ವಿಶ್ವ ವಿಖ್ಯಾತ ಬಂಡೀಪುರ ಜಂಗಲ್‌ ಸಫಾರಿಯನ್ನೇ ನಂಬಿಕೊಂಡಿದ್ದ ಜನರಿಗೆ ನ.7ರ ಸರ್ಕಾರದ ಆದೇಶ ಆಘಾತವನ್ನು ತಂದೊಡ್ಡಿತ್ತು. ಸಫಾರಿಯಲ್ಲಿ ವಾಹನ ಚಾಲನೆ, ಗಾರ್ಡ್‌, ರೆಸಾರ್ಟ್‌ ಸಿಬ್ಬಂದಿ ಒಂದೆಡೆಯಾದರೆ, ಪರೋಕ್ಷವಾಗಿ ಸಫಾರಿಯನ್ನೇ ನಂಬಿಕೊಂಡಿದ್ದ ಹಲವರ ಜೀವನದ ಮೇಲೆ ಬರೆ ಎಳೆದಂತಾಗಿತ್ತು. ಈ ಸಂಬಂಧ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

---ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮಾನವ, ಪ್ರಾಣಿ ಸಂಘರ್ಷದ ಹೆಚ್ಚಾದ ಹಿನ್ನಲೆ ರೈತ ಸಂಘಟನೆಗಳ ಆಗ್ರಹದ ಬಳಿಕ ಕಳೆದ 106 ದಿನಗಳಿಂದ ಬಂಡೀಪುರ ಸಫಾರಿ ಬಂದ್‌ ಆದ ಬಳಿಕ ಬಂಡೀಪುರ ಅರಣ್ಯ ಇಲಾಖೆ ಹಾಗೂ ಜಂಗಲ್‌ ಲಾಡ್ಜ್‌ಗೆ ಕನಿಷ್ಟ ೯ ಕೋಟಿ ರು.ನಷ್ಟು ಆದಾಯ ನಷ್ಟವಾಗಿದೆ.

---ಸಫಾರಿ ಬಂದ್‌ ಆಗಿದ್ದೇಕೆ?

೨೦೨೫ರ ಅಕ್ಟೋಬರ್‌ ಹಾಗೂ ನವಂಬರ್‌ನಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗದಲ್ಲಿ 4 ಮಂದಿ ರೈತರು ಹುಲಿ ದಾಳಿಗೆ ಸಾವನ್ನಪ್ಪಿದ್ದರು.


ರೈತರ ಸಾವಿಗೆ ಸಫಾರಿಯೇ ಕಾರಣ ರೈತ ಸಂಘಟನೆಗಳು ಸಫಾರಿ ಬಂದ್‌ಗೆ ಆಗ್ರಹಿಸಿತ್ತು. ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ಬಂಡೀಪುರ ಸೇರಿದಂತೆ ನಾಗರಹೊಳೆಯ ಸಫಾರಿ ಬಂದ್‌ ಮಾಡಿ ಕಳೆದ ೨೦೨೫ರ ನ.೭ರಂದು ಬಂಡೀಪುರ ಸಫಾರಿ ಬಂದ್‌ ಮಾಡಿ ಆದೇಶಿಸಿತ್ತು. ಕಳೆದ ವರ್ಷದ ನ.೭ರಂದು ಬಂಡೀಪುರ ಸಫಾರಿಗೆ ಬ್ರೇಕ್‌ ಬಿತ್ತು. ಸಫಾರಿಗೆ ಬ್ರೇಕ್‌ ಬಿದ್ದ ಬಳಿಕ ಸಹಜವಾಗಿಯೇ ಜಂಗಲ್‌ ಲಾಡ್ಜ್‌ಗೆ ಬರುವ ಪ್ರವಾಸಿಗರ ಸಂಖ್ಯೆ ಕುಸಿಯಿತು. ಜನರಿಲ್ಲದೇ ಇವುಗಳು ಬಿಕೋ ಎನ್ನಲಾರಂಭಿಸಿತು.

---

ಸಫಾರಿಯಿಂದ ಪ್ರತಿ ದಿನ ₹4-5 ಲಕ್ಷ ಇನ್ಕಂ?

ಬಂಡೀಪುರ ಸಫಾರಿ ಸ್ಥಗಿತಗೊಂಡ ಹಿನ್ನಲೆ ಸಫಾರಿಗೆ ಪ್ರತಿ ನಿತ್ಯ ಕನಿಷ್ಟ 4-5 ಲಕ್ಷದ ತನಕ ಆದಾಯ ಬರುತ್ತಿತ್ತು. ೧೦೬ ದಿನ ಸಫಾರಿ ಇಲ್ಲದ ಕಾರಣ ಕನಿಷ್ಟ 6 ಕೋಟಿ ರು.ನಷ್ಟು ಇಲಾಖೆಗೆ ಆದಾಯ ಇಲ್ಲದಾಗಿದೆ ಎಂಬುದು ಅಧಿಕಾರಿಗಳ ಹೇಳಿಕೆ.

---

ಲಾಡ್ಜ್‌ಗೆ ₹3.7 ಕೋಟಿ ನಷ್ಟ?

ಪ್ರತಿ ದಿನದ ಆದಾಯ 3.5-3.75 ಲಕ್ಷ ರು. ಇತ್ತು. ೧೦೬ ದಿನಗಳಿಂದ ಆದಾಯ ನಷ್ಟದಿಂದಾಗಿ ಕನಿಷ್ಟ 3.75 ಕೋಟಿ ರು.ನಷ್ಟು ಆದಾಯ ಜಂಗಲ್‌ ಲಾಡ್ಜ್‌ ನಷ್ಟವಾಗಿದೆ ಎಂದು ಸಹಾಯಕ ವ್ಯವಸ್ಥಾಪಕ ದೀಪಕ್‌ ಹೇಳಿದ್ದಾರೆ.

---

ಖಾಸಗಿ ರೆಸಾರ್ಟ್‌, ಹೋಟೆಲ್‌, ಹೋಂ ಸ್ಟೇಗೂ ಹೊಡೆತ!

ಸರ್ಕಾರಿ ಲಾಡ್ಜ್‌, ರೆಸಾರ್ಟ್‌ ಜೊತೆಗೆ ಬಂಡೀಪುರದೊಳಗೆ ಹಾಗೂ ಹೊರಗಿನ ರೆಸಾರ್ಟ್‌, ಹೋಟೆಲ್‌,ಹೋಂ ಸ್ಟೇಗಳಿಗೂ ಪ್ರವಾಸಿಗರ ಹೆಜ್ಜೆ ಕಡಿಮೆಯಾಗಿ ಆದಾಯ ಕುಸಿದಿದೆ.

ಪ್ರವಾಸಿಗರ ಸಂಖ್ಯೆ ಇಳಿದ ಕಾರಣ ಪ್ರವಾಸೋದ್ಯಮ ನಂಬಿದ್ದವರು ಆದಾಯ ಇಲ್ಲದೆ ಕಾರ್ಮಿಕರು ಸಹ ಎಲ್ಲಿ ಕೆಲಸ ಹೋದಿತೂ ಎಂಬ ಆತಂಕದಲ್ಲಿದ್ದರು.

---

ಸಫಾರಿ ಆದಾಯದಿಂದ ನಾನಾ ಕೆಲಸ!

ಬಂಡೀಪುರ ಸಫಾರಿಯಿಂದ ಬರುವ ಆದಾಯದಲ್ಲಿ ಸಫಾರಿ ಕೇಂದ್ರದ ವಾಹನ ಚಾಲಕರು, ಗೈಡ್‌ಗೆ ಸಂಬಳ ಹಾಗೂ ಹಾಡಿ ಮಕ್ಕಳ ಓದಿಗೆ ಪ್ರೋತ್ಸಾಹ ಧನ, ಹಾಡಿಗಳಿಗೆ ಸೋಲಾರ್‌ ಲೈಟ್‌, ಎಸ್‌ಸಿ, ಎಸ್‌ಟಿಗೆ ಗ್ಯಾಸ್‌ ಸ್ಟೌ, ಸಿಲಿಂಡರ್‌, ಗಿರಿಜನರಿಗೆ ಹೊಲಿಗೆ ಯಂತ್ರಕ್ಕೆ ಬಳಕೆ ಮಾಡಲಾಗುತ್ತಿದೆ.

ಅಲ್ಲದೆ ಮಾನವ ಪ್ರಾಣಿ ಸಂಘರ್ಷ ತಡೆಯಲು ಕಂದಕ ನಿರ್ವಹಣೆ ಹಾಗೂ ಇನ್ನಿತರ ಚಟುವಟಿಕೆಗಳಿಗೂ ಸಫಾರಿಯಿಂದ ಬಂದ ಆದಾಯದಲ್ಲಿ ಬಂಡೀಪುರ ಅರಣ್ಯ ಇಲಾಖೆ ಬಳಸುತ್ತಿತ್ತು.