ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜೀವನದಲ್ಲಿ ನಿರ್ದಿಷ್ಟ ಗುರಿ ಉದ್ದೇಶ ಇದ್ದರೆ ನಮ್ಮಲ್ಲಿರುವ ಕೊರತೆಗಳು ಗೌಣವಾಗುತ್ತವೆ ಎಂದು ಚಾಣಕ್ಯ ವಿಶ್ವ ವಿದ್ಯಾಲಯದ ಕುಲಾಧಿಪತಿ, ಪದ್ಮಶ್ರೀ ಪುರಸ್ಕೃತ ಡಾ.ಎಂ.ಕೆ. ಶ್ರೀಧರ್ ಹೇಳಿದರು.ಇಲ್ಲಿನ ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಶನ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಯಾವುದೇ ಪ್ರಶಸ್ತಿ ಬಂದಾಗ ಅದು ನನಗೆ ಬಂದಿತು ಎಂದುಕೊಳ್ಳುವುದು ಮೂರ್ಖತನ, ಜೀವನದಲ್ಲಿ ಆದರ್ಶ, ಗುರಿ ಬೇಕು. ಅದರ ಜೊತೆ ಪ್ರಯತ್ನ ವೂ ಅವಶ್ಯಕ ಎಂದರು.
ಈ ಅಭಿನಂದನೆ ಸ್ವೀಕರಿಸುತ್ತಿರುವುದು ನೋವು ತಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಕೆಲಸಗಳು ಯಾರೋ ಒಬ್ಬರಿಂದ ಆಗಿಲ್ಲ, ಹಲವರ ಶ್ರಮದಿಂದ ಅವು ಆಗಿವೆ. ಆದರೆ, ಪ್ರಶಸ್ತಿ ಮಾತ್ರ ವ್ಯಕ್ತಿಗೆ ಸಿಕ್ಕಿದೆ. ತಾವು ಪದ್ಮಶ್ರೀ ಸ್ವೀಕರಿಸಲು ತೆರಳಿದ ವೇಳೆ ಪ್ರಶಸ್ತಿ ಪಡೆಯಲು ಬಂದಿದ್ದ ಇತರರ ಮುಂದೆ ನನ್ನ ಸಾಧನೆ ಏನೂ ಅಲ್ಲ ಎನ್ನಿಸಿತು ಎಂದರು.ಚಳವಳಿಯ ಮೂಲಕ ಆರ್ಎಸ್ಎಸ್ ಮತ್ತು ಎಬಿವಿಪಿಯ ಸಂಪರ್ಕಕ್ಕೆ ಬಂದೆ. ಈ ಎರಡೂ ಸಂಘಟನೆಗಳು ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ವಿಚಾರಧಾರೆಯ ಮೇಲೆ ಕೆಲಸ ಮಾಡಲು ಪ್ರೇರಣೆ ನೀಡಿದವು. ಇದು ವ್ಯಕ್ತಿಯೊಬ್ಬನಿಂದ ಆದ ಕೆಲಸವಲ್ಲ, ಆ ವ್ಯಕ್ತಿ ಈ ಸಾಧನೆ ಮಾಡಲು ಬಾಲ್ಯದಿಂದ ಸಹಕರಿಸಿದ ಪೋಷಕರು, ಶಿಕ್ಷಕರು, ಬಂಧುಗಳು, ಸ್ನೇಹಿತರು ಕಾರಣ. ಜೀವನದಲ್ಲಿ ನನಗೆ ಮಾರ್ಗದರ್ಶನ ಮಾಡಿದ ಎಲ್ಲರಿಗೂ, ಸಂಘಟನೆಗಳಿಗೂ ಧನ್ಯವಾದ. ಪ್ರತಿಯೊಬ್ಬರಲ್ಲೂ ಒಳ್ಳೆಯ ಗುಣವಿದೆ. ಕೆಟ್ಟ ವ್ಯಕ್ತಿಯಲ್ಲಿನ ಒಳ್ಳೆ ಗುಣವನ್ನು ನಾವು ಗುರುತಿಸಬೇಕು. ಆಗ ಬದಲಾವಣೆ ಸಾಧ್ಯ ಎಂದರು.
ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ, ಈಗ ಮೊದಲಿನಂತೆ ಪದ್ಮ ಪ್ರಶಸ್ತಿಯನ್ನು ಹುಡುಕಿಕೊಂಡು ಹೋಗಬೇಕಿಲ್ಲ. ಅದೇ ಈಗ ಅರ್ಹರನ್ನು ಹುಡುಕಿಕೊಂಡು ಬರುತ್ತಿದೆ. ಅದಕ್ಕೆ ಎಂ.ಕೆ.ಶ್ರೀಧರ್ ಉದಾಹರಣೆ. ಸ್ವಾತಂತ್ರ್ಯ ಬಂದಾಗಿನಿಂದ ನಮ್ಮ ಮಕ್ಕಳಿಗೆ ಏನು ಹೇಳಿಕೊಡಬೇಕು ಎಂಬ ಬಗ್ಗೆ ಚರ್ಚೆಗಳು ನಿರಂತರವಾಗಿ ನಡೆಯುತ್ತಲೆ ಬಂದಿವೆ. ಮಕ್ಕಳಿಗೆ ನೈತಿಕ ಶಿಕ್ಷಣದ ಅವಶ್ಯಕತೆ ಇದೆ. ಶೈಕ್ಷಣಿಕ ಕ್ರಾಂತಿ ಆಗಬೇಕು ಎಂದರು.ಶಶಿಧರ್ ಭೂಪಾಳಂ ಅಧ್ಯಕ್ಷತೆ ವಹಿಸಿದ್ದರು. ಧರ್ಮಪ್ರಸಾದ್ ಪ್ರಾಸ್ತಾವಿಕ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಮಾಜಿ ಸದಸ್ಯ ಎಸ್.ರುದ್ರೇಗೌಡ, ನಿವೃತ್ತ ಪ್ರಾಧ್ಯಾಪಕ ಪ್ರೊ.ಜೆ.ಎಸ್. ಸದಾನಂದ, ಎ.ಜೆ.ರಾಮಚಂದ್ರ, ಡಾ.ರವಿಕಿರಣ್, ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರವೀಣ್ ಇದ್ದರು.