ್ನತ ಶಿಕ್ಷಣದೊಂದಿಗೆ ಸಂಸ್ಕಾರ ರೂಢಿಸಿಕೊಳ್ಳಬೇಕು. ಅದಕ್ಕೆ ಪಾಲಕರು ಸಹಕರಿಸಬೇಕು. ಸಂಸ್ಕಾರವಿಲ್ಲದ ಶಿಕ್ಷಣ ವ್ಯರ್ಥ, ಮರಳಿನಲ್ಲಿ ಮನೆ ಕಟ್ಟಿದಂತೆ ಅಭದ್ರವಾಗಿರುತ್ತದೆ ಎಂದು ಹೇಳಿ ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಹಿರಿಯರು, ಕಲಿಸಿದ ಗುರುಗಳಿಗೆ ಗೌರವ ಕೊಡುವುದನ್ನು ಮರೆಯಬಾರದು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಖ್ಯಾತ ಉದ್ಯಮಿ, ಸಿವಿಲ್ ಎಂಜಿನಿಯರ್ ಮಿಲಿಂದ್ ಬಕ್ಷಿ ಮಾತನಾಡಿ, ಬ್ರಾಹ್ಮಣ ಸಮಾಜವನ್ನು ಎಲ್ಲರೂ ರಾಜಕೀಯವಾಗಿ, ಸಂವಿಧಾನದ ಹೆಸರು ಹೇಳಿ ಕಾನೂನಾತ್ಮಕವಾಗಿ ತುಳಿಯಬಹುದು. ಆದರೆ ನಮ್ಮಲ್ಲಿರುವ ವಿದ್ಯೆಯನ್ನು ಕಸಿದುಕೊಳ್ಳಲಾಗದು, ಬ್ರಾಹ್ಮಣರ ಯುಕ್ತಿಯನ್ನು ಎಲ್ಲರೂ ಬಳಸಿಕೊಳ್ಳುತ್ತಿದ್ದು, ಅದಕ್ಕೆ ನಿಮ್ಮ ಶಕ್ತಿಯನ್ನು ವ್ಯರ್ಥ ಹಾಳು ಮಾಡದೆ ಒಗ್ಗಟ್ಟಿನಿಂದ ಇರಬೇಕೆಂದು ಹೇಳಿದರು.
ಅಣ್ಣಾರಾವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಬ್ರಾಹ್ಮಣ ಸಂಘದ ಉಪಾಧ್ಯಕ್ಷ ಸೋನಪ್ಪಿ ಕುಲಕರ್ಣಿ, ಸಧರ್ಮ ಮಂಡಳ ಅಧ್ಯಕ್ಷ ಪಿ.ಎಂ. ದೇಶಪಾಂಡೆ, ತಾಲೂಕು ಬ್ರಾಹ್ಮಣ ಸಂಘದ ಉಪಾಧ್ಯಕ್ಷ ಬಿ.ಎಲ್. ಬಬಲಾದಿ ವೇದಿಕೆ ಮೇಲೆ ಉಪಸ್ಥಿತರಿದ್ದು, ಸಾಂದರ್ಭಿಕವಾಗಿ ಮಾತನಾಡಿದರು.ನಾಗರಾಜ ಝುಂಜರವಾಡ, ಸಂಜೀವ ಮೋಕಾಶಿ ವೇದಘೋಷ ಮಾಡಿದರು. ಶುಭಾ ಮೋಕಾಶಿ ಸ್ವಾಗತ ಗೀತೆ ಹೇಳಿದರು, ಬ್ರಾಹ್ಮಣ ಸಮಾಜದ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದೆ ಸುಮಾರು 20 ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸಮಾಜದ ಗಣ್ಯರು ಸನ್ಮಾನಿಸಿ ಗೌರವಿಸಿದರು. ಆಕ್ಷಯ ಕುಲಕರ್ಣಿ ಸ್ವಾಗತಿಸಿ ಪರಿಚಯಿಸಿದರು, ಸುನಿತಾ ದೇಶಪಾಂಡೆ ನಿರೂಪಿಸಿದರು, ಆಕಾಶ ಮನಗೂಳಿ ವಂದಿಸಿದರು.