ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಬಿಜೆಪಿ, ಹಿಂದೂಪರ ಸಂಘಟನೆಗಳ ಮುಖಂಡರಾಗಿರುವ 10 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ.ಒಂದೂವರೆ ವರ್ಷದ ಹಿಂದಿನ ಪ್ರಕರಣದ ವಿಚಾರಣೆಗೆ ಈಗ ನೋಟಿಸ್ ನೀಡಲಾಗಿದೆ. ತಹಸೀಲ್ದಾರ್ ಕೋರ್ಟ್ ನಿರ್ದೇಶನದಂತೆ ಆರೋಪಿಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.2022ರ ಆಗಸ್ಟ್ನಲ್ಲಿ ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ, ಮಳೆಹಾನಿ ಪ್ರದೇಶಗಳ ವೀಕ್ಷಣೆಗೆ ಕೊಡಗಿಗೆ ಆಗಮಿಸಿದ್ದ ಸಂದರ್ಭ ಅವರ ಕಾರಿಗೆ ಮೊಟ್ಟೆ ಎಸೆಯಲಾಗಿತ್ತು. ಇದೀಗ ಯಾವುದೇ ಗಣ್ಯವ್ಯಕ್ತಿ ಬಾರದಿದ್ದರೂ ವಿಚಾರಣೆಗೆ ಬರುವಂತೆ ಪ್ರಕರಣದ ಆರೋಪಿಗಳಿಗೆ ನೋಟಿಸ್ ನೀಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.ಜ.25ಕ್ಕೆ ಕೊಡಗಿಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದು ಹೋಗಿದ್ದಾರೆ. ಆ ಸಂದರ್ಭ ನೀವು ಗಲಾಟೆ, ದೊಂಬಿ ಏಳಿಸಬಹುದು. ಯಾರಿಗಾದರೂ ಪ್ರಾಣ ಹಾನಿ ಮಾಡಬಹುದು. ಹೀಗಾಗಿ ಕೋರ್ಟ್ ನಿರ್ದೇಶನದಂತೆ ನೀವು ವಿಚಾರಣೆಗೆ ಆಗಮಿಸಬೇಕು. ಸಿಆರ್ಪಿಸಿ ಸೆಕ್ಷನ್ 107 ಅಡಿಯಲ್ಲಿ ಮುಚ್ಚಳಿಕೆ ಬರೆಸಿಕೊಳ್ಳಲು ಎಂದು ತಹಸೀಲ್ದಾರ್ ಕೋರ್ಟ್ ನೋಟಿಸ್ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದು ಹೋಗಿ 6 ದಿನಗಳ ಬಳಿಕ ನೊಟೀಸ್ ಕೊಡಲಾಗಿದೆ. ತಹಸೀಲ್ದಾರ್ ಕೋರ್ಟ್ ನೋಟಿಸ್ಗೆ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದು ದ್ವೇಷ ರಾಜಕಾರಣ. ಬಿಜೆಪಿ, ಹಿಂದೂ ಸಂಘಟನೆಗಳ ಕಾರ್ಯಕರ್ತರ ಸ್ಥೈರ್ಯ ಕುಗ್ಗಿಸಲು ಯತ್ನ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಬಂದು ಹೋಗಿ ವಾರ ಕಳೆದಿದೆ. ಆದರೆ ಈಗ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿರುವುದು ದ್ವೇಷವಲ್ಲವೆ. ಇದಕ್ಕೆ ಸರ್ಕಾರಕ್ಕೆ ತಕ್ಕ ಉತ್ತರ ಕೊಡುತ್ತೇವೆ ಎಂದು ಬಿಜೆಪಿ ವಕ್ತಾರ ಮಹೇಶ್ ಜೈನಿ, ನಗರಸಭೆ ಸದಸ್ಯ ಉಮೇಶ್ ಸುಬ್ರಹ್ಮಣಿ ಆಕ್ರೋಶ ಹೊರ ಹಾಕಿದ್ದಾರೆ.