ಸಾರಾಂಶ
ಕೃಷಿ ಇಲಾಖೆ ಆವರಣದಲ್ಲಿ ತಾಲೂಕು ಕೃಷಿಕ ಸಮಾಜದ ಆಡಳಿತ ಮಂಡಳಿ ದ್ವೈಮಾಸಿಕ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕಿನಲ್ಲಿ ರಸಗೊಬ್ಬರದ ಸಮಸ್ಯೆ ಇದ್ದರೆ ರೈತರು ಕೃಷಿಕ ಸಮಾಜದ ಗಮನಕ್ಕೆ ತಂದರೆ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೇವೆ ಎಂದು ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜಪ್ಪ ಭರವಸೆ ನೀಡಿದರು.
ಮಂಗಳವಾರ ಕೃಷಿ ಇಲಾಖೆ ಕಚೇರಿಯಲ್ಲಿ ತಾಲೂಕು ಕೃಷಿಕ ಸಮಾಜದ ಆಡಳಿತ ಮಂಡಳಿ ದ್ವೈಮಾಸಿಕ ಸಭೆಯಲ್ಲಿ ಮಾತನಾಡಿದರು. ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಮಾತನಾಡಿ ,ಕೃಷಿಕ ಸಮಾಜದ ಸಭೆಗೆ ಸಂಬಂಧಪಟ್ಟ ಎಲ್ಲಾ ಇಲಾಖೆ ಮುಖ್ಯ ಅಧಿಕಾರಿಗಳು ಹಾಜರಾಗಿ ಸಂಬಂಧ ಇಲಾಖೆ ಬಗ್ಗೆ ಮಾಹಿತಿ ನೀಡಬೇಕು. ಸಭೆಗೆ ಗೈರು ಹಾಜರಾದವರಿಗೆ ತಿಳುವಳಿಕೆ ಪತ್ರ ನೀಡಬೇಕು ಎಂದು ಸೂಚಿಸಿದರು.ಸಹಾಯಕ ತೋಟಗಾರಿಕಾ ನಿರ್ದೇಶಕ ಪುನೀತ್ ಸಭೆಗೆ ಮಾಹಿತಿ ನೀಡಿ, ತೋಟಗಾರಿಕೆ ಇಲಾಖೆಯಲ್ಲಿ ಅಡಕೆ ಸುಲಿ ಯುವ ಯಂತ್ರ, ಅಡಿಕೆ ಪಾಲಿಷ್ ಮಾಡುವ ಯಂತ್ರ ,ಕೊನೆ ತೆಗೆಯುವ ದೋಟಿಗೆ ಸಹಾಯಧನ ಲಭ್ಯವಿದೆ. ಜೇನು ಪೆಟ್ಟಿಗೆ ಲಭ್ಯವಿದ್ದು ಒಬ್ಬರೈತರಿಗೆ 2 ಪೆಟ್ಟಿಗೆ ವಿತರಣೆ ಮಾಡಲಾಗುವುದು. ಉದ್ಯೋಗ ಖಾತರಿ ಯೋಜನೆಯಡಿ ಗಿಡಗಳ ವಿತರಣೆ, ತುಂತುರು ನೀರಾವರಿ ಯೋಜನೆ ಬಗ್ಗೆ ಅವರು ಮಾಹಿತಿ ನೀಡಿದರು.
ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಮಹೇಶ್ ಮಾಹಿತಿ ನೀಡಿ, ಜನವರಿಯಿಂದ ಈವರೆಗೆ ಎರಡು ಪಟ್ಟು ಮಳೆಯಾಗಿದೆ. ರೈತರಿಗೆ ಇಲಾಖೆಯಿಂದ ಭತ್ತದ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ರೈತರು ಸೂಕ್ಷ್ಮ ನೀರಾವರಿ, ಕೃಷಿ ಯಾಂತ್ರೀಕರಣ ಯೋಜನೆಗಳಿಗೆ ಅರ್ಜಿಸಲ್ಲಿಸಿ ಜೇಷ್ಠತೆಗೆ ಅನುಸಾರ ಸವಲತ್ತು ಪಡೆಯಬಹುದು. 2024–25 ನೇ ಸಾಲಿನ ಸ್ಪಿಂಕ್ಲರ್, ಪಿವಿಸಿ ಪೈಪ್ಸ್ ನಮೂನೆಯನ್ನು ಸ್ಪೈಟ್ ಮೈಸೂರು ಅವರಿಗೆ ಸಲ್ಲಿಸಲಾಗಿದ್ದು ವರದಿ ಬಂದಿದೆ. ಯಾವುದೇ ಕಳಪೆ ಕಂಡು ಬಂದಿಲ್ಲ ಎಂದರು.ಪಶುಪಾಲನಾ ಇಲಾಖೆ ಹಸು ಪರೀಕ್ಷಿಕ ಎನ್.ಟಿ.ಶೇಷಾಚಲ ಮಾಹಿತಿ ನೀಡಿ, ಜಾನುವಾರುಗಳು ಆಕಸ್ಮಿಕವಾಗಿ ಮರಣ ಹೊಂದಿದರೆ ₹15 ಸಾವಿರ ರು. ಸಹಾಯಧನ, ಕುರಿ ಮತ್ತು ಮೇಕೆಗಳು ಮರಣ ಹೊಂದಿದರೆ ₹7,500 ರು. ಸಹಾಯಧನ ನೀಡಲಾಗುವುದು. ಅಲ್ಲದೆ ಮೇವಿನ ಜೋಳ ವಿತರಣೆ ಮಾಡುತ್ತಿದ್ದೇವೆ ಎಂದರು.
ಮೀನುಗಾರಿಕೆ ಇಲಾಖೆ ಅಧಿಕಾರಿ ಮಾಹಿತಿ ನೀಡಿ, ಮೀನುಗಾರಿಕೆ ಇಲಾಖೆಯಲ್ಲಿ ಮೀನು ಮರಿಗಳಿದ್ದು ರೈತರು ಸದುಪ ಯೋಗಪಡಿಸಿಕೊಳ್ಳ ಬೇಕು ಎಂದರು. ಸಮಾಜ ಕಲ್ಯಾಣ ಇಲಾಖೆ ಕಚೇರಿ ವ್ಯವಸ್ಥಾಪಕ ನಿರಂಜನ್ ಮೂರ್ತಿ, ನರಸಿಂಹರಾಜಪುರ ಟಿಎಪಿಸಿಎಂಎಸ್ ನ ಕಾರ್ಯದರ್ಶಿ ಕಾಂತರಾಜ್, ಪಿಸಿಎಆರ್.ಡಿ.ಬ್ಯಾಂಕಿನ ವ್ಯವಸ್ಥಾಪಕ ಪ್ರದ್ಯುಮ್ನ ಮಾಹಿತಿ ನೀಡಿದರು.ಸಭೆ ಅಧ್ಯಕ್ಷತೆಯನ್ನು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ವಹಿಸಿದ್ದರು. ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜಪ್ಪ, ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಡಿ.ಜಿ. ಮಂಜಪ್ಪಗೌಡ, ಪ್ರಧಾನ ಕಾರ್ಯದರ್ಶಿ ಎಚ್.ಕೆ.ನವೀನ್, ಖಜಾಂಚಿ ಬಿ.ಎಸ್.ಚೇತನ್, ಕಾರ್ಯಕಾರಿ ಸಮಿತಿ ಸದಸ್ಯರಾದ ವೈ.ಎಸ್.ಸುಬ್ರಹ್ಮಣ್ಯ, ಎಚ್.ಆರ್.ತಿಮ್ಮಯ್ಯ, ಎನ್.ಎಲ್.ತೀರ್ಥೇಶ್, ಎಚ್.ಎಂ.ನಾಗರಾಜ್, ಎನ್.ಪಿ.ರಮೇಶ್, ವೈ.ಎಸ್.ರವಿ, ಎನ್.ಎಸ್.ರಂಜಿತ್, ಎಂ.ವಿ.ಶ್ರೀನಿವಾಸ್ ಇದ್ದರು.
ಇದೇ ಸಂದರ್ಭದಲ್ಲಿ 2022–23ನೇ ಸಾಲಿನ ಆತ್ಮ ಯೋಜನೆಯಡಿ ಕೃಷಿ ಪ್ರಶಸ್ತಿ ಪಡೆದ ಬಿ.ವಿ.ದಿನೇಶ್ ಕುಮಾರ್ ಅವರಿಗೆ ಕೃಷಿ ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು.