ನಿವೃತ್ತ ನೌಕರರ ಸೌಲಭ್ಯ ಕೊಡಿಸುವಲ್ಲಿ ಪ್ರಯತ್ನ

| Published : Dec 31 2023, 01:30 AM IST

ಸಾರಾಂಶ

ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಶಾಸಕ ವಿಶ್ವಾಸ ವೈದ್ಯ ಭರವಸೆ ನೀಡಿದ್ದು, ನಿವೃತ್ತ ನೌಕರರ ಸೌಲಭ್ಯ ಕೊಡಿಸುವಲ್ಲಿ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಸವದತ್ತಿ

ಅರವತ್ತು ವರ್ಷಗಳ ಕಾಲ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಬದುಕು ಸಾಗಿಸುತ್ತಿರುವ ಎಲ್ಲ ನಿವೃತ್ತ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಅವರಿಗೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕವಾದ ಪ್ರಯತ್ನ ಮಾಡುವೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಸ್ಥಳೀಯ ಗುರುಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ತಾಲೂಕು ಘಟಕದ ಆಶ್ರಯದಲ್ಲಿ 2023ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ 75 ವಸಂತಗಳನ್ನು ಪೂರೈಸಿದ ಸಂಘದ ಸದಸ್ಯರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಿವೃತ್ತವಾಗಿರುವ ಸಾಕಷ್ಟು ನೌಕರರು ಇಂದು ತಮ್ಮ ಬದುಕಿನುದ್ದಕ್ಕೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇಳಿ ವಯಸ್ಸಿನಲ್ಲಿ ಅವರಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸವನ್ನು ಮಾಡಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ನಿವೃತ್ತಿ ಹೊಂದಿರುವ ಎಲ್ಲ ನೌಕರರಿಗೆ ನಮ್ಮ ಇಲಾಖೆಯಿಂದ ಸಿಗಬೇಕಾದ ಸೌಕರ್ಯಗಳನ್ನು ಕೂಡಲೇ ಒದಗಿಸುವ ಮೂಲಕ ಅವರಿಗೆ ಅನುಕೂಲ ಕಲ್ಪಿಸಲಾಗುವುದು. ನೌಕರರು ತಾವು ವೃತ್ತಿಯಿಂದ ನಿವೃತ್ತರಾದರೂ ಸಹಿತ ಅವರ ಅನುಭವದ ಮಾರ್ಗದರ್ಶನ ನಮಗೆ ಮತ್ತು ಇಲಾಖೆಗೆ ಅತ್ಯವಶ್ಯವಾಗಿದೆ ಎಂದರು.

ನಿವೃತ್ತ ನೌಕರರ ಸಂಘ ತಾಲೂಕು ಘಟಕದಿಂದ ಶಾಸಕ ವಿಶ್ವಾಸ ವೈದ್ಯ ಹಾಗೂ ಬಿಇಒ ಮೋಹನ್ ದಂಡಿನ ಮತ್ತು 75 ವಸಂತಗಳನ್ನು ಪೂರೈಸಿದ ಸಂಘದ ಸದಸ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಗುರ್ಲಹೊಸೂರಿನ ಚಿದಂಬರೇಶ್ವರ ದೇವಸ್ಥಾನದ ದಂಡಪಾಣಿ ದೀಕ್ಷಿತರು ಸಾನ್ನಿಧ್ಯ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಟಿ.ಎಲ್.ಬಿಜತ್ಕರ್, ಸಂಘದ ಅಧ್ಯಕ್ಷ ಬಿ.ವಿ.ವಾಂಗಿ, ಎಸ್.ಬಿ.ಸಿದ್ನಾಳ, ಎ.ವೈ.ಬೆಂಡಿಗೇರಿ, ಭಾಗೀರತಿಬಾಯಿ ಹಿರೇಮಠ, ಎಂ.ಎಸ್.ಮುದಕವಿ, ಎನ್.ವಿ.ಚಿಂಚೋಳಿ, ಚಿದಂಬರ ತಾರಿಹಾಳ, ಎನ್.ಸಿ.ಪಾಟೀಲ, ಎ.ಕೆ.ಸರ್ಕಾಜಿ, ಎ.ಎಸ್.ಪಟಗುಂದಿ, ಟಿ.ಕೆ.ಏಗನಗೌಡ್ರು, ಎಂ.ಎ.ಮುಲ್ಲಾ, ಪಿ.ಎಂ.ರಾಯಣ್ಣವರ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.