ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಸಮಗ್ರ ಅಭಿವೃದ್ಧಿಯೊಂದಿಗೆ ಜನರಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ತಿಳಿಸಿದರು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶನಿವಾರ ನಡೆದ ವಿಶೇಷ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನನ್ನ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಎಲ್ಲ ಜನಪ್ರತಿನಿಧಿಗಳ ಸಹಕಾರದಿಂದ ಸಾಕಷ್ಟು ಪ್ರಗತಿ ಅನುದಾನ ತರುವ ಕೆಲಸ ಮಾಡಲಾಗಿದೆ ಎಂದರು.
ಈ ಹಿಂದೆ ಸದಸ್ಯರ ಅಧ್ಯಯನ ಪ್ರವಾಸಕ್ಕೆ ನಿರ್ಧರಿಸಲಾಗಿತ್ತು. ಆದರೆ, ಕೆಲ ತಾಂತ್ರಿಕ ಸಮಸ್ಯೆಗಳಿಂದ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಮರು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಸದ್ಯದಲ್ಲಿಯೇ ಪುರಸಭೆ ಎಲ್ಲ ಸದಸ್ಯರು ಅಧ್ಯಯನ ಪ್ರವಾಸ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.ಕಾಂಗ್ರೆಸ್ ಸದಸ್ಯರಾದ ಎಂ.ಆರ್.ರಾಜಶೇಖರ್, ಎಂ.ಎನ್.ಶಿವಸ್ವಾಮಿ ಮಾತನಾಡಿ, 15ನೇ ಹಣಕಾಸು ಯೋಜನೆಯಡಿ ಅನುದಾನ ಹಂಚಿಕೆಯಲ್ಲಿ ನಮ್ಮ ವಾರ್ಡ್ ಗಳಿಗೆ ತಾರತಯ್ಯ ಮಾಡಲಾಗಿದೆ. ಕೆಲವೆಡೆ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಕೆಲ ವಾರ್ಡ್ ಗಳಿಗೆ ಮಾತ್ರ ಹಂಚಿಕೆ ಮಾಡಿ ನಮಗೆ ಅನ್ಯಾಯ ಮಾಡಲಾಗಿದೆ. ಮರು ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಅಧ್ಯಕ್ಷರು ಮಾತನಾಡಿ, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು. ಅಭಿವೃದ್ಧಿ ಕಾಮಗಾರಿಗಳು ಹಾಗೂ ಕೆಲ ಟೆಂಡರ್ ಗಳನ್ನು ಅನುಮೋದಿಸಿಕೊಳ್ಳಲಾಯಿತು.ಸಭೆಗೆ ಉಪಾಧ್ಯಕ್ಷ ಎನ್.ಬಸವರಾಜು ಸೇರಿದಂತೆ ಕೆಲ ಪಕ್ಷೇತರರು ಹಾಗೂ ಜೆಡಿಎಸ್ ನ ಹಲವು ಸದಸ್ಯರು ಅಧಿಕಾರ ಹಂಚಿಕೆ ಅಸಮಾಧಾನದಿಂದ ಗೈರಾಗಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ಕೃಷ್ಣ, ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಪಾಲ್ಗೊಂಡಿದ್ದರು.
ಹಿರಿಯ ನಟ ದಿ.ಅಂಬರೀಷ್ ಅವರಿಗೂ ಕರ್ನಾಟಕ ರತ್ನ ನೀಡಿ ಒತ್ತಾಯಶ್ರೀರಂಗಪಟ್ಟಣ:
ರಾಜ್ಯದ ಜನಮೆಚ್ಚಿದ ನಟ, ಮಂಡ್ಯ ಗಂಡು ಮಾಜಿ ಕೇಂದ್ರ ಸಚಿವ, ದಿ.ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಕರ್ನಾಟಕ ರತ್ನ ನೀಡುವಂತೆ ತಾಪಂ ಮಾಜಿ ಅಧ್ಯಕ್ಷ ಕೆಆರ್ಎಸ್ ರಾಮೇಗೌಡ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಕಾವೇರಿ ಹೋರಾಟದಲ್ಲಿ ರೈತರ ಹಿತಕ್ಕಾಗಿ ಕೇಂದ್ರ ಸಚಿವ ಸ್ಥಾನಕ್ಕೆ ಅಂಬರೀಷ್ ರಾಜೀನಾಮೆ ಸಲ್ಲಿಸಿದ್ದರು. ಅವರ ಹೋರಾಟ ಸ್ಮರಣೀಯ. ಹಲವು ಜನರು, ಬಡವರ ಬಂಧು, ಪಕ್ಷದ ನಿಷ್ಠೆಯಲ್ಲಿದ್ದು, ಜನರ ಹಿತಕೊಸ್ಕರ ಹೋರಾಟ ಮಾಡಿದ್ದಾರೆ ಎಂದು ಹೇಳಿದ್ದಾರೆ. ಚಲನಚಿತ್ರರಂಗದಲ್ಲಿ ಅಜಾತ ಶತ್ರುವಾಗಿದ್ದ ಅಂಬರೀಷ್ ವಿಶೇಷ ರಾಜಕಾರಣಿಯಾಗಿ ಹಲವು ಕೆಲಸಗಳನ್ನು ಮಾಡಿದ್ದಾರೆ. ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಮಾನ್ಯ ಮುಖ್ಯಮಂತ್ರಿಗಳು ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.