ಸಂವಿಧಾನದ ಆಶಯ ಜಾರಿಗೆ ಬರಲು ಎಲ್ಲರ ಪ್ರಯತ್ನ ಮುಖ್ಯ: ಡಿಸಿ

| Published : Feb 13 2024, 12:47 AM IST

ಸಂವಿಧಾನದ ಆಶಯ ಜಾರಿಗೆ ಬರಲು ಎಲ್ಲರ ಪ್ರಯತ್ನ ಮುಖ್ಯ: ಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಹಕ್ಕುಗಳು ಎಷ್ಟು ಮುಖ್ಯವೋ ಕರ್ತವ್ಯಗಳು ಕೂಡ ಅಷ್ಟೇ ಮುಖ್ಯ. ಸಂವಿಧಾನದಲ್ಲಿರುವ ಮೌಲ್ಯಗಳನ್ನು ಪ್ರತಿಯೊಬ್ಬರು ಅಳವಡಿಕೊಳ್ಳುವ ಮೂಲಕ ಬಾಬಾ ಸಾಹೇಬರ ಕನಸು ನನಸು ಮಾಡಲು ಪ್ರಯತ್ನಿಸಬೇಕು.

ಕನ್ನಡಪ್ರಭ ವಾರ್ತೆ ಕಲಬುರಗಿ

ಬಾಬಾಸಾಹೇಬ ಅಂಬೇಡ್ಕರ್ ಅವರು ನೀಡಿರುವ ಭಾರತದ ಸಂವಿಧಾನದ ಆಶಯಗಳು ಜಾರಿಗೆ ಬರಲು ಪ್ರತಿಯೊಬ್ಬರ ಪ್ರಯತ್ನ ಮುಖ್ಯ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.

ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮತ್ತು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸಂವಿಧಾನ ಅಂಗೀಕಾರಗೊಂಡು 75 ವರ್ಷಗಳು ಪೂರ್ಣಗೊಂಡ ಹಿನ್ನಲೆಯಲ್ಲಿ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಸಂವಿಧಾನ ಜಾಥಾ ಉದ್ದೇಶಸಿ ಮಾತನಾಡಿದರು.

ಹಕ್ಕುಗಳು ಎಷ್ಟು ಮುಖ್ಯವೋ ಕರ್ತವ್ಯಗಳು ಕೂಡ ಅಷ್ಟೇ ಮುಖ್ಯ. ಸಂವಿಧಾನದಲ್ಲಿರುವ ಮೌಲ್ಯಗಳನ್ನು ಪ್ರತಿಯೊಬ್ಬರು ಅಳವಡಿಕೊಳ್ಳುವ ಮೂಲಕ ಬಾಬಾ ಸಾಹೇಬರ ಕನಸು ನನಸು ಮಾಡಲು ಪ್ರಯತ್ನಿಸಬೇಕು. ಸಂವಿಧಾನದ ಸಮಾನತೆ, ಭ್ರಾತೃತ್ವ, ಏಕತೆಯಂತಹ ತತ್ವಗಳು ಸಾರ್ವಜನಿಕರಿಗೆ, ಜನಪ್ರತಿನಿಧಿಗಳಿಗೆ ತಲುಪಿಸಲು ಜಿಲ್ಲಾದ್ಯಂತ ಬೇರೆ ಬೇರೆ ಮಾರ್ಗಗಳಲ್ಲಿ ಜಾಥಾ ವಾಹನಗಳು ಸಂಚರಿಸುತ್ತಿವೆ. ಅದ್ಭುತವಾದ ಯಶಸ್ಸು ದೊರೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಜಿಪಂ ಸಿಇಓ ಭನ್ವರ ಸಿಂಗ್ ಮೀನಾ ಮಾತನಾಡಿ, ಜಿಲ್ಲೆಯ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚರಿಸುತ್ತಿವೆ. ಉತ್ತಮ ಸ್ಪಂಧನೆ ದೊರೆಯುತ್ತಿದೆ ಎಂದರು.

ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ಮಾತನಾಡಿ, ಕಾನೂನಿನ ದೃಷ್ಟಿಯಲ್ಲಿ ಹೆಣ್ಣು ಗಂಡು ಸಮಾನರು. ಸಂವಿಧಾನಲ್ಲಿ ಸರ್ವರಿಗೂ ಸಮಾನತೆ ಇದೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಜಿಲ್ಲಾಧಿಕಾರಿಗಳು ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಾಥಾಕ್ಕೆ ಚಾಲನೆ ನೀಡಿ ಮಿನಿವಿಧಾನ ಸೌಧದವರೆಗೆ ವಿದ್ಯಾರ್ಥಿಗಳ ಜೊತೆಗೆ ಸಾಗಿ ಬಂದು ವಿಧಾನ ಸೌಧ ಮುಂಭಾಗದಲ್ಲಿ ಸಾವಿರಾರು ವಿದ್ಯಾರ್ಥಿಗಳ ಜೊತೆ ಸಂವಿಧಾನದ ಪೀಠಿಕೆಯನ್ನು ಓದಿದರು.

ಜಾಥಾ ಅಂಗವಾಗಿ ಕಲಬುರಗಿ ನಗರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಹಾಸ್ಟೆಲ್ ಗಳ ವಿದ್ಯಾರ್ಥಿನಿಯರು ಮತ್ತು ಕ್ರೈಸ್ ವಸತಿ ಶಾಲೆಗಳ, ವಿದ್ಯಾರ್ಥಿಗಳು ಚಿತ್ರಕಲಾ ಶಿಕ್ಷಕರು ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ರಂಗೋಲಿ ಮತ್ತು ಧವಸಧಾನ್ಯಗಳಿಂದ ಬಿಡಿಸಿದ ಚಿತ್ರಗಳನ್ನು ಸಂಸದ ಡಾ.ಉಮೇಶ ಜಾಧವ ಉದ್ಘಾಟಿಸಿದರು.

ಶಾಸಕ ಡಾ.ಅವಿನಾಶ ಜಾಧವ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ, ಸಹಾಯಕ ನಿರ್ದೇಶಕ ಗಿರಿಶ ರಂಜೋಳಕರ್, ವಿಜಯಲಕ್ಷ್ಮಿ ಹೊಳಕರ್, ಸದಾನಂದ ಹಾಗರಗಿ, ಶ್ರಿನಿವಾಸ ಜಾಧವ, ವಿದ್ಯಾಧರ ಕಾಂಬಳೆ, ಪ್ರಾಂಶುಪಾಲರಾದ ಶಿವರಾಂ ಚವ್ಹಾಣ, ಶಿವಪುತ್ರಪ್ಪ ಕಕ್ಕಳಮೇಲಿ ಸೇರಿದಂತೆ ಸಮಾಜ ಕಲ್ಯಾಣ ಇಲಖೆಯ ವಸತಿ ಶಾಲೆಗಳ ಮತ್ತು ವಸತಿ ನಿಲಯಗಳ ಸಿಬ್ಬಂದಿ ಇದ್ದರು.