ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಶಿಕ್ಷಣವೇ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುತ್ತದೆ. ಶಿಕ್ಷಣ ಪಡೆದ ಮಹಿಳೆ ಕುಟುಂಬದ ಅಭಿವೃದ್ಧಿಗೆ ಮಾತ್ರವಲ್ಲದೆ ಸಮಾಜದ ಪ್ರಗತಿಗೂ ಪ್ರಮುಖ ಪಾತ್ರವಹಿಸುತ್ತಾಳೆ ಎಂದು ಪ್ರಾಧ್ಯಾಪಕ ಕೆ.ಎಚ್.ಧನಲಕ್ಷೀ ಅಭಿಪ್ರಾಯಿಸಿದರು.ಕೊಡಗು ಜಿಲ್ಲೆ ಮತ್ತು ಸೋಮವಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ನಡೆದ ದಿ.ಸೀತಾಬಾಯಿ ಮತ್ತು ರಾಮಚಂದ್ರ ಕಾಮತ್ ಸ್ಮರಣಾರ್ಥ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಅವರು, ಶಿಕ್ಷಣ ಪಡೆದ ಮಹಿಳೆ ತನ್ನ ಹಕ್ಕುಗಳನ್ನು ಅರಿತು ಸಮಾಜದಲ್ಲಿ ಆತ್ಮವಿಶ್ವಾಸದಿಂದ ಬದುಕಲು ಸಾಧ್ಯವಾಗುತ್ತದೆ ಎಂದರು.ಬಹುಮಾನ ವಿತರಣೆ: ಕನ್ನಡ ಮಾಧ್ಯಮದಲ್ಲಿ ಪಿಯುಸಿ ಓದಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಆಲೂರು ಸಿದ್ದಾಪುರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಿದ್ಯಾ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಪಿ.ಸಿ.ದೀಕ್ಷಿತಾ(ಪ್ರ), ಲಿತಿನಾ(ದ್ವಿ), ಇಶಾಂತ್ ರೆಹಾನ(ತೃ), ಗೀತಾಗಾಯನ ಸ್ಪರ್ಧೆಯಲ್ಲಿ ಕಿಶೋರ್(ಪ್ರ), ಅಂಜಲಿ(ದ್ವಿ), ಧನ್ಯಾ(ತೃ) ಅವರುಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಸನಾ ಹರ್ಷ ಮತ್ತು ಕಿಶೋರ್ ಅವರಿಂದ ಕನ್ನಡ ಗೀತೆಗಳನ್ನು ಹಾಡಿದರು.

ದತ್ತಿ ದಾನಿಗಳಾದ ಬೆಂಗಳೂರಿನ ಆರ್.ರಾಜರಾವ್, ಸಂದ್ಯಾಕಾಮತ್, ಕ.ಸಾ.ಪ ಜಿಲ್ಲಾಧ್ಯಕ್ಷ ಕೇಶವ ಕಾಮತ್, ತಾಲ್ಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ಪ್ರಾಂಶುಪಾಲ ಡಾ.ಬಿ.ಡಿ.ಹರ್ಷ, ಕಸಾಪ ಪದಾಧಿಕಾರಿಗಳಾದ ಎ.ಪಿ.ವೀರರಾಜು, ಜ್ಯೋತಿ ಅರುಣ್, ಎಚ್.ಜೆ.ಜವರಪ್ಪ, ವಾಸುರೈ ಇದ್ದರು.