ಸಾರಾಂಶ
ಎನ್ಎಚ್ಎಐ ರಸ್ತೆಗಳಲ್ಲಿ ಕೆಲವು ಸಮಸ್ಯೆಗಳಿದ್ದು, ವಿಶೇಷವಾಗಿ ಎನ್ಎಚ್-50ರಲ್ಲಿ ಟೋಲ್ಗೇಟ್ನಿಂದ ಟನಲ್ ಬಳಿ ಬಹಳಷ್ಟು ಅಪಘಾತಗಳಾಗುತ್ತಿದ್ದವು. ಇದರಿಂದ ಪ್ರತಿ ವರ್ಷ 100 ಜನರ ಸಾವು ಉಂಟಾಗುತ್ತಿತ್ತು. ಈ ಸಮಸ್ಯೆ ತಡೆಯಲು ಓವರ್ ಬ್ರಿಡ್ಜ್ ಮಾಡಬೇಕೆಂದು ಮಾಜಿ ಸಂಸದ ಕರಡಿ ಸಂಗಣ್ಣ ಅವರು ಪ್ರಯತ್ನಿಸಿದ್ದರು.
ಕೊಪ್ಪಳ:
ಜನರ ಆಶೀರ್ವಾದದಿಂದ ಸಂಸದನಾದ ನಂತರ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ ಎಂದು ಸಂಸದ ಕೆ. ರಾಜಶೇಖರ ಹಿಟ್ನಾಳ ಹೇಳಿದರು.ಸಂಸದರಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಶುಕ್ರವಾರ ಜಿಲ್ಲಾಡಳಿತ ಭವನದಲ್ಲಿ ಮಾಹಿತಿ ನೀಡಿದರು.
ಎನ್ಎಚ್ಎಐ ರಸ್ತೆಗಳಲ್ಲಿ ಕೆಲವು ಸಮಸ್ಯೆಗಳಿದ್ದು, ವಿಶೇಷವಾಗಿ ಎನ್ಎಚ್-50ರಲ್ಲಿ ಟೋಲ್ಗೇಟ್ನಿಂದ ಟನಲ್ ಬಳಿ ಬಹಳಷ್ಟು ಅಪಘಾತಗಳಾಗುತ್ತಿದ್ದವು. ಇದರಿಂದ ಪ್ರತಿ ವರ್ಷ 100 ಜನರ ಸಾವು ಉಂಟಾಗುತ್ತಿತ್ತು. ಈ ಸಮಸ್ಯೆ ತಡೆಯಲು ಓವರ್ ಬ್ರಿಡ್ಜ್ ಮಾಡಬೇಕೆಂದು ಮಾಜಿ ಸಂಸದ ಕರಡಿ ಸಂಗಣ್ಣ ಅವರು ಪ್ರಯತ್ನಿಸಿದ್ದರು. ನಾನು ಸಂಸದನಾದ ನಂತರ ಟೆಂಡರ್ ಮಾಡಿಸಿ, ಹೊಸಲಿಂಗಾಪುರ ಕ್ರಾಸ್, ಹೊಸಳ್ಳಿ ಕ್ರಾಸ್, ಹಿಟ್ನಾಳ್ ಕ್ರಾಸ್, ಮೆತಗಲ್ ಕ್ರಾಸ್ ಸೇರಿದಂತೆ ₹ 1190 ಲಕ್ಷದಲ್ಲಿ ನಾಲ್ಕು ಫ್ಲೈಓವರ್ ನಿರ್ಮಿಸಲಾಗುತ್ತಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಪ್ರಸ್ತುತ ಅಪಘಾತ ಪ್ರಮಾಣ ಶೇ.70ರಷ್ಟು ಕಡಿಮೆಯಾಗಿದ್ದು, ಶೂನ್ಯಕ್ಕೆ ತರುವ ಪ್ರಯತ್ನ ಮಾಡಲಾಗುವುದು ಎಂದರು.ರಾಷ್ಟ್ರೀಯ ಹೆದ್ದಾರಿ 50ರಲ್ಲಿ ರಸ್ತೆ ಅಪಘಾತ ತಡೆಗಟ್ಟಲು ವಾಹನ ವೇಗ ನಿಯಂತ್ರಣಕ್ಕೆ ಸೆಕ್ಯೂರಿಟಿ ಸಿಸ್ಟಮ್ ಮತ್ತು ಸಿಸಿ ಟಿವಿ ಅಳವಡಿಕೆಗಾಗಿ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದು, ಇದಕ್ಕಾಗಿ ₹ 2 ಕೋಟಿ ಮಂಜೂರು ಮಾಡಿದ್ದಾರೆ. ಈ ಕಾಮಗಾರಿ ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಅಂಚೆ ಇಲಾಖೆಯಿಂದ ಇನ್ಸೂರೆನ್ಸ್, ಪಿಂಚಣಿ, ಆರ್ಡಿ ಸೇರಿದಂತೆ ಹಲವಾರು ಪೋಸ್ಟಲ್ ಸೇವೆಗಳು ಸಾರ್ವಜನಿಕರಿಗೆ ಸಿಗುತ್ತಿವೆ. ಆದರೆ, ಅಂಚೆ ಕಚೇರಿಗೆ ಬರುವ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳ ಕೊರೆತೆಯಿದ್ದು, ಸಿಎಸ್ಆರ್ ಅನುದಾನದಲ್ಲಿ ₹ 13.50 ಲಕ್ಷ ವೆಚ್ಚದಲ್ಲಿ ಪ್ರಾಥಮಿಕ ಹಂತದಲ್ಲಿ ಕುಣಿಕೇರಿ ಮತ್ತು ಹಿರೇಬಗನಾಳ ಗ್ರಾಮಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಗುಳದಳ್ಳಿದಲ್ಲಿ ಭೂಮಿ ಪೂಜೆ ಮಾಡಲಾಗಿದೆ. ಜಿಲ್ಲೆಯಲ್ಲಿ 182 ಪೋಸ್ಟ್ ಆಫೀಸ್ಗಳಿದ್ದು ಇವುಗಳ ಅಭಿವೃದ್ಧಿಗೆ ಜಿಲ್ಲೆಯ ವಿವಿಧ ಕಂಪನಿಗಳಿಗೆ ಮನವಿ ಮಾಡಲಾಗಿದೆ. ಎಕ್ಸ್ ಇಂಡಿಯಾ ಮತ್ತು ಮುಕುಂದ್ಸ್ ಕಂಪನಿ ತಲಾ ಎರಡು, ಕಿರ್ಲೋಸ್ಕರ್ ಮತ್ತು ಕಲ್ಯಾಣಿ ಕಂಪನಿ ತಲಾ 15 ಅಂಚೆ ಕಚೇರಿಯ ಕಟ್ಟಡ ಮಾಡುವುದಾಗಿ ಹೇಳಿದ್ದಾರೆ. ಈ ವರ್ಷ 35ರಿಂದ 40 ಪೋಸ್ಟ್ ಆಫೀಸ್ ಕಟ್ಟಡ ನಿರ್ಮಾಣವಾಗಲಿವೆ ಎಂದು ಹೇಳಿದರು.ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಸ್ಮಾರ್ಟ್ ಕ್ಲಾಸ್ನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗುತ್ತದೆ ಎಂದ ಅವರು, ಸ್ವಾಮಿ ವಿವೇಕಾನಂದ ಶಾಲೆ ರಸ್ತೆಯ ಗೇಟ್ ನಂ. 63ಕ್ಕೆ ಈಗಾಗಲೇ ಕೆಳಸೇತುವೆ ನಿರ್ಮಾಣ ಮಾಡಿದ್ದು ರಸ್ತೆ ಅಗಲೀಕರಣ ಕಾಮಗಾರಿ ಶೀಘ್ರದಲ್ಲಿಯೇ ಆಗಲಿದೆ ಎಂದರು.