ಸಾರಾಂಶ
ಶ್ರಾವಣ ಸಂಜೆ ಸಮಾರೋಪ ಸಮಾರಂಭದಲ್ಲಿ ತೆಗ್ಗಿನಮಠದ ಮಠದ ಪೀಠಾಧ್ಯಕ್ಷಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಹಿಂದುಳಿದ ಹರಪನಹಳ್ಳಿ ತಾಲೂಕು ಇಂದು ಶೈಕ್ಷಣಿಕ ಕ್ರಾಂತಿಯಾಗಲು ತೆಗ್ಗಿನಮಠ ಹಾಗೂ ಲಿಂ. ಡಾ. ಚಂದ್ರಮೌಳೀಶ್ವರ ಶಿವಾಚಾರ್ಯರ ಕಾರಣ ಎಂದು ತೆಗ್ಗಿನಮಠದ ಮಠದ ಪೀಠಾಧ್ಯಕ್ಷ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.ಅವರು ಪಟ್ಟಣದ ತೆಗ್ಗಿನಮಠದ ಟಿ.ಎಂ. ಚಂದ್ರಶೇಖರಯ್ಯ ಸಭಾ ಭವನದಲ್ಲಿ ನಡೆದ ಶ್ರಾವಣ ಸಂಜೆಯ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಲಿ. ಚಂದ್ರಮೌಳೀಶ್ವರ ಶಿವಾಚಾರ್ಯರು ಅನೇಕ ಕಷ್ಟ, ಸಮಸ್ಯೆ ಎದುರಿಸಿ ಗ್ರಾಮೀಣ ಭಾಗದಲ್ಲಿ ಅನೇಕ ಶಾಲಾ ಕಾಲೇಜು ಸ್ಥಾಪಿಸಿ ಶೈಕ್ಷಣಿಕ ಕೊಡುಗೆ ನೀಡಿದರು ಎಂದರು.ತೆಗ್ಗಿನಮಠದಲ್ಲಿ ಕಳೆದ 9 ದಿನಗಳಿಂದ ನಡೆದ ಶ್ರಾವಣ ಸಂಜೆ ಹಾಗೂ ಧರ್ಮ ಸಮಾರಂಭವು ಸಮಾಜಕ್ಕೆ ಮಾದರಿಯಾಗಿ ಹೊರಹೊಮ್ಮಿದ್ದು, ನುರಿತ ವ್ಯಕ್ತಿಗಳಿಂದ ವಿವಿಧ ವೈಚಾರಿಕ ವಿಚಾರಗಳು, ಉಪನ್ಯಾಸ ನೀಡುವ ಮೂಲಕ ಸಮಾಜವನ್ನು ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಯಿತು ಎಂದು ನುಡಿದರು.
ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಮಹನೀಯರ ಗುಣ ಬಿತ್ತುವ ಮೂಲಕ ಸಂಸ್ಕಾರಯುತವಾಗಿ ಬೆಳೆಸಬೇಕು ಎಂದು ಸಲಹೆ ನೀಡಿದರು.ತೆಗ್ಗಿನಮಠದ ಕಾರ್ಯದರ್ಶಿ ಡಾ. ಟಿ.ಎಂ. ಚಂದ್ರಶೇಖರಯ್ಯ ಮಾತನಾಡಿ, ಶ್ರೀಮಠದಲ್ಲಿ ನಡೆದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಸಮಾಜಮುಖಿಯಾಗಿ ಸೇವೆ ಸಲ್ಲಿಸಿದ ಹಲವು ಸಾಧಕರನ್ನು ಸನ್ಮಾನಿಸಿ ಪ್ರೋತ್ಸಾಹಿಸುವ ಮೂಲಕ ಅವರಿಗೆ ಮತ್ತಷ್ಟು ಸೇವೆ ಮಾಡಲು ಉತ್ತೇಜನ ನೀಡಲಾಯಿತು ಎಂದರು.
ಬಳ್ಳಾರಿ ಸಹಕಾರ ಸಂಘಗಳ ಉಪ ನಿಬಂಧಕ ಜಿ.ಎಂ. ವೀರಭದ್ರಯ್ಯ ಮಾತನಾಡಿ, ಹಿಂದೂ ಧರ್ಮದ ಪ್ರತೀಕವೇ ಶ್ರಾವಣ ಮಾಸ ಇಂತಹ ಸಂದರ್ಭದಲ್ಲಿ ಶ್ರೀಮಠವು ಅನೇಕ ಕಾರ್ಯಕ್ರಮ ಹಾಕಿಕೊಂಡಿರುವುದು ಶ್ಲಾಘನೀಯ ಎಂದರು.ತೆಗ್ಗಿಮಠ ಶಿಕ್ಷಣ ಮಹಾವಿದ್ಯಾಲಯದ ಡೀನ್ ಟಿ.ಎಂ. ರಾಜಶೇಖರ ಮಾತನಾಡಿ, ಮಠ ಮಾನ್ಯಗಳು ಧರ್ಮ ಸಂಸ್ಕೃತಿ ಉಳಿಸುವ ಮಹತ್ಕಾರ್ಯ ಕೈಗೊಂಡಿವೆ, ನಾವು ಸನಾತನ ಧರ್ಮದ ಉಪದೇಶ ಮಕ್ಕಳಿಗೆ ತಿಳಿಸಬೇಕು ಎಂದು ಹೇಳಿದರು.
ಆಡಿಟರ್ ಅಮೃತ ಮಂಜುನಾಥ ಮಾತನಾಡಿ, ಧರ್ಮ ಧರ್ಮಗಳ ನಡುವೆ ಗಲಾಟೆ ಯುದ್ಧ ನಡೆಯುತ್ತಿರುವ ಮಧ್ಯೆ ಧರ್ಮ ಜಾಗೃತಿ ಮೂಡಿಸುತ್ತಿರುವ ತೆಗ್ಗಿನಮಠದ ಕಾರ್ಯ ಶ್ಲಾಘನೀಯ ಎಂದರು.ರಾಮಘಟ್ಟ ಪುರವರ್ಗಮಠದ ರಾಜಗುರು ರೇವಣಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ದತ್ತಾತ್ರೇಯ ಪೀಸೆ ನವಜಾತ ಶಿಶುಗಳ ನಿತ್ಯ ಆರೈಕೆ ಮತ್ತು ಆರೋಗ್ಯ ಕುರಿತು ಮಾಹಿತಿ ನೀಡಿದರು. ಇದೇ ವೇಳೆ ಶ್ರೀಮಠದಿಂದ ವಿವಿಧ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಿವೃತ್ತ ಮುಖ್ಯ ಶಿಕ್ಷಕ ಸಿ.ಎಂ.ಕೊಟ್ರಯ್ಯ ನಿರೂಪಿಸಿದರು.
ಈ ಸಂದರ್ಭ ತೆಗ್ಗಿನಮಠದ ಜ್ಞಾನಗಂಗೋತ್ರಿ ಮಹವಿದ್ಯಾಲಯದ ಆಡಳಿತಾಧಿಕಾರಿ ಟಿ.ಎಂ. ಪ್ರತೀಕ್, ವರ್ತಕ ಪಿ.ಕೆ.ಎಂ. ನಾಗಲಿಂಗಯ್ಯ, ವಿದ್ಯುತ್ ಗುತ್ತಿಗೆದಾರರ ಎ. ಕರಿಬಸವರಾಜ, ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತಳವಾರ ಚಂದ್ರಪ್ಪ, ತಾಲೂಕು ಸಹಕಾರ ಸಂಘಗಳ ಸಹಾಯಕ ನಿಬಂಧಕ ಶರಣಬಸಪ್ಪ, ಹಿರಿಯ ಪತ್ರಕರ್ತ ಬಿ. ರಾಮಪ್ರಸಾದಗಾಂಧಿ, ಉಪನ್ಯಾಸಕ ರಾಮಶಾಸ್ತ್ರಿ, ಸಂಸ್ಕಾರ ಭಾರತಿ ಟ್ರಸ್ಟ್ ಅಧ್ಯಕ್ಷ ಮಹಾವೀರ ಭಂಡಾರಿ, ದೇವೇಶ, ಶಿಕ್ಷಕಿ ಸಂಗೀತ ಮಂಜುನಾಥ, ಪ್ರಾಚಾರ್ಯ ಅರುಣಕುಮಾರ ಸೇರಿ ಇತರರಿದ್ದರು.