ಸಾರಾಂಶ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ರೈತರು ಕೃಷಿಯಲ್ಲಿ ಉತ್ಪಾದನಾ ಹೆಚ್ಚಿಸಲು ಅನೇಕ ತಂತ್ರಜ್ಞಾನಗಳಿದ್ದರೂ ಅದರಲ್ಲಿಯೂ ಕೆಲವು ಇತಿಮಿತಿಗಳಿವೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.ನಗರದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಶನಿವಾರ ಕೃಷಿ ಇಲಾಖೆ, ತಾಲೂಕು ಕೃಷಿಕ ಸಮಾಜ ವತಿಯಿಂದ ಆತ್ಮಾ ಯೋಜನೆಯ ಬಿ-12 ಘಟಕದ ಸಹಯೋಗದಲ್ಲಿ ಮಾಜಿ ಪ್ರಧಾನಿ ಚರಣಸಿಂಗ್ ಜನ್ಮದಿನದ ಅಂಗವಾಗಿ ಏರ್ಪಡಿಸಲಾಗಿದ್ದ ರೈತ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ರೈತರು ಬೆಳೆಗಳಿಗೆ ಮೋಹಕ ಬಲೆಗಳನ್ನು ಹಾಕುವ ಮೂಲಕ ಉತ್ಪಾದನೆ ಹೆಚ್ಚಿಸಬಹುದು. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಡ್ರೋಣ ಮೂಲಕ ರೈತರ ಬೆಳೆಗಳಿಗೆ ಔಷಧಿ ಸಿಂಪಡಣೆ ಮಾಡಲಾಗುವುದು. ಮುಂದಿನ ಐದು ವರ್ಷಗಳಲ್ಲಿ ತಂತ್ರಜ್ಞಾನ ಬಳಸಿ ರೈತರ ಆದಾಯ ದ್ವಿಗುಣಗೊಳಿಸಲು ಪ್ರಯತ್ನಿಸುತ್ತೇನೆ ಎಂದರು.
ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಇಂದು ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬೆಳೆವಿಮೆ ಯೋಜನೆಯಲ್ಲಿ ರೈತರಿಗೆ ಅನ್ಯಾಯವಾಗುತ್ತಿದ್ದು, ಅದನ್ನು ಪಡೆಯಲು ಹೋರಾಟ ಮಾಡಬೇಕಾಗಿದೆ. ಏಷ್ಯಾ ಖಂಡದಲ್ಲಿಯೇ ಬಿಜೋತ್ಪಾದನೆ ಹೊಂದಿರುವ ರೈತರಿಗೆ ಸೌಲಭ್ಯಗಳಿಲ್ಲ. ಕೂಡಲೇ ಪರಿಹಾರ ನೀಡಬೇಕಿದೆ ಎಂದರು.ಮೆಡ್ಲೇರಿ ಗ್ರಾಮದ ರೈತ ನಾಗಪ್ಪ ಮಾತನಾಡಿ, ಭೂಮಿಗೆ ರಸಾಯನಿಕ ಗೊಬ್ಬರ ಹಾಕಿ ಅದನ್ನು ಹಾಳು ಮಾಡಲಾಗಿದೆ. ಹೀಗಾಗಿ ಅದಕ್ಕೆ ಅಗತ್ಯವಾದ ಪೋಷಕಾಂಶ ನೀಡಬೇಕಿದೆ ಎಂದರು.
ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಸಂಶೋಧನಾ ವಿಜ್ಞಾನಿ ಡಾ. ಪ್ರಿಯಾ ಉಪನ್ಯಾಸ ನೀಡಿದರು.ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಎಂ.ಎಚ್. ಪಾಟೀಲ, ಕೃಷಿ ಇಲಾಖೆ ಉಪ ನಿರ್ದೇಶಕ ಕರಿಯಲ್ಲಪ್ಪ ಕೊರಚರ, ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ, ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ನೀಲಕಂಠ ಅಂಗಡಿ, ರೇಷ್ಮೆ ವಿಸ್ತರಣೆ ಅಧಿಕಾರಿ ನಿತೀನ್ ಜಿ., ರೈತ ಮುಖಂಡ ಸುರೇಶ ಹೊನ್ನಪ್ಪಳವರ, ಹನುಮಂತಪ್ಪ ಕಬ್ಬಾರ, ಸತ್ಯಪ್ಪ ಡಿಳ್ಳೇಪ್ಪನವರ, ಜಗದೀಶ, ಕೃಷಿಕ ಸಮಾಜದ ಮಂಜುಳಾ ಮತ್ತಿತರರಿದ್ದರು.
ಯಕಲಾಸಪುರದ ಜನನಿ ಕಲಾ ತಂಡದ ಕಲಾವಿದರು ಸಂಗೀತ ಸೇವೆ ನಡೆಸಿಕೊಟ್ಟರು. ಸಮಾರಂಭದಲ್ಲಿ ಕೃಷಿಯಲ್ಲಿ ವಿಶೇಷ ಸಾಧನೆಗೈದ ತಾಲೂಕಿನ ರೈತರಿಗೆ ಸನ್ಮಾನ ಮಾಡಲಾಯಿತು.