ಗಂಗಾವತಿ:ಪೌರಸೇವಾ ನೌಕರರ ಸಮಸ್ಯೆ ಹಂತ ಹಂತವಾಗಿ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ ಎಂದು ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ನೂತನ ರಾಜ್ಯಾಧ್ಯಕ್ಷೆ ಶೈಲಾ ಕೆ.ಡಿ. ಹೇಳಿದರು.
ನಗರದ ಅಮರಜ್ಯೋತಿ ಕಲ್ಯಾಣ ಮಂಟಪದಲ್ಲಿ ಜರುಗಿದ ನೂತನ ಅಧ್ಯಕ್ಷರ ಅಧಿಕಾರ ಸ್ವೀಕರಿಸಿ ಮಾತನಾಡಿ, ಪೌರ ಸೇವಾ ನೌಕರರು ಎದುರಿಸುತ್ತಿರುವ ಜ್ವಲಂತ ಸಮಸ್ಯೆ ಅರಿವು ನನಗಿದೆ. ಎಲ್ಲ ಸಮಸ್ಯೆ ಅರ್ಥಮಾಡಿಕೊಂಡು ಹಂತ ಹಂತವಾಗಿ ಅವುಗಳನ್ನು ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ಸಂಸದ ರಾಜಶೇಖರ್ ಹಿಟ್ನಾಳ್ ಮಾತನಾಡಿ,ನಗರ, ಪಟ್ಟಣ ಸ್ವಚ್ಛವಾಗಿಟ್ಟು ಸಾಂಕ್ರಾಮಿಕ ರೋಗ ಹರಡದಂತೆ ತಡೆದು ಆರೋಗ್ಯಕ್ಕೆ ಅಡಿಪಾಯವಾಗಿದ್ದ ಪೌರಕಾರ್ಮಿಕರು ನೈರ್ಮಲ್ಯ ಸೈನಿಕರಾಗಿದ್ದಾರೆ ಎಂದರು.
ಪೌರ ಕಾರ್ಮಿಕರು ಸಮಾಜದ ಸ್ವಾಸ್ಯ್ಯ ಮತ್ತು ನೈರ್ಮಲ್ಯ ಕಾಪಾಡುವಲ್ಲಿ ಅನನ್ಯ ಮತ್ತು ಅವಶ್ಯಕ ಕೊಡುಗೆ ನೀಡುತ್ತಾರೆ. ಪ್ರತಿದಿನ ಬೆಳಗ್ಗೆ ಮಳೆ,ಚಳಿ, ಬಿಸಲೆನ್ನದೇ ಸ್ವಚ್ಛತೆ, ತ್ಯಾಜ್ಯನಿರ್ವಣೆ ಮತ್ತು ರಸ್ತೆಗಳ ನಿರ್ವಹಣೆ ಮೂಲಕ ಹರಡುವ ರೋಗ ತಡೆಗಟ್ಟಿ ಸಾರ್ವಜನಿಕರ ಆರೋಗ್ಯ ಕಾಪಾಡುತ್ತಾರೆ. ಕೋವಿಡ್ ಸಮಯದಲ್ಲಿ ತಮ್ಮ ಪ್ರಾಣ ಲೆಕ್ಕಿಸದೇ ಸಾರ್ವಜನಿಕರ ಪ್ರಾಣ ಉಳಿಸಿದ್ದಾರೆ. ಇವರ ಸೇವೆ ಸಮಾಜಕ್ಕೆ ಕನ್ನಡಿಯಾಗಿದೆ. ಇವರ ಕುಟುಂಬಗಳ ಕಲ್ಯಾಣಕ್ಕಾಗಿ ಸರ್ಕಾರ ಇವರೆಲ್ಲ ಬೇಡಿಕೆ ಗಂಭೀರವಾಗಿ ಪರಿಗಣಿಸಿ ತ್ವರಿತಗತಿಯಲ್ಲಿ ಈಡೇರಿಸಬೇಕಾಗಿದೆ ಎಂದರು.ಈ ವೇಳೆ ಗಜಾನನ ನಾಯಕ, ಆರೋಗ್ಯ ನೀರಿಕ್ಷಕ ನಾಗರಾಜ್, ವ್ಯವಸ್ಥಾಪಕ ಷಣ್ಮುಖ, ತಾಲೂಕಾಧ್ಯಕ್ಷ ವಹೀದ್ ಖಾನ್, ರಮೇಶ, ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರಗಡಪ್ಪ ಹುಲಿಹೈದರ್, ಜಂಟಿ ಕಾರ್ಯದರ್ಶಿ ಲಾಲಸಾಬ್ ಎಂ.ಮನಿಯಾರ್, ಮಹಿಬೂಬು ಪಾಷಾ,ರಾಮಣ್ಣ ಕಳ್ಳಿಮನಿ ಮತ್ತು ಸಂಘದ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.