ಚಿತ್ತಾಪುರ ದಂಗಲ್‌ ಶಮನಕ್ಕೆಕಸರತ್ತು: ನಾಳೆ ಶಾಂತಿಸಭೆ

| Published : Oct 27 2025, 12:15 AM IST

ಸಾರಾಂಶ

ಚಿತ್ತಾಪುರದಲ್ಲಿ ನ.2ರಂದು ಸಂಘದ ಶತಾಬ್ದಿ ಅಂಗವಾಗಿ ಆರೆಸ್ಸೆಸ್ ಹಮ್ಮಿಕೊಂಡಿರುವ ಪಥ ಸಂಚಲನ ಅಂಗವಾಗಿ ಉಂಟಾಗಿರುವ ಗೊಂದಲ ತಿಳಿಗೊಳಿಸಲು ಅ.28ರಂದು ಜಿಲ್ಲಾಡಳಿತ ಶಾಂತಿಸಭೆ ಕರೆದಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಸಚಿವ ಪ್ರಿಯಾಂಕ್‌ ಖರ್ಗೆ ತವರು ಕ್ಷೇತ್ರ ಚಿತ್ತಾಪುರದಲ್ಲಿ ನ.2ರಂದು ಸಂಘದ ಶತಾಬ್ದಿ ಅಂಗವಾಗಿ ಆರೆಸ್ಸೆಸ್ ಹಮ್ಮಿಕೊಂಡಿರುವ ಪಥ ಸಂಚಲನದ ದಿನವೇ ಭೀಮ್‌ ಆರ್ಮಿ, ದಲಿತ ಪ್ಯಾಂಥರ್‌ ಸೇರಿದಂತೆ ವಿವಿಧ ಸಂಘಟನೆಗಳವರು ಪಥ ಸಂಚಲನ, ಹೋರಾಟಗಳಿಗೆ ಅನುಮತಿ ಕೋರಿದ್ದರಿಂದ ಉಂಟಾಗಿರುವ ಗೊಂದಲ ತಿಳಿಗೊಳಿಸಲು ಹೈಕೋರ್ಟ್‌ ಕಲಬುರಗಿ ಪೀಠದ ಸೂಚನೆಯಂತೆ ಅ.28ರಂದು ಜಿಲ್ಲಾಡಳಿತ ಶಾಂತಿಸಭೆ ಕರೆದಿದೆ.

ಹೈಕೋರ್ಟ್‌ ನಿರ್ದೇಶನದಂತೆ ಜಿಲ್ಲಾಡಳಿತವು ಆರೆಸ್ಸೆಸ್‌, ಭೀಮ್‌ ಆರ್ಮಿ, ದಲಿತ ಪ್ಯಾಂಥರ್‌, ಗೊಂಡ- ಕುರುಬ, ರೈತ ಸಂಘ ಹಸಿರು ಸೇನೆ, ಕ್ರಿಶ್ಚಿಯನ್‌ ಅಸೋಸಿಯೇಶನ್‌ ಸೇರಿದಂತೆ ನ.2ರಂದೇ ಚಿತ್ತಾಪುರದಲ್ಲಿ ಹೋರಾಟ ಹಾಗೂ ಪಥ ಸಂಚಲನ, ಹೋರಾಟಕ್ಕೆ ಅನುಮತಿ ಕೋರಿರುವ ವಿವಿಧ ಸಂಘಟನೆಗಳವರಿಗೆ ಸಭೆಗೆ ಹಾಜರಾಗುವಂತೆ ಸೂಚಿಸಿದೆ.

ಸಭೆಗೆ ಪ್ರತಿ ಸಂಘಟನೆಯಿಂದ ಗರಿಷ್ಠ ಮೂವರು ಹಾಜರಾಗಿ, ಬಯಸಿದರೆ ಲಿಖಿತ ಹೇಳಿಕೆ ಸಲ್ಲಿಸಲು ಅವಕಾಶವಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಸಂಘ ಶತಾಬ್ದಿ ಅಂಗವಾಗಿ ಅ.19ರಂದು ನಡೆಸಲು ಉದ್ದೇಶಿಸಿದ್ದ ಪಥ ಸಂಚಲನಕ್ಕೆ ತಾಲೂಕು ಆಡಳಿತ ಅನುಮತಿ ನಿರಾಕರಿಸಿದ್ದನ್ನು ಪ್ರಶ್ನಿಸಿ ಸಂಘ ಕೋರ್ಟ್‌ ಮೊರೆ ಹೋಗಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಗೊಂದಲ ತಿಳಿಗೊಳಿಸುವ ಭಾಗವಾಗಿ ಅ.28ರಂದು ಶಾಂತಿಸಭೆ ನಡೆಸಿ ವರದಿಯೊಂದಿಗೆ ಅ.30ಕ್ಕೆ ಬನ್ನಿರೆಂದು ಸೂಚಿಸಿದ್ದರಿಂದ ಜಿಲ್ಲಾಡಳಿತ ಇದೀಗ ಸಭೆ ಆಯೋಜಿಸಿದೆ. ಅ.28ರಂದು ಶಾಂತಿಸಭೆ ನಿಗದಿಪಡಿಸಿದೆ. ಸಭೆಗೆ ಹಾಜರಾಗುವಂತೆ 10 ಸಂಘಟನೆಗಳಿಗೆ ನೋಟಿಸ್ ನೀಡಿ ಆಹ್ವಾನಿಸಲಾಗಿದೆ. ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ನೇತೃತ್ವದಲ್ಲಿ ಅ.28 ರಂದು ಪೂರ್ವಾಹ್ನ 11:30ಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯ ಸಂಭಾಗಣದಲ್ಲಿ ಶಾಂತಿ ಸಭೆ ನಿಗದಿಯಾಗಿದೆ.